"NTR ಮೇಲೆ ಚಪ್ಪಲಿ ಎಸೆದಾಗ ಹೋಟೆಲ್ನಲ್ಲಿ ರಜನಿ ಏನ್ ಮಾಡ್ತಿದ್ರು ಗೊತ್ತಾ"?: ತಲೈವಾ ಕ್ಷಮೆ ಕೇಳಲೇಬೇಕು
ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗೆ ವಿಜಯವಾಡದಲ್ಲಿ ನಡೆದ NTR ಜನ್ಮದಿನೋತ್ಸವದಲ್ಲಿ ಭಾಗಿ ಆಗಿದ್ದರು. ವೇದಿಕೆಯಲ್ಲಿ ಮಾತನಾಡಿದ ತಲೈವಾ ಮಾಜಿ ಸಿಎಂ ಎನ್ಟಿಆರ್, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ನಟ, ಶಾಸಕ ಬಾಲಕೃಷ್ಣನ ಕೊಂಡಾಡಿದ್ದರು. ಇದೇ ವಿಚಾರ ಈಗ ಆಂಧ್ರದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಟ ರಜನಿಕಾಂತ್ ಕ್ಷಮೆ ಕೇಳಬೇಕು ಎಂದು YSR ಕಾಂಗ್ರೆಸ್ ಪಕ್ಷದ ನಾಯಕರು ಬೇಡಿಕೆ ಇಟ್ಟಿದ್ದಾರೆ.
ಆಂಧ್ರಪ್ರದೇಶದ ಸಚಿವೆ ರೋಜಾ ಕೂಡ ರಜನಿಕಾಂತ್ ವಿರುದ್ಧ ಕೆಂಡಾಮಂಡಲವಾಗಿದ್ದರು. ರಜನಿಕಾಂತ್ಗೆ ಆಂಧ್ರಪ್ರದೇಶ ಹಾಗೂ ಇಲ್ಲಿನ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ಸುಖಾಸುಮ್ಮನೆ ಬಂದು ಚಂದ್ರಬಾಬು ನಾಯ್ಡು ಇಂದ್ರ, ಚಂದ್ರ ಅಂತೆಲ್ಲಾ ಹೇಳುತ್ತಿದ್ದಾರೆ. ಅವರಿಗೆ ಸತ್ಯ ಏನು ಎನ್ನುವುದನ್ನು ನಾನು ಮನವರಿಕೆ ಮಾಡಿಕೊಡುತ್ತೇನೆ ಎಂದಿದ್ದರು. ಇದೀಗ YSR ಕಾಂಗ್ರೆಸ್ ಪಕ್ಷದ ನಾಯಕರಾದ ಕೊಡಾಲಿ ನಾನಿ ಕೂಡ ರಜನಿಕಾಂತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಜನಿಕಾಂತ್ ಹೇಳಿಕೆಗೆ ಮಾಜಿ ಸಚಿವ ಕೊಡಾಲಿ ನಾನಿ ಕೌಂಟರ್ ಕೊಟ್ಟಿದ್ದಾರೆ. "ಅಂದು NTR ಅವರ ಮೇಲೆ ಚಪ್ಪಲಿ ಎಸೆದಾಗ ವೈಸರಾಯ್ ಹೋಟೆಲ್ನಲ್ಲಿ ಚಂದ್ರಬಾಬು ಅವರನ್ನು ಬೆಂಬಲಿಸಿದ್ದ ರಜನಿಕಾಂತ್, ಈಗ ನಾಚಿಕೆಯಿಲ್ಲದೇ ಚಂದ್ರಬಾಬುನ ಹೊಗಳಿದ್ದು, NTR ಶತದಿನೋತ್ಸವದಲ್ಲಿ ಪಾಲ್ಗೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಪವನ್ ಕಲ್ಯಾಣ್ ಅವರನ್ನು ಬ್ಲಾಕ್ ಮೇಲ್ ಮಾಡಲು ಚಂದ್ರಬಾಬು ಈಗ ರಜನಿಕಾಂತ್ ಅವರಿಂದ ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪವನ್ ಯಾವುದು ಸರಿ? ಯಾವುದು ತಪ್ಪು ಎನ್ನುವುದನ್ನು ತಿಳಿದುಕೊಳ್ಳಬೇಕು" ಎಂದು ಕೊಡಾಲಿ ನಾನಿ ಹೇಳಿದ್ದಾರೆ.
"ರಜನಿಕಾಂತ್ ಅವರಿಗೆ ಆಂಧ್ರ ರಾಜಕೀಯದ ಬಗ್ಗೆ ಗಂಧಗಾಳಿ ಇಲ್ಲ. ಮೂರು ದಿನ ಶೂಟಿಂಗ್ ಮಾಡಿದ್ರೆ ನಾಲ್ಕು ದಿನ ಆಸ್ಪತ್ರೆಯಲ್ಲಿ ಮಲಗುವ ರಜನಿಕಾಂತ್ ಏನು ಹೇಳಲು ಆಂಧ್ರಕ್ಕೆ ಬಂದಿದ್ದು? NTR ಬದುಕಿದ್ದಾಗ ಎಲ್ಲರ ರಜನಿಕಾಂತ್ ಅವರ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರೋ ಬರೆದು ಕೊಟ್ಟ ಸ್ಕ್ರಿಪ್ಟ್ ಓದಿದ ರಜನಿಕಾಂತ್ ಮಾತುಗಳನ್ನು ತೆಲುಗು ಜನ ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲೂ ಇದೇ ವಿಚಾರ ಸದ್ದು ಮಾಡ್ತಿದೆ. YSR ಕಾಂಗ್ರೆಸ್ ಪಕ್ಷದ ಬೆಂಬಲಿಗರು ರಜನಿಕಾಂತ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ರಜನಿಕಾಂತ್ ಅಭಿಮಾನಿಗಳು ಹಾಗೂ TDP ಬೆಂಬಲಿಗರು ರಜನಿಕಾಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ಕ್ಷಮೆ ಕೇಳಬೇಕು ಎಂದು ಕೇಳುತ್ತಿದ್ದಾರೆ. ರೋಜಾ, ಕೊಡಾಲಿ ನಾನಿ ಮಾತ್ರವಲ್ಲ ಹಲವು YSR ಕಾಂಗ್ರೆಸ್ ಪಕ್ಷದ ನಾಯಕರು ಸೂಪರ್ ಸ್ಟಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶುಕ್ರವಾರ NTR ಜಯಂತೋತ್ಸವದಲ್ಲಿ ರಜನಿಕಾಂತ್ ಭಾಗಿ ಆಗಿದ್ದರು. "ದಿವಂಗತ ಎನ್ಟಿಆರ್ ಯುಗಪುರುಷ. ಅವರ ನಂತರ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಚಂದ್ರಬಾಬು ನನ್ನ 30 ವರ್ಷಗಳ ಗೆಳೆಯ.. ಚಂದ್ರಬಾಬು ಐಟಿ ವಿಷನ್ ಪ್ರಪಂಚಕ್ಕೆ ಗೊತ್ತು. ಅವರು ದೊಡ್ಡ ರಾಜಕೀಯ ನಾಯಕರಾಗುತ್ತಾರೆ ಎನ್ನುವುದು ಆಗಲೇ ಗೊತ್ತಿತ್ತು. ಚಂದ್ರಬಾಬು ಯಾವಾಗಲೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರು. ಹೈದರಾಬಾದಿಗೆ ಬಂದರೆ ಭಾರತದಲ್ಲಿ ಇದ್ದೀವಾ? ನ್ಯೂಯಾರ್ಕ್ನಲ್ಲಿ ಎನ್ನುವುದು ನಮಗೆ ಅರ್ಥವಾಗುವುದಿಲ್ಲ. ಹೈದರಾಬಾದ್ ಅಭಿವೃದ್ಧಿಯಲ್ಲಿ ಚಂದ್ರಬಾಬು ಪಾತ್ರ ಅಪಾರ. ಸದ್ಯ ಚಂದ್ರಬಾಬು ಪ್ರತಿಪಕ್ಷದಲ್ಲಿದ್ದಾರೆ. ಚಂದ್ರಬಾಬು ವಿಷನ್ 2047 ನಿಜವಾಗಲಿದೆ" ಎಂದು ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ.
NTR ಬೆನ್ನಿಗೆ ಚೂರಿ ಹಾಕಿದವರು ಚಂದ್ರಬಾಬು ನಾಯ್ಡು. ಅವರನ್ನು ವಹಿಸಿಕೊಂಡು ರಜನಿಕಾಂತ್ ಮಾತನಾಡಿದ್ದಾರೆ. ಮತ್ತೊಂದು ಕಡೆ NTR ಯುಗಪುರುಷ ಅಂತಾರೆ. ಇದು ಯಾವ ನ್ಯಾಯ. ಚಂದ್ರಬಾಬು ನಾಯ್ಡು ಕಾರಣಕ್ಕೆ ರಾಜ್ಯ ಅಭಿವೃದ್ಧಿ ಆಯಿತು ಎನ್ನುವುದೆಲ್ಲಾ ಸುಳ್ಳು, ರಜನಿಕಾಂತ್ ಸ್ನೇಹಿತರನ್ನು ಮೆಚ್ಚಿಸಲು ಸುಖಾ ಸುಮ್ಮನೆ ಸುಳ್ಳು ಹೇಳಿದ್ದಾರೆ ಅನ್ನೋದು YSR ಕಾಂಗ್ರೆಸ್ ಆರೋಪ.


Click it and Unblock the Notifications











