ಬಿಡುಗಡೆಗೂ ಮುನ್ನ 'ದೇವರ' ಚಿತ್ರಕ್ಕೆ ಸೋಲಿನ ಭೀತಿ; ಕಾರಣ ನಿರ್ದೇಶಕ ರಾಜಮೌಳಿ!
ಕಾಗೆ ಕೂರೋದಕ್ಕೂ, ಕೊಂಬೆ ಮುರಿಯೋದಕ್ಕೂ ಒಂದೇ ಆಯ್ತಂತೆ ಎನ್ನುವ ಮಾತಿದೆ. ಅದೇ ರೀತಿ ಚಿತ್ರರಂಗದಲ್ಲಿ ಸಾಕಷ್ಟು ನಂಬಿಕೆಗಳಿವೆ. ಕೆಲವು ಘಟನೆಗಳು ಕಾಕತಾಳೀಯ ಎನಿಸದೇ ಇರದು. ನೂರಾರು ಕೋಟಿ ವ್ಯವಹಾರ ನಡೆಯುವ ಚಿತ್ರರಂಗದಲ್ಲಿ ನಾನಾ ರೀತಿಯ ನಂಬಿಕೆಗಳಿವೆ. ನಟ, ನಟಿಯರು ನಿರ್ಮಾಪಕರು ಕೆಲ ವಿಚಾರಗಳನ್ನು ನಂಬಿಕೊಂಡು ಬರುತ್ತಿದ್ದಾರೆ.
ಇದೇ ಅಕ್ಷರದ ಸಿನಿಮಾ ಟೈಟಲ್ ಇಡಬೇಕು, ಇದೇ ದಿನ ಮುಹೂರ್ತ ಮಾಡಿದರೆ, ಆ ದಿನ ಸಿನಿಮಾ ರಿಲೀಸ್ ಮಾಡಿದರೆ ಹಿಟ್ ಆಗುತ್ತದೆ. ಹೀಗೆ ಏನೇನೋ ನಂಬಿಕೆಗಳು. ಅವರವರ ನಂಬಿಕೆ ಅವರದ್ದು. ತೆಲುಗು ನಟ ಜ್ಯೂ. ಎನ್ಟಿಆರ್ ನಟನೆಯ 'ದೇವರ' ಸಿನಿಮಾ ಬಿಡುಗಡೆ ಸಿದ್ಧವಾಗ್ತಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಬಂದು ಸದ್ದು ಮಾಡ್ತಿದೆ.

ಕೊರಟಾಲ ಶಿವ 'ದೇವರ' ಚಿತ್ರ ಕಟ್ಟಿಕೊಟ್ಟಿದ್ದಾರೆ. ಸೈಫ್ ಅಲಿಖಾನ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ತಾರಕ್ ತಂದೆ ಮಗನಾಗಿ ಡಬಲ್ ರೋಲ್ನಲ್ಲಿ ಕಮಾಲ್ ಮಾಡೋಕೆ ಬರ್ತಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಸಿನಿಮಾದಲ್ಲಿದೆ. ಈಗಾಗಲೇ ಸೆನ್ಸಾರ್ ಕೆಲಸಗಳನ್ನು ಮುಗಿಸಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇಂತಹ ಸಮಯದಲ್ಲಿ ತಾರಕ್ ಅಭಿಮಾನಿಗಳಿಗೆ ಭಯ ಶುರುವಾಗಿದೆ.
'ದೇವರ' ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಅಷ್ಟು ಬೇಗ ಫ್ಲಾಪ್ ಆಗುತ್ತಾ? ಎನ್ನುವ ಆತಂಕ ಕೆಲವರನ್ನು ಕಾಡುತ್ತಿದೆ. ಇದೇ ವಿಚಾರ ಜ್ಯೂ. ಎನ್ಟಿಆರ್ ಅಭಿಮಾನಿಗಳಿಗೆ ಭೀತಿ ತಂದಿದೆ. ಅಂದಹಾಗೆ ರಾಜಮೌಳಿ ಶಾಪದಿಂದ 'ದೇವರ' ಸಿನಿಮಾ ಸೋಲುತ್ತದೆ ಎನ್ನುವುದು ಈ ಚರ್ಚೆಯ ಸಾರಾಂಶ. ಅರೇ, ರಾಜಮೌಳಿ ಯಾವ ಶಾಪ ಕೊಟ್ಟಿದ್ದಾರೆ? ಏನಿದು ಚರ್ಚೆ? ಎನ್ನುವುದನ್ನು ಮುಂದೆ ಓದಿ.
ರಾಜಮೌಳಿ ನಿರ್ದೇಶನದ ಸಿನಿಮಾಗಳೆಲ್ಲಾ ಹಿಟ್ ಆಗಿದೆ. ಸ್ಟಾರ್ ನಟರು ಜಕ್ಕಣ್ಣನ ನಿರ್ದೇಶನದಲ್ಲಿ ನಟಿಸಿ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಆದರೆ ಬಳಿಕ ನಟಿಸಿದ ಸಿನಿಮಾದಲ್ಲಿ ಸೋಲುಂಡಿದ್ದಾರೆ. ಇದೇ ಲೆಕ್ಕಾಚಾರ ಇದೀಗ 'ದೇವರ' ಸಿನಿಮಾ ವಿಚಾರದಲ್ಲಿ ಶುರುವಾಗಿದೆ. ರಾಜಮೌಳಿ ಚಿತ್ರದಲ್ಲಿ ನಟಿಸಿ ಗೆದ್ದ ನಟನ ಮುಂದಿನ ಸಿನಿಮಾ ಸೋಲುತ್ತದೆ ಎನ್ನುವ ವಿಚಿತ್ರ ನಂಬಿಕೆ ಹುಟ್ಟಿಕೊಂಡಿದೆ.

ಇಂತಾದೊಂದು ಮೂಢನಂಬಿಕೆ ಹುಟ್ಟಿಕೊಳ್ಳಲು ಸಾಕಷ್ಟು ಉದಾಹರಣೆಗಳು ಕಣ್ಣಮುಂದಿದೆ. 'ಛತ್ರಪತಿ' ಬೆನ್ನಲ್ಲೇ ಪ್ರಭಾಸ್ ನಟಿಸಿದ 'ಪೌರ್ಣಮಿ' ಸಿನಿಮಾ ಸೋತಿತ್ತು. 'ವಿಕ್ರಮಾರ್ಕುಡು' ಬೆನ್ನಲ್ಲೇ ರವಿತೇಜಾ ನಟಿಸಿದ 'ಖತರ್ನಾಕ್' ಸಿನಿಮಾ ಫ್ಲಾಪ್ ಆಗಿತ್ತು. 'ಮಗಧೀರ' ನಂತರ ರಾಮ್ಚರಣ್ ನಟಿಸಿದ 'ಆರೆಂಜ್' ಹೇಳ ಹೆಸರಿಲ್ಲದಂತೆ ಹೋಯಿತು.
'ಸಿಂಹಾದ್ರಿ' ಬಳಿಕ ತಾರಕ್ ನಟಿಸಿದ್ದ 'ಆಂಧ್ರಾವಾಲ', 'ಯಮದೊಂಗ' ನಂತರ 'ಕಂತ್ರಿ' ಸಿನಿಮಾಗಳು ಬಂದು ನೆಲ ಕಚ್ಚಿದ್ದವು. ಇನ್ನು ಪ್ರಭಾಸ್ 'ಬಾಹುಬಲಿ' ಸರಣಿ ಬಳಿಕ 'ಸಾಹೋ' ಸಿನಿಮಾ ಮಾಡಿ ಸೋಲುಂಡರು. ಹೀಗೆ ಮೌಳಿ ಚಿತ್ರದಲ್ಲಿ ನಟಿಸಿದ ನಟನ ಮುಂದಿನ ಸಿನಿಮಾ ಸೋತಿದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕೊನೆಯದಾಗಿ 'RRR' ಚಿತ್ರದಲ್ಲಿ ತಾರಕ್ ನಟಿಸಿದ್ದರು. ಇದೀಗ 'ದೇವರ' ತೆರೆಗೆ ಬರ್ತಿದೆ. ಹಾಗಾಗಿ ಇಂತಾದೊಂದು ವಿಚಿತ್ರ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಒಳ್ಳೆ ಸಿನಿಮಾ ಮಾಡಿದ್ರೆ ಗೆದ್ದೇ ಗೆಲ್ಲುತ್ತದೆ. ಒಂದು ಸಿನಿಮಾ ಗೆಲುವಿಗೆ, ಸೋಲಿಗೆ ನಾನಾ ಕಾರಣಗಳಿರುತ್ತವೆ. ರಾಜಮೌಳಿ ಚಿತ್ರದಲ್ಲಿ ನಟಿಸಿದ್ದಕ್ಕೆ ಮುಂದಿನ ಸಿನಿಮಾ ಸೋಲುತ್ತದೆ ಎಂದು ಹೇಳುವುದು ತಪ್ಪು. ಇಂತಹ ವಿಚಿತ್ರ ನಂಬಿಕೆಯ ಚರ್ಚೆಯನ್ನು ಮೀರಿ 'ದೇವರ' ಸಿನಿಮಾ ಗೆಲ್ಲುವ ಭರವಸೆ ಮೂಡಿಸಿದೆ. ಸೆಪ್ಟೆಂಬರ್ 27ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ದೊಡ್ಡಮಟ್ಟದಲ್ಲಿ 'ದೇವರ' ಸಿನಿಮಾ ನಿರ್ಮಾಣವಾಗಿದೆ. ತಾರಕ್ ಡಬಲ್ ಆಕ್ಟಿಂಗ್ ಜೊತೆಗೆ ಸೈಫ್ ಅಲಿಖಾನ್ ಆರ್ಭಟ ಚಿತ್ರದಲ್ಲಿದೆ. ಸೈಫ್ ಪಾತ್ರಕ್ಕೆ ಬಹಳ ಮಹತ್ವ ಇದ್ದು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಸ್ಟ್ರಾಂಗ್ ಆಗಿ ಇರುವುದರಿಂದ ನಾಯಕ- ಖಳನಾಯಕನ ನಡುವಿನ ಕಾದಾಟ ನೋಡುಗರಿಗೆ ಸಖತ್ ಥ್ರಿಲ್ ಕೊಡುವ ಸಾಧ್ಯತೆಯಿದೆ.


Click it and Unblock the Notifications











