ನಿನ್ನಂತ ವ್ಯಕ್ತಿಗೆ ಕ್ಷಮೆ ಇಲ್ಲ ; ರಾಮ್ ಗೋಪಾಲ್ ವರ್ಮಾ VS ಚಿರಂಜೀವಿ- ಮೆಗಾಸ್ಟಾರ್ ಫ್ಯಾನ್ಸ್ ಕೆಂಡ.. ಕೆಂಡ
ಭಾರತೀಯ ಚಿತ್ರರಂಗದಲ್ಲಿ ವಿಲಕ್ಷಣ ನಿರ್ದೇಶಕರೆಂದೇ ಕರೆಯಲ್ಪಡುವರು ರಾಮ್ ಗೋಪಾಲ್ ವರ್ಮಾ. ಒಂದು ಕಾಲದಲ್ಲಿ ಒಂದಕ್ಕಿಂತೊಂದು ಚೆಂದದ ಚಿತ್ರಗಳನ್ನು ನೀಡಿದ ರಾಮ್ ಗೋಪಾಲ್ ವರ್ಮಾ ಬದಲಾದ ಕಾಲದಲ್ಲಿ ಸಾಫ್ಟ್ ಪಾರ್ನ್ ಚಿತ್ರಗಳತ್ತ ಹೊರಳಿದ್ದು ದುರಂತ. ಇಂಥಾ ರಾಮ್ ಗೋಪಾಲ್ ವರ್ಮಾಗೆ ಕಾಲು ಕೆರೆದು ಜಗಳಕ್ಕಿಳಿಯುವ ಹವ್ಯಾಸ ಇದೆ. ತನ್ನದಲ್ಲದ ವಿಚಾರಕ್ಕೆ ಸುಖಾ ಸುಮ್ಮನೆ ಮೂಗು ತೂರಿಸದಿದ್ದರೆ..
ರಾಮ್ ಗೋಪಾಲ್ ವರ್ಮಾಗೆ ತಿಂದ ಅನ್ನ ಇವರಿಗೆ ಜೀರ್ಣವಾಗುವುದಿಲ್ಲ.ಸದಾ ಕಾಲ ಯಾವದಾದರೂ ಒಂದು ವಿವಾದಾತ್ಮಕ ಹೇಳಿಕೆಯ ಮೂಲಕವೇ ಸುದ್ದಿಯಾಗುವ ಇವರನ್ನು ಕಂಡರೆ ಚಿತ್ರರಂಗದಲ್ಲಿಯೇ ಹಲವರಿಗೆ ಅಸಹ್ಯವಾಗುತ್ತೆ. ಅಷ್ಟರ ಮಟ್ಟಿಗೆ ತಮ್ಮ ಇಮೇಜ್ ಡ್ಯಾಮೇಜ್ ಮಾಡಿಕೊಂಡಿದ್ದಾರೆ ರಾಮ್ ಗೋಪಾಲ್ ವರ್ಮಾ.

ಇಂಥಾ ರಾಮ್ ಗೋಪಾಲ್ ವರ್ಮಾ ಸದ್ಯ ಮೆಗಾ ಸ್ಟಾರ್ ಚಿರಂಜೀವಿ ಅವರಲ್ಲಿ ಒಲ್ಲದ ಮನಸಿಂದ ಕ್ಷಮೆ ಕೇಳಿದ್ದಾರೆ. ಈ ಮೂಲಕ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಮತ್ತೊಮ್ಮೆ ಚಿರಂಜೀವಿ ಅಭಿಮಾನಿಗಳನ್ನು ಕೆಣಕಿದ್ದಾರೆ.
ಹೌದು, ಅಸಲಿಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಕೆಲವೇ ಕೆಲ ಶ್ರೇಷ್ಠ ಚಿತ್ರಗಳಲ್ಲಿ ''ಶಿವ'' ಕೂಡ ಒಂದು. ಇದೇ ಇವರ ಮೊದಲ ಚಿತ್ರ ಕೂಡ ಹೌದು. 1989ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ನಾಗಾರ್ಜುನ.. ಅಮಲಾ.. ರಘುವರನ್ ಅಭಿನಯಿಸಿದ್ದರು.
ಆ ಕಾಲದಲ್ಲಿ ಭಾರೀ ಸದ್ದು ಮಾಡಿದ್ದ ಚಿತ್ರ ಇದು. ಕೇವಲ ಬಾಕ್ಸಾಫೀಸ್ನಲ್ಲಿ ಹಣ ದೋಚುವುದಲ್ಲದೇ ಚಿತ್ರಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದ್ದ ಚಿತ್ರ ಕೂಡ ಹೌದು ''ಶಿವ''. ಇವತ್ತು ಕೂಡ ''ಶಿವ'' ಹಲವರ ಪಾಲಿನ ನೆಚ್ಚಿನ ಸಿನಿಮಾ.
ಇಂತಹ ''ಶಿವ'' ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ಇದೀಗ ಮರು ಬಿಡುಗಡೆ ಮಾಡುತ್ತಿದ್ದಾರೆ. ಇದೇ ನವೆಂಬರ್ 14ರಂದು ಈ ಚಿತ್ರ ಮರುಬಿಡುಗಡೆಯಾಗುತ್ತಿದೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ನಾಗಾರ್ಜುನ ಮತ್ತು ಚಿರಂಜೀವಿ ತೆಲುಗು ಚಿತ್ರರಂಗದ ಎರಡು ಅತ್ಯಮೂಲ್ಯ ರತ್ನಗಳು.

ಹೀಗಾಗಿ ನಾಗಾರ್ಜುನ ಅವರ ಕ್ಲಾಸಿಕ್ ಚಿತ್ರ ''ಶಿವ'' ಮರುಬಿಡುಗಡೆ ಆಗುತ್ತಿರುವ ಹಿನ್ನೆಲೆ ಮೆಗಾಸ್ಟಾರ್ ಚಿರಂಜೀವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಶಿವ'' ಚಿತ್ರದ ಕುರಿತು ಮಾತನಾಡಿದ್ದರು. 90ರ ದಶಕದಲ್ಲಿ ಚಿತ್ರವನ್ನು ಬೆಳ್ಳಿತೆರೆಯ ಮೇಲೆ ನೋಡಿದಾಗ ತಮಗಾದ ಅನುಭವ ಹೇಗಿತ್ತು ಎಂದು ಹೇಳಿದ್ದರು. ನಾಗಾರ್ಜುನ ಅವರನ್ನು ಹೊಗಳುತ್ತಾ ರಾಮ್ ಗೋಪಾಲ್ ವರ್ಮಾ ಬಹುದೊಡ್ಡ ನಿರ್ದೇಶಕರಾಗುತ್ತಾರೆ ಎಂಬ ಭಾವನೆ ನನಗೆ ಆಗಲೇ ಬಂದಿತ್ತು ಎಂದು ಹೇಳಿದ್ದರು.
ಚಿರಂಜೀವಿ ಅವರ ಈ ವಿಡಿಯೋಗೆ ಈಗ ರಾಮ್ ಗೋಪಾಲ್ ವರ್ಮಾ ಸದ್ಯ ರಿಯ್ಯಾಕ್ಟ್ ಮಾಡಿದ್ಧಾರೆ. ಹಿಂದೆ ನನ್ನ ಕೆಲ ಉದ್ದೇಶಪೂರ್ವಕವಲ್ಲದ ಮಾತುಗಳಿಂದ ನಿಮಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಈ ಮಾತು ಇದೀಗ ಚಿರಂಜೀವಿ ಅವರ ಸೈನ್ಯವನ್ನು ಕೆರಳಿಸಿದೆ.
ಯಾಕೆಂದರೆ ಈ ಹಿಂದೆ ಹಲವು ಬಾರಿ ಚಿರಂಜೀವಿ ಕುರಿತು ನಾಲಿಗೆ ಹರಿಬಿಟ್ಟಿದ್ದರು ರಾಮು. ಚಿರಂಜೀವಿ ಮತ್ತೆ ಚಿತ್ರರಂಗಕ್ಕೆ ಮರಳಿ ತಮ್ಮ 150ನೇ ಸಿನಿಮಾ ''ಕೈದಿ ನಂ 150'' ಘೋಷಣೆ ಮಾಡಿದಾಗ ಇದೇ ರಾಮ್ ಗೋಪಾಲ್ ವರ್ಮಾ ಅಹಂಕಾರದ ಪರಮಾವಧಿ.. ಮೂರ್ಖತನ.. ಎಂದೆಲ್ಲಾ ಮಾತನಾಡಿದ್ದರು. ಚಿತ್ರದ ಶೀರ್ಷಿಕೆ ಕುರಿತು ಕೂಡ ವ್ಯಂಗ್ಯ ಮಾಡಿದ್ದರು.
ಇನ್ನೂ 2019ರಲ್ಲಿ ಮೆಗಾ ಫ್ಯಾಮಿಲಿಯಲ್ಲಿ ಒಬ್ಬ ವ್ಯಕ್ತಿಗೆ 39 ಮಕ್ಕಳು. ಆದರೆ ನಾನು ಮಕ್ಕಳು ಸಿನಿಮಾ ಮಾಡೋದರಲ್ಲಿ ಪರಿಣತನಲ್ಲ. ಅದಕ್ಕೆ ಈ ಸಿನಿಮಾವನ್ನು ಮಾಡೋದು ಬೇಡ ಎಂದು ನಿರ್ಧಾರ ಮಾಡಿದ್ದಾನೆ ಎಂದು ಕೂಡ ಹೇಳಿದ್ದರು ಆರ್ಜಿವಿ. ಇಷ್ಟೇ ಅಲ್ಲ ಹಲವು ಬಾರಿ ಪರೋಕ್ಷವಾಗಿ ಚಿರಂಜೀವಿ ಅವರನ್ನು ಟೀಕಿಸಿದ್ದರು. ಅವಮಾನವಾಗುವಂತೆ ಮಾತನಾಡಿದ್ದರು.
ಹೀಗಾಗಿಯೇ ಅಂದಿನಿಂದ ರಾಮ್ ಗೋಪಾಲ್ ವರ್ಮಾ ಹೆಸರು ಹೇಳಿದರೆ ಉರಿದು ಬೀಳುತ್ತಿದ್ದ ಚಿರಂಜೀವಿ ಅಭಿಮಾನಿಗಳು, ಈಗ ವರ್ಮಾ ಕ್ಷಮೆ ಕೇಳಿದ ಬೆನ್ನಲ್ಲಿಯೇ ಕೆರಳಿದ್ದಾರೆ. ನಿಮ್ಮ ಕ್ಷಮೆ ಯಾರಿಗೆ ಬೇಕು ಎಂದು ಕೆಂಡ ಕಾರುತ್ತಿದ್ದಾರೆ. ಕ್ಷಮೆ ಕೇಳುವುದಕ್ಕೆ ತುಂಬಾನೇ ತಡ ಮಾಡಿದ್ದೀರಾ ಎಂದು ವರ್ಮಾ ಕಾಲೆಳೆಯುತ್ತಿದ್ದಾರೆ. ತಮ್ಮ ಕುರಿತು ರಾಮ್ ಗೋಪಾಲ್ ವರ್ಮಾ ಹಗೆತನ ಸಾಧಿಸಿದ್ದರೂ ಕೂಡ ಯಾವುದನ್ನು ಮನದಲ್ಲಿ ಇಟ್ಟುಕೊಳ್ಳದೇ ಶೀವ ಚಿತ್ರದ ಪ್ರಚಾರ ಮಾಡಿದ ಚಿರಂಜೀವಿ ಅವರನ್ನು ಹಲವರು ಸದ್ಯ ಹೊಗಳುತ್ತಿದ್ದಾರೆ.
ಅಂದ್ಹಾಗೇ ಸೋಶಿಯಲ್ ಮೀಡಿಯಾ ಮೂಲಕ ರಾಮ್ ಗೋಪಾಲ್ ವರ್ಮಾ ಸಲ್ಲಿಸಿರುವ ಈ ಕ್ಷಮಾಪಣಾ ಪತ್ರಕ್ಕೆ, ಚಿರಂಜೀವಿ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ನೀಡುತ್ತಾರೆ ಎನ್ನುವ ವಿಶ್ವಾಸ ಕೂಡ ಚಿರಂಜೀವಿ ಅವರ ಅಭಿಮಾನಿಗಳಿಗಿಲ್ಲ.


Click it and Unblock the Notifications











