ಏಳು ಕೋಟಿ ಮೌಲ್ಯದ ಕ್ಯಾರಾವ್ಯಾನ್ನಲ್ಲಿ ಸೆಟ್ಗೆ ಬಂದ ಅಲ್ಲು ಅರ್ಜುನ್ ಪುತ್ರಿ
ನಟ ಅಲ್ಲು ಅರ್ಜುನ್ ಪುತ್ರಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿರುವ ಸಂದರ್ಭವನ್ನು ನೆನಪುಳಿಯುವಂತೆ ಮಾಡಿದೆ ಚಿತ್ರತಂಡ ಮತ್ತು ಅಲ್ಲು ಕುಟುಂಬ.
ಅಲ್ಲು ಅರ್ಜುನ್ ಪುತ್ರಿ ಅರ್ಹಾ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಂತಾ ನಟಿಸುತ್ತಿರುವ 'ಶಾಕುಂತಲಾ' ಸಿನಿಮಾದಲ್ಲಿ ಬಾಲ ಭರತನ ಪಾತ್ರಕ್ಕೆ ಅರ್ಹಾ ಬಣ್ಣ ಹಚ್ಚಿದ್ದಾರೆ.
ಸಿನಿಮಾದ ಚಿತ್ರೀಕರಣ ಈಗಷ್ಟೆ ಆರಂಭವಾಗಿದ್ದು ಅರ್ಹಾ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಲು ಆಗಮಿಸಿರುವ ಸಂದರ್ಭ ನೆನಪುಳಿಯುವಂತೆ ಚಿತ್ರತಂಡ ವ್ಯವಸ್ಥೆಗಳನ್ನು ಮಾಡಿದೆ. ಸಿನಿಮಾಕ್ಕಾಗಿ ಅರ್ಹಾ ಮೇಕಪ್ ಹಾಕಿಸಿಕೊಳ್ಳುತ್ತಿರುವ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸಮಂತಾ ನಟಿಸುತ್ತಿರುವ 'ಶಾಕುಂತಲಂ' ಸಿನಿಮಾ ಪೌರಾಣಿಕ ಕತೆಯನ್ನು ಹೊಂದಿದ್ದು ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾದಲ್ಲಿ ಬಾಲ ಭರತನ ಪಾತ್ರದಲ್ಲಿ ಅಲ್ಲು ಅರ್ಜುನ್ ಮಗಳು ನಟಿಸುತ್ತಿದ್ದಾಳೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡುತ್ತಿದ್ದಾರೆ.

ಐದು ಕೋಟಿ ಮೌಲ್ಯದ ಕ್ಯಾರಾವ್ಯಾನ್ನಲ್ಲಿ ಸೆಟ್ಗೆ ಆಗಮನ
ಸಿನಿಮಾ ಸೆಟ್ಗೆ ಅರ್ಹಾ ಅನ್ನು ಏಳು ಕೋಟಿ ಮೌಲ್ಯದ ಕ್ಯಾರಾವ್ಯಾನ್ನಲ್ಲಿ ಕರೆತರಲಾಗಿದೆ. ಕ್ಯಾರಾವ್ಯಾನ್ ಮುಂದೆ ಅರ್ಹಾ ಹೆಸರಿನ ಬಲೂನ್ ಕಟ್ಟಿ ಪುಟ್ಟ ಬಾಲಕಿಯನ್ನು ಸೆಟ್ಗೆ ಸ್ವಾಗತಿಸಲಾಗಿದೆ. ಸೆಟ್ನಲ್ಲಿ ತಂತ್ರಜ್ಞರು, ನಿರ್ದೇಶಕರು ಆತ್ಮೀಯವಾಗಿ ಅರ್ಹಾ ಅನ್ನು ಸೆಟ್ಗೆ ಬರಮಾಡಿಕೊಂಡಿದ್ದಾರೆ. ಅರ್ಹಾ ಸೆಟ್ಗೆ ಬಂದಿರುವ ದೃಶ್ಯಗಳು, ಅರ್ಹಾಗೆ ಅದ್ಧೂರಿಯಾಗಿ ಸ್ವಾಗತ ಕೋರಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಚಿತ್ರ ಹಂಚಿಕೊಂಡಿರುವ ಅಮ್ಮ ಸ್ನೇಹ ರೆಡ್ಡಿ
ಅರ್ಹಾ ಸಿನಿಮಾಕ್ಕಾಗಿ ಮೊದಲ ಬಾರಿಗೆ ಮೇಕಪ್ ಹಾಕಿಸಿಕೊಳ್ಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳು ಮೊದಲ ಬಾರಿಗೆ ಮೇಕಪ್ (ಸಿನಿಮಾಕ್ಕಾಗಿ) ಹಾಕಿಸಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿಸಿದ್ದಾರಂತೆ ಅಲ್ಲು ಅರ್ಜುನ್. ತಂದೆಯಾಗಿ ಇದು ಅವರಿಗೆ ಬಹಳ ಭಾವುಕ ಕ್ಷಣ. ಮಗಳು ಮೇಕಪ್ ಮಾಡಿಸಿಕೊಳ್ಳುತ್ತಿರುವ ಚಿತ್ರವನ್ನು ತಾಯಿ ಸ್ನೇಹ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಸಹ ಬಾಲನಟನಾಗಿ ಎಂಟ್ರಿ ಕೊಟ್ಟಿದ್ದರು
ಅಲ್ಲು ಅರ್ಜುನ್ ಮಗಳಿಗೆ ಈಗಿನ್ನು ನಾಲ್ಕು ವರ್ಷ. ಅಲ್ಲು ಅರ್ಜುನ್ ಸಹ ಬಾಲನಟನಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ಟವರು. ತಮ್ಮ ಮಾವ ಚಿರಂಜೀವಿ ನಾಯಕ ನಟನಾಗಿ ನಟಿಸಿದ 'ವಿಜೇತ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಮೊದಲ ಬಾರಿಗೆ ನಟಿಸಿದಾಗ ಅವರಿಗಿನ್ನೂ ಮೂರು ವರ್ಷ ವಯಸ್ಸು. ಆ ನಂತರ 1986ರಲ್ಲಿ ಕಮಲ್ ಹಾಸನ್ ನಟಿಸಿದ 'ಸ್ವಾತಿಮುತ್ಯಂ' ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದರು. ನಂತರ ಚಿರಂಜೀವಿ ನಟಿಸಿದ್ದ 'ಡ್ಯಾಡಿ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅದ್ಭುತ ಡ್ಯಾನ್ಸ್ ಪ್ರದರ್ಶನ ಮಾಡಿದ್ದ ಅಲ್ಲು ಅರ್ಜುನ್ 'ಗಂಗೋತ್ರಿ' ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಲು ಅಂದೇ ಅಡ್ವಾನ್ಸ್ ಸಹ ಪಡೆದಿದ್ದರು.

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅರ್ಹಾ
ಅಲ್ಲು ಅರ್ಜುನ್ ಮಗಳು ಅರ್ಹಾ ಸಿನಿಮಾದಲ್ಲಿ ನಟಿಸುವ ಮುನ್ನವೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಅರ್ಹಾಳ ಚಿತ್ರಗಳನ್ನು, ವಿಡಿಯೋಗಳನ್ನು ಅಲ್ಲು ಅರ್ಜುನ್ ಮತ್ತು ಸ್ನೇಹಾ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲು ಅರ್ಹಾ ಹೆಸರಲ್ಲಿ ಹಲವು ಇನ್ಸ್ಟಾಗ್ರಾಂ ಪೇಜ್ಗಳು ಸಹ ಇವೆ. 'ಅಂಜಲಿ' ಹಾಡಿಗೆ ಅರ್ಹಾ ನರ್ತಿಸಿರುವ ವಿಡಿಯೋ ಯೂಟ್ಯೂಬ್ನಲ್ಲಿದ್ದು ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಅರ್ಹಾಗೆ ಅಯಾನ್ ಹೆಸರಿನ ಅಣ್ಣನೂ ಇದ್ದಾನೆ.

ಅಲ್ಲು ಕುಟುಂಬಕ್ಕೆ ಗೌರವದ ಕ್ಷಣ: ಅಲ್ಲು ಅರ್ಜುನ್
ಮಗಳು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅಲ್ಲು ಅರ್ಜುನ್, ''ಅಲ್ಲು ಕುಟುಂಬಕ್ಕೆ ಇದೊಂದು ಬಹಳ ಗೌರವದ ಕ್ಷಣ. ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ಅರ್ಹಾ ಸಿನಿಮಾಕ್ಕೆ ಪಾದಾರ್ಪಣೆ ಮಾಡುತ್ತಿದ್ದಾಳೆ. ನನ್ನ ಮಗಳಿಗೆ ಈ ಒಳ್ಳೆಯ ಸಿನಿಮಾ ಅವಕಾಶ ಕೊಟ್ಟಿದ್ದಕ್ಕೆ ಗುಣಶೇಖರ್ ಹಾಗೂ ನೀಲಿಮಾ ಗುಣ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ'' ಎಂದಿದ್ದಾರೆ ಅಲ್ಲು ಅರ್ಜುನ್.


Click it and Unblock the Notifications