ಆ ತೆಲುಗು ಸಿನ್ಮಾ ಸೀನ್ ನೋಡಿ 'KGF' ಚಿತ್ರಕ್ಕೆ ಕಥೆ ಬರೆದ್ರಾ ಪ್ರಶಾಂತ್ ನೀಲ್?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ಫೋಟೊ, ವೀಡಿಯೋ ವೈರಲ್ ಆಗುತ್ತೋ ಹೇಳೋಕ್ಕಾಗಲ್ಲ. ಇನ್ನು ಬೇರೆ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಹೊಸ ಸಿನಿಮಾಗಳನ್ನು ಮಾಡೋದು, ಕಥೆ ಮಾಡೋದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಆದರೆ ಅದನ್ನ ಸಾಕ್ಷಿ ಸಮೇತ ಈಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತೆರೆದಿಡುತ್ತಾರೆ.
ಸದ್ಯ ಪ್ರಶಾಂತ್ ನೀಲ್ ಮಾಡಿದ 'KGF' ಸಿನಿಮಾ ಬಗ್ಗೆ ಆ ಕಥೆ ಬಗ್ಗೆ ಫನ್ನಿ ವೀಡಿಯೋವೊಂದು ಹರಿದಾಡುತ್ತಿದೆ. ತೆಲುಗಿನ 'ನೇನಿಂತೆ' ಸಿನಿಮಾ ಕಾಮಿಡಿ ಸೀನ್ವೊಂದನ್ನು 'KGF' ಕಥೆಗೆ ಲಿಂಕ್ ಮಾಡಿ ಯಾರೋ ಮೀಮ್ ಮಾಡಿ ತೇಲಿ ಬಿಟ್ಟಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ 'ನೇನಿಂತೆ' ಸಿನಿಮಾ 2008ರಲ್ಲಿ ತೆರೆಗೆ ಬಂದಿತ್ತು.

'ನೇನಿಂತೆ' ಚಿತ್ರದಲ್ಲಿ ರವಿತೇಜಾ ಹೀರೊ ಆಗಿ ನಟಿಸಿದ್ದರು. ಸಿನಿಮಾ ನಿರ್ದೇಶಕ ಆಗಬೇಕು ಎಂದು ಕನಸು ಕಾಣುವ ಮಧ್ಯಮ ವರ್ಗದ ಕುಟುಂಬದ ಯುವಕನ ಕಥೆಯನ್ನು ಚಿತ್ರದಲ್ಲಿ ಪೂರಿ ಜಗನ್ನಾಥ್ ಕಟ್ಟಿಕೊಟ್ಟಿದ್ದಾರೆ. ಸುಬ್ಬಾರಾಜು ಸಿನಿಮಾ ಹೀರೊ ಮಲ್ಲಿಕ್ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಹಾಸ್ಯ ನಟ ವೇಣು ಮಾಧವ್ ಸಿನಿಮಾ ನಿರ್ದೇಶನ ಅವಕಾಶಕ್ಕಾಗಿ ಸ್ಟೂಡಿಯೋಗಳ ಸುತ್ತಾ ಸುತ್ತುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸನ್ನಿವೇಶವೊಂದರಲ್ಲಿ ಸೆಂಥಿಲ್(ವೇಣು ಮಾಧವ್) ಮಲ್ಲಿಕ್ಗೆ ಬಂದು ಕಥೆ ಹೇಳುವುದನ್ನು ನೋಡಬಹುದು. ಇದನ್ನು ತಮಾಷೆಯಾಗಿ ಪೂರಿ ಜಗನ್ನಾಥ್ ಚಿತ್ರದಲ್ಲಿ ತೋರಿಸಿದ್ದರು. ಹೀರೊ, ನಿರ್ದೇಶಕ ಆಗಬೇಕು ಎಂದು ಅವಕಾಶ ಕೇಳಿಕೊಂಡು ಚಿತ್ರರಂಗದಲ್ಲಿ ಓಡಾಡುವವರ ಬಗ್ಗೆ ವಿಡಂಬನಾತ್ಮಕವಾಗಿ ಈ ಸನ್ನಿವೇಶದಲ್ಲಿ ತೋರಿಸಲಾಗಿತ್ತು. ಆದರೆ ಮಲ್ಲಿಕ್ಗೆ ಸೆಂಥಿಲ್ ಹೇಳುವ ಕಥೆ 'KGF' ಚಿತ್ರಕ್ಕೆ ಸ್ಫೂರ್ತಿ ಎಂದು ಫನ್ನಿಯಾಗಿ ವಿಡಿಯೋ ವೈರಲ್ ಆಗತ್ತಿದೆ.
ಕಣ್ಣಿನಿಂದ ಜೂಮ್ ಹಾಕಿ ಬ್ಯಾಕ್ ಬಂದರೆ ಫಸ್ಟ್ ಶಾಟ್.. ಹೀರೋ ಚಪ್ಪಲಿ ಹೊಲೆಯುವವನು ಪಾಪ. ಇಂಟ್ರೊಡಕ್ಷನ್ ಅಲ್ಲಿ ಒಂದಷ್ಟು ರೈಲುಗಳು ಗಾಳಿಯಲ್ಲಿ ಮೇಲೆ ಹಾರುತ್ತವೆ. ಬಳಿಕ ಹೀರೊ ಬೆಂಜ್ ಕಾರ್ನಲ್ಲಿ ಬರ್ತಾನೆ. ಮನೆಗೆ ಬಂದು ನೋಡಿದ್ರೆ ತಾಯಿ ಹಾರ್ಟ್ ಹೋಲ್, ಮನಗೆ ಹೋಗಿ ಹೀರೋ ಹೀಗಾಯ್ತಾ ಅಂತ ಅಳುತ್ತಿರುತ್ತಾನೆ. ಹೀರೊಯಿನ್ ಕೋಟ್ಯಾಧಿಪತಿ ಮಗಳು. ಹೀರೊ ಅಳುತ್ತಿದ್ದಾಗ ಹೀರೊಯಿನ್ ಬಂದು ತಬ್ಬಿಕೊಳ್ಳುತ್ತಾಳೆ, ಕಟ್ ಮಾಡಿದ್ರೆ ಒಂದು ಹಾಡು" ಎಂದು ಕಥೆ ಹೇಳುವ ಸನ್ನಿವೇಶ ಅದು.
ಈ ಕಾಮಿಡಿ ಸೀನ್ಗೆ 'KGF' ಸನ್ನಿವೇಶಗಳನ್ನು ಮಿಕ್ಸ್ ಮಾಡಿ ಮೀಮ್ ಮಾಡಲಾಗಿದೆ. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅರೇ, ಪ್ರಶಾಂತ್ ನೀಲ್ ಈ ಸೀನ್ ನೋಡಿ ಸ್ಫೂರ್ತಿಗೊಂಡು 'KGF' ಕಥೆ ಮಾಡಿದ್ರಾ? ಪೂರಿ ಜಗನ್ನಾಥ್ ತಮಾಷೆಯಾಗಿ ತೋರಿಸಿದ್ದನ್ನು ನೀಲ್ ಗಂಭೀರವಾಗಿ ತೆರೆಗೆ ತಂದ್ರಾ? ಪೂರಿ ಜಗನ್ನಾಥ್ ಈಗ ಪ್ರಶಾಂತ್ ನೀಲ್ ಮೇಲೆ ಕಾಪಿರೈಟ್ ಕೇಸ್ ಹಾಕಬಹುದು ಎಂದು ತಮಾಷೆಯಾಗಿ ಕಾಮೆಂಟ್ ಹಾಕುತ್ತಿದ್ದಾರೆ.
ಎರಡು ಭಾಗಗಳಾಗಿ ಬಂದ 'KGF' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ತೆಲುಗು ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ತೆಲುಗಿನಲ್ಲಿ ಈಗ ಪ್ರಶಾಂತ್ ನೀಲ್ ಸ್ಟಾರ್ ನಿರ್ದೇಶಕರಾಗಿಬಿಟ್ಟಿದ್ದಾರೆ. ಜ್ಯೂ. ಎನ್ಟಿಆರ್ ರೀತಿಯ ಸ್ಟಾರ್ ನಟರು ಕರೆದು ಸಿನಿಮಾ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ 'ಸಲಾರ್' ಸಿನಿಮಾ ಮಾಡಿ ತಮ್ಮ ತಾಕತ್ತು ಏನು ಎನ್ನುವುದನ್ನು ನೀಲ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ಗೆ ಬಿಗ್ ಬ್ರೇಕ್ ಕೊಟ್ಟಿದ್ದಾರೆ. ಪ್ರಶಾಂತ್ ನೀಲ ಟೇಕಿಂಗ್, ಎಲಿವೇಷನ್ಸ್ ಸೀನ್ಸ್ ನೋಡಿ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ರಾಜಮೌಳಿ ಬಳಿಕ ಪ್ರಭಾಸ್ನ ಇಷ್ಟು ಚೆನ್ನಾಗಿ ತೋರಿಸಿದ್ದು ನೀಲ್ ಮಾತ್ರ ಎಂದು ಜೈಕಾರ ಹಾಕುತ್ತಿದ್ದಾರೆ.


Click it and Unblock the Notifications











