ನಟನೆಯಲ್ಲಿ ನನ್ನನ್ನೇ ತಿಂದು ಬಿಡ್ತೀರಾ, ನಿಮ್ಮ ಜೊತೆ ಇನ್ಮೇಲೆ ನಟಿಸಲ್ಲ ಎಂದ ಆ ಸ್ಟಾರ್ ನಟ
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ಎಲ್ಲಾ ಕಲಾವಿದರ ಆಯ್ಕೆ, ನಟನೆ ಸೊಗಸಾಗಿದೆ. ರಾಮ್ಚರಣ್ ಬಿಟ್ಟರೆ ಶಿವರಾಜ್ಕುಮಾರ್ ಹಾಗೂ ಜಗಪತಿ ಬಾಬು ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಪ್ಪಲಸೂರಿ ಆಗಿ ಇಡೀ ಕಥೆಗೆ ತಿರುವು ಕೊಡುವ ಪಾತ್ರದಲ್ಲಿ ಜಗಪತಿ ಬಾಬು ನಟಿಸಿ ಗೆದ್ದಿದ್ದಾರೆ.
ಒಂದ್ಕಾಲದಲ್ಲಿ ಹೀರೊ ಆಗಿ ನಟಿಸುತ್ತಿದ್ದ ಜಗಪತಿ ಬಾಬು ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ನೆಗೆಟಿವ್ ರೋಲ್ಗಳಲ್ಲಿ ಕೂಡ ನಟಿಸಿದ್ದಾರೆ. 'ಲೆಜೆಂಡ್' ಹಾಗೂ 'ರಂಗಸ್ಥಳಂ' ಚಿತ್ರಗಳಲ್ಲಿ ವಿಲನ್ ಆಗಿ ಅಬ್ಬರಿಸಿ ಗೆದ್ದಿದ್ದರು. ಪಾತ್ರ ಯಾವುದೇ ಇದ್ದರೂ ಅದ್ಭುತ ನಟನೆ ಮೂಲಕ ಜೀವ ತುಂಬುತ್ತಾರೆ. ಕೆಲವೊಮ್ಮೆ ನಾಯಕನಟನನ್ನು ಕೂಡ ಮೀರಿಸುವಂತೆ ನಟಿಸಿ ಗಮನ ಸೆಳೆದಿದ್ದಾರೆ. ಚಿತ್ರವೊಂದರಲ್ಲಿ ನನ್ನ ನಟನೆ ನೋಡಿ ಇನ್ಮೇಲೆ ನಿಮ್ಮ ಜೊತೆ ನಾನು ನಟಿಸಲ್ಲ ಎಂದು ಸ್ಟಾರ್ ನಟ ಹೇಳಿದ್ದಾಗಿ ಜಗಪತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಜಗಪತಿ ಬಾಬು ಅವರಿಗೆ 'ಲೆಜೆಂಡ್' ಚಿತ್ರದ ಜಿತೇಂದ್ರ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ಸ್ಟಾರ್ ನಟರ ಸಿನಿಮಾಗಳಲ್ಲಿ ಸ್ಟಾರ್ ಪೋಷಕ ನಟನಾಗಿ ದರ್ಬಾರ್ ಮಾಡುತ್ತಿದ್ದಾರೆ. ಜ್ಯೂ. ಎನ್ಟಿಆರ್ ಜೊತೆ 'ಅರವಿಂದ ಸಮೇತ' ಹಾಗೂ 'ನಾನಕು ಪ್ರೇಮತೊ' ಸಿನಿಮಾಗಳಲ್ಲಿ ಜಗಪತಿ ಬಾಬು ನಟಿಸಿ ಮೋಡಿ ಮಾಡಿದ್ದರು. 'ಅರವಿಂದ ಸಮೇತ' ಚಿತ್ರದಲ್ಲಿ ನನ್ನ ನಟನೆ ನೋಡಿ ತಾರಕ್ ಅಚ್ಚರಿಗೊಂಡಿದ್ದರು. ಈ ಚಿತ್ರಕ್ಕೆ ಇಬ್ಬರು ಹೀರೊಗಳು ಒಂದು ನಾನು ಮತ್ತೊಂದು ನೀವು ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟರು ತಮ್ಮ ಸಿನಿಮಾಗಳಲ್ಲಿ ಮತ್ತೊಂದು ಅದ್ಭುತ ಪಾತ್ರವನ್ನು ಊಹಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇಡೀ ಸಿನಿಮಾ ನಾನೇ ಇರಬೇಕು, ಎಲ್ಲಾ ಕ್ರೆಡಿಟ್ ನನಗೆ ಸಿಗಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಮತ್ತೊಬ್ಬರು ಚೆನ್ನಾಗಿ ನಟಿಸಿದ್ರು, ಮೆಚ್ಚಿಕೊಳ್ಳುವುದಿಲ್ಲ. ಆದರೆ ಜ್ಯೂ. ಎನ್ಟಿಆರ್, ಬಾಲಕೃಷ್ಣ ರೀತಿ ಕೆಲವರು ಮನಸಾರೆ ಎಲ್ಲರನ್ನು ಪ್ರೋತ್ಸಾಹಿಸುತ್ತಾರೆ. ಎಲ್ಲಾ ಪಾತ್ರಗಳಿಗೆ ಅವಕಾಶ ಇರುವಂತೆ ನೋಡಿಕೊಳ್ತಾರೆ ಎಂದು idlebrain.com ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಜಗಪತಿ ಬಾಬು ಹೇಳಿದ್ದಾರೆ.
'ನಾನಕು ಪ್ರೇಮತೊ' ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ತಾರಕ್ ಬಹಿರಂಗವಾಗಿ ಹೇಳಿದ್ದ. ಈ ಚಿತ್ರದ ಮೊದಲ ಹೀರೊ ಬಸಿರೆಡ್ಡಿ(ಜಗಪತಿ ಬಾಬು), ಆ ನಂತರ ನಾನು ಎಂದಿದ್ದರು. ಒಬ್ಬ ದೊಡ್ಡ ನಟನಿಂದ ಬಂದ ದೊಡ್ಡ ಸ್ಟೇಟ್ಮೆಂಟ್ ಅದು. ಅವರೊಬ್ಬರೇ ಆ ರೀತಿ ಮಾತನಾಡಬಲ್ಲರು. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು, ನಾನು ಎಂದಿಗೂ ಆ ಮಾತು ಮರೆಯುವುದಿಲ್ಲ. ಬಳಿಕ ತಮಾಷೆಯಾಗಿ ನನ್ನ ಬೈದ. "ಬಾಬು ಇನ್ನು 5 ವರ್ಷ ನನ್ನ ಮುಖ ನೋಡಬೇಡ. ನಾನು ನಿಮ್ಮ ಜೊತೆ ನಟಿಸಲ್ಲ.. ಎನ್ಟಿಆರ್ನ ನಟನೆಯಲ್ಲಿ ತಿಂದುಬಿಡ್ತೀರಾ ನೀವು ಅಂದ. ಸರಿ ಬಿಡಪ್ಪಾ ನೀನು 'RRR' ಸಿನಿಮಾ ಎಲ್ಲಾ ಮುಗಿಸುವ ವೇಳೆಗೆ 5 ವರ್ಷ ಆಗಿರುತ್ತೆ, ಆಮೇಲೆ ನಟಿಸೋಣ" ಎಂದು ತಮಾಷೆಗೆ ಹೇಳಿದ್ದೆ" ಎಂದು ಹೇಳಿಕೊಂಡಿದ್ದಾರೆ.
'ಪೆದ್ದಿ' ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಮೊದಲಿನಿಂದ ಜಗಪತಿ ಬಾಬು ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಬಂದಿದ್ದರು. ಸಿನಿಮಾ ಗೆದ್ದೇ ಗೆಲ್ಲುತ್ತದೆ. ರಾಮ್ಚರಣ್ ನಟನೆ ಅದ್ಭುತವಾಗಿದೆ ಎಂದಿದ್ದರು. ಸಿನಿಮಾ ಬಿಡುಗಡೆ ಬಳಿಕ ಅದೇ ರೀತಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಸಿಕ್ಕಿದೆ. ನನ್ನ ಮಾತು ನಿಜವಾಗಿದೆ ಎಂದು ಜಗಪತಿ ಬಾಬು ತಿಳಿಸಿದ್ದಾರೆ.
ಚಿತ್ರದಲ್ಲಿ ನನ್ನ ಹಾಗೂ ರಾಮ್ಚರಣ್ ನಡುವಿನ ಒಂದೆರಡು ಒಳ್ಳೆ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ. ಅದು ಇದ್ದಿದ್ದರೆ ಇನ್ನು ಚೆನ್ನಾಗಿ ಇರ್ತಿತ್ತು. ಅದನ್ನು ನನಗೆ ಕೊಟ್ಟರೆ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೀನಿ ಎಂದಿದ್ದೀನಿ. ನೆಟ್ಫ್ಲಿಕ್ಸ್ನಲ್ಲಿ ಎಲ್ಲವನ್ನು ಸೇರಿಸಿ ಸಿನಿಮಾ ಸ್ಟ್ರೀಮಿಂಗ್ ಮಾಡ್ತಾರಂತೆ ಎಂದು ಜಗಪತಿ ಬಾಬು ವಿವರಿಸಿದ್ದಾರೆ.


Click it and Unblock the Notifications