Vijay Devarakonda: ಅಭಿಮಾನಿಗಳಿಗೆ ವಿಜಯ್ 1 ಕೋಟಿ ರೂ. ಸಹಾಯ: 8 ಕೋಟಿ ರೂ. ನಷ್ಟ ಕೇಳಿದ ನಿರ್ಮಾಪಕ
ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಸಿನಿಮಾ ಮಿಶ್ರಪ್ರತಿಕ್ರಿಯೆ ನಡುವೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್ನಿಂದ ವಿಜಯ್ ಖುಷಿಯಾಗಿದ್ದಾರೆ. ವಿಶಾಖ ಪಟ್ಟಣಂನಲ್ಲಿ ಚಿತ್ರದ ಸಕ್ಸಸ್ ಸಂಭ್ರಮಾಚರಣೆ ನಡೀತು. ಈ ವೇಳೆ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ತಮ್ಮ ಸಂಭಾವನೆಯಿಂದ 100 ಕುಟುಂಬಗಳಿಗೆ 1 ಕೋಟಿ ರೂ. ಹಂಚುವುದಾಗಿ ಘೋಷಿಸಿದ್ದರು.
'ಲೈಗರ್' ಸೋಲಿನಿಂದ ಕಂಗೆಟ್ಟಿದ್ದ ವಿಜಯ್ ದೇರವಕೊಂಡಗೆ 'ಖುಷಿ' ಸಿನಿಮಾ ಗೆಲುವಿನ ಖುಷಿ ತಂದಿದೆ. ಇದೇ ಸಂದರ್ಭದಲ್ಲಿ ಅಭಿಮಾನಿ ಕುಟುಂಬಗಳಿಗೆ 1 ಕೋಟಿ ರೂ. ಹಂಚುವುದಾಗಿ ಹೇಳಿದ ಆತನ ಹೃದಯ ವೈಶಾಲ್ಯತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ಹೊಸ ರಗಳೆ ಶುರುವಾಗಿದೆ. ನಿನ್ನ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ನಂಬಿ 8 ಕೋಟಿ ನಷ್ಟವಾಗಿದೆ. ಅದನ್ನು ಭರಿಸಿಕೊಡು ಎಂದು ವಿತರಕರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

3 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ವಿಜಯ್ ದೇವರಕೊಂಡ ನಟನೆಯ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಸೋಲುಂಡಿತ್ತು. ಆದರೆ ಆ ವಿಚಾರವನ್ನು ವಿತರಕರು ಈಗ ಪ್ರಸ್ತಾಪಿಸಿರುವುದು ಭಾರೀ ಚರ್ಚೆ ಹುಟ್ಟುಹಾಕಿದೆ. "ಡಿಯರ್ ವಿಜಯ್ ದೇವರಕೊಂಡ, 'ವರ್ಲ್ಡ್ ಫೇಮಸ್ ಲವರ್' ಚಿತ್ರವನ್ನು ವಿತರಿಸಿ 8 ಕೋಟಿ ರೂ. ನಷ್ಟವಾಯಿತು. ಯಾರೂ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಈಗ ನಿಮ್ಮ ದೊಡ್ಡ ಹೃದಯದಿಂದ ಅಭಿಮಾನಿಗಳ ಕುಟುಂಬಗಳಿಗೆ 1 ಕೋಟಿ ರೂ. ಸಹಾಯ ಮಾಡುತ್ತಿದ್ದೀರಾ. ದಯವಿಟ್ಟು ನಮ್ಮನ್ನು, ನಮ್ಮ ಪ್ರದರ್ಶಕರು ಮತ್ತು ವಿತರಕರ ಕುಟುಂಬಗಳನ್ನು ರಕ್ಷಿಸಿ" ಎಂದು ಅಭಿಷೇಕ್ ಪಿಕ್ಚರ್ಸ್ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಜಯ್ ದೇವರಕೊಂಡ ಅಭಿಮಾನಿಗಳು ವಿತರಕ ಅಭಿಷೇಕ್ ನಾಮಗೆ ಸರಿಯಾಗಿ ಕ್ಲಾಸ್ ತೆಗದುಕೊಳ್ಳುತ್ತಿದ್ದಾರೆ. "ನಿನಗೆ ನಷ್ಟವಾಯಿತು ಎಂದು ಈಗ ಕೇಳುತ್ತಿದ್ದೀಯಾ. ಲಾಭ ಬಂದಿದ್ದರೆ ವಿಜಯ್ನ ಕರೆದು ಕೊಡ್ತಿದ್ದಾ?" ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಇದೇ ಮಾತನ್ನು ಈಗಿನ ದೊಡ್ಡ ಹೀರೊಗಳ ಮುಂದಿಡಲು ಧೈರ್ಯ ಇದ್ಯಾ? ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಯಾರು 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಕೊಂಡುಕೊಳ್ಳಲು ನಿಮಗೆ ಹೇಳಿದ್ರು? 'ಅರ್ಜುನ್ ರೆಡ್ಡಿ' ಎಷ್ಟಕ್ಕೆ ಕೊಂಡುಕೊಂಡಿದ್ರಿ? ಆಗ ಲಾಭ ಮಾಡಿಕೊಳ್ಳಲಿಲ್ಲವಾ? ಆಗ ವಿಜಯ್ನ ಹೊಗಳಿ ಅಟ್ಟಕ್ಕೇರಿಸಿದ್ದಿರಿ. ಈಗ ಅಭಿಮಾನಿಗಳಿಗಾಗಿ ಆತ ಸಹಾಯ ಮಾಡಲು ಮುಂದೆ ಬಂದರೆ ನೀವು ಕೇಳುತ್ತಿರುವುದು ಸರಿಯಲ್ಲ" ಎಂದು ಮತ್ತೊಬ್ಬರು ಹೇಳಿದ್ದಾರೆ.
'ವರ್ಲ್ಡ್ ಫೇಮಸ್ ಲವರ್' ಚಿತ್ರದಿಂದ ಅಭಿಷೇಕ್ ನಾಮಾಗೆ 8 ಕೋಟಿ ರೂ. ನಷ್ಟವಾಗಿತ್ತಂತೆ. ಸಿನಿಮಾ ನಷ್ಟ ಭರಿಸುವಂತೆ ಕೇಳಿದ್ದರಂತೆ. ನಷ್ಟ ಭರಿಸಲು ತಮಗೊಂದು ಸಿನಿಮಾ ಮಾಡಿಕೊಡುವಂತೆ ಕಾಲ್ಶೀಟ್ ಕೇಳಿದ್ದರಂತೆ. ಆದರೆ ಆಗ ವಿಜಯ್ ತಂಡ ಸದ್ಯಕ್ಕೆ ವಿಜಯ್ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದರಂತೆ. ಬಳಿಕ 'ಲೈಗರ್' ವಿಜಯ್ ನಟಿಸಿ ಸೋತಿದ್ದರು. ಅದಕ್ಕು ಮುನ್ನು ಫಿಕ್ಸ್ ಆಗಿದ್ದ 'ಖುಷಿ' ಸಿನಿಮಾ ರಿಲೀಸ್ ಆಗಿದೆ. ಈಗ ಕಾಲ್ಶೀಟ್ ಕೇಳಿದ್ರೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಟ್ವೀಟ್ ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿಬರ್ತಿದೆ.
ಶಿವ ನಿರ್ವಾಣ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ 'ಖುಷಿ' ಪ್ರೇಕ್ಷಕರ ಮನಗೆದ್ದಿದೆ. ಆದರೆ ಫಸ್ಟ್ ವೀಕೆಂಡ್ ನಂತರ ಸಿನಿಮಾ ಥಿಯೇಟರ್ಗಳಲ್ಲಿ ಕುಂಟುತ್ತಿದೆ. ಸದ್ಯ ಚಿತ್ರಕ್ಕೆ ಹಾಕಿದ್ದ ಬಂಡವಾಳ ವಾಪಸ್ ಬಂದಿದೆ ಎನ್ನಲಾಗುತ್ತಿದ್ದು ಮುಂದೆ ಸಿನಿಮಾ ಭವಿಷ್ಯ ಏನಾಗುತ್ತದೋ ಗೊತ್ತಿಲ್ಲ.


Click it and Unblock the Notifications











