'ರಾಜಮೌಳಿ ಜೊತೆ ಕೆಲಸ ಮಾಡಿದ್ರೆ ಖ್ಯಾತಿ ಸಿಗಲ್ಲ' ಎಂದ ಫೈಟ್ ಮಾಸ್ಟರ್ಸ್
ಎಸ್ಎಸ್ ರಾಜಮೌಳಿ ಜೊತೆ ಕೆಲಸ ಮಾಡಬೇಕು ಎಂದು ಕಾಯುತ್ತಿರುವ ಅದೇಷ್ಟೋ ತಂತ್ರಜ್ಞರಿದ್ದಾರೆ. ರಾಜಮೌಳಿ ತಂಡದಲ್ಲಿ ಸಣ್ಣದೊಂದು ಕೆಲಸ ಸಿಕ್ಕರೆ ಸಾಕು, ಅವರ ಚಿತ್ರದಲ್ಲಿ ಒಂದೆರೆಡು ದಿನ ಕೆಲಸ ಮಾಡಲು ಅವಕಾಶ ಸಿಕ್ಕರೂ ಸಾಕು ಎಂದು ನೂರಾರು ಮಂದಿ ಕನಸು ಕಾಣ್ತಿದ್ದಾರೆ.
ಆದರೆ, ಭಾರತೀಯ ಸಿನಿಮಾ ಪ್ರಪಂಚದಲ್ಲಿ ಅದಾಗಲೇ ದೊಡ್ಡ ಹೆಸರು ಮಾಡಿರುವ ಸಾಹಸ ನಿರ್ದೇಶಕರು 'ರಾಜಮೌಳಿ ಜೊತೆ ಕೆಲಸ ಮಾಡಿದ್ರೆ ನಮಗೆ ಖ್ಯಾತಿ ಸಿಗಲ್ಲ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅದಕ್ಕಾಗಿಯೇ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಕೈಬಿಡಬೇಕಾಯಿತು ಎಂದು ಫೈಟ್ ಮಾಸ್ಟರ್ ರಾಮ್-ಲಕ್ಷ್ಮಣ್ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ತೆಲುಗಿನ ಮಾಧ್ಯಮಗಳು ವರದಿ ಮಾಡಿದೆ. ಮುಂದೆ ಓದಿ...

ರಾಮ್-ಲಕ್ಷ್ಮಣ್ ಜೋಡಿ
ತೆಲುಗು ಸಿನಿಮಾ ಲೋಕದಲ್ಲಿ ರಾಮ್-ಲಕ್ಷ್ಮಣ್ ಹೆಸರು ಬಹಳ ದೊಡ್ಡದು. ಅತ್ಯುತ್ತಮ ಸಾಹಸ ನಿರ್ದೇಶಕರು ಎನ್ನುವುದರ ಜೊತೆಗೆ ಒಳ್ಳೆಯ ವ್ಯಕ್ತಿಗಳು ಎನ್ನುವ ಹೆಗ್ಗಳಿಕೆಯೂ ಪಡೆದುಕೊಂಡಿದ್ದಾರೆ. ಬಹುತೇಕ ತೆಲುಗಿನ ಎಲ್ಲಾ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ವಿಲನ್ ಆಗಲಿ ಹೀರೋ ಆಗಲಿ ಅವರಿಗೆ ತಕ್ಕಂತೆ ಫೈಟ್ ಕೊರಿಯೋಗ್ರಫಿ ಮಾಡುವ ಚತುರರು. ಹೆಚ್ಚು ಬೇಡಿಕೆ ಹೊಂದಿರುವವ ಇವರು ಸಮಾಜಮುಖಿ ಕಾರ್ಯದಲ್ಲೂ ತೊಡಗಿಕೊಂಡಿರುವುದು ಶ್ಲಾಘನೀಯ.

ಆರ್ಆರ್ಆರ್ ಬೇಡ ಎಂದು ಕೈಬಿಟ್ಟರು
ಇಂದಿನ ಟ್ರೆಂಡ್ ನೋಡಿದ್ರೆ ಪ್ಯಾನ್ ಇಂಡಿಯಾ ಚಿತ್ರಗಳಿಗೆ ಕೆಲಸ ಮಾಡ್ಬೇಕು ಎನ್ನುವುದು ಎಲ್ಲಾ ತಂತ್ರಜ್ಞರ ಆಸೆ. ಅದರಲ್ಲೂ ರಾಜಮೌಳಿ ಅಂತಹ ಯಶಸ್ವಿ ನಿರ್ದೇಶಕನ ಸಿನಿಮಾ ಅಂದ್ರೆ ಯಾರೂ ದೂರ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ಅವಕಾಶ ಬಂದಾಗ ಕಾರಣಾಂತರಗಳಿಂದ ಈ ಚಿತ್ರ ಕೈಬಿಟ್ಟರಂತೆ ರಾಮ್-ಲಕ್ಷ್ಮಣ್.

ರಾಜಮೌಳಿ ಜೊತೆ ಕೆಲಸ ಮಾಡಿದ್ರೆ ಖ್ಯಾತಿ ಸಿಗಲ್ಲ
''ರಾಜಮೌಳಿ ಜೊತೆ ಕೆಲಸ ಮಾಡಿದ್ರೆ ಅಷ್ಟಾಗಿ ಕ್ರೆಡಿಟ್ ಸಿಗಲ್ಲ. ಏಕಂದ್ರೆ ಪ್ರತಿಯೊಂದು ದೃಶ್ಯದಲ್ಲೂ ಆತನ ಆಲೋಚನೆ ಇರುತ್ತದೆ. ಸೀನ್ಗೆ ತಕ್ಕಂತೆ ನಿರ್ದೇಶನ ಮಾಡಿಸುತ್ತಾರೆ. ಹಾಗಾಗಿ, ಫೈಟ್ ಮಾಸ್ಟರ್ಗಿಂತ ಅವರಿಗೆ ಹೆಚ್ಚು ಕ್ರೆಡಿಟ್ ಸಿಗಬೇಕಾಗುತ್ತದೆ. ಆ ವಿಚಾರದಲ್ಲಿ ಅವರು ಬಹಳ ಕಷ್ಟ ಪಡ್ತಾರೆ'' ಎಂದು ರಾಮ್-ಲಕ್ಷ್ಮಣ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಾಜಮೌಳಿ ತೊಂದರೆ ಕೊಡಲ್ಲ
''ರಾಜಮೌಳಿ ಜೊತೆ ಈ ಮುಂಚೆಯೇ ಕೆಲಸ ಮಾಡಿದ್ದೇವೆ. 'ವಿಕ್ರಮಾರ್ಕಡು' ಸಿನಿಮಾದಲ್ಲಿ ಕೆಲಸ ಮಾಡಿದ್ವಿ. ಈ ಚಿತ್ರದಲ್ಲಿ ದಿ ಬೆಸ್ಟ್ ಎನ್ನುವಂತೆ ಫೈಟ್ ಕಂಪೋಸ್ ಮಾಡಿದ್ವಿ. ರಾಜಮೌಳಿ ದೊಡ್ಡ ಚಿತ್ರಗಳನ್ನು ಮಾಡುವ ಹಿನ್ನೆಲೆ ಅದಕ್ಕೆ ತಕ್ಕಂತೆ ತಂತ್ರಜ್ಞರನ್ನು ಸೇರಿಸಿಕೊಳ್ಳುತ್ತಾರೆ. ಯಾರಾದರೂ ಬ್ಯುಸಿ ಇದ್ದರೆ ಅವರನ್ನು ತೊಂದರೆ ಮಾಡುವುದಿಲ್ಲ'' ಎಂದು ರಾಮ್-ಲಕ್ಷ್ಮಣ್ ತಿಳಿಸಿದ್ದಾರೆ.
Recommended Video

ಗಾಯದ ಸಮಸ್ಯೆಯಿಂದ ಆಗಲಿಲ್ಲ
''ಸಾಮಾನ್ಯವಾಗಿ ದೊಡ್ಡ ಸಿನಿಮಾಗಳನ್ನು ಮಾಡಬೇಕಾದರೆ 50ದಿನಕ್ಕಿಂತ ಹೆಚ್ಚು ಸಮಯ ಮೀಸಲಿಡಬೇಕಾಗುತ್ತದೆ. ಒಂದು ಚಿತ್ರಕ್ಕಾಗಿ ಉಳಿದ ನಾಲ್ಕೈದು ಸಿನಿಮಾಗಳನ್ನು ಬಿಡಬೇಕಾಗುತ್ತದೆ. ಆರ್ಆರ್ಆರ್ ಸಿನಿಮಾ ಸಹ ನಾವು ಮಾಡಬೇಕು ಅಂದುಕೊಂಡಿದ್ವಿ. ಆದರೆ, ಅದೇ ಸಮಯದಲ್ಲಿ ಗಾಯದ ಸಮಸ್ಯೆ ಉಂಟಾಯಿತು. ಆಗ ಡೇಟ್ ಹೊಂದಾಣಿಕೆ ಮಾಡಲು ಸಾಧ್ಯವಾಗಲಿಲ್ಲ'' ಎಂದು ರಾಮ್-ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ.


Click it and Unblock the Notifications











