ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದ ಗುರುತು ಮೂಡಿಸಿರುವ ಅಚ್ಯುತ್ ಕುಮಾರ್ ಅಪ್ಪಟ ನೀನಾಸಂ ಪ್ರತಿಭೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಗೃಹಭಂಗ ಸೀರಿಯಲ್ ಮೂಲಕ ಮುನ್ನೆಲೆಗೆ ಬಂದರು. ನಂತರ ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ ಮುಂತಾದ ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಹೆಸರು ಗಳಿಸಿದರು. ಮೊಗ್ಗಿನ ಮನಸ್ಸು, ಆ ದಿನಗಳು ಚಿತ್ರಗಳ ಮೂಲಕ ಸಿನಿ ಪಯಣ ಆರಂಭಿಸಿದರು. ಲೂಸಿಯಾ, ಸಿದ್ಲಿಂಗು, ಉಳಿದವರು ಕಂಡಂತೆ ಮುಂತಾದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದರು. ಅಚ್ಯುತ್ ಸಿನಿ ಜೀವನದ ಅತ್ಯುತ್ತಮ ಪಾತ್ರಗಳನ್ನು ಇಲ್ಲಿ ನೀಡಲಾಗಿದೆ.
ಶಿವಮಣಿ ನಿರ್ದೇಶನದ ಜೋಶ್ ಚಿತ್ರದಲ್ಲಿ ರಾಕೇಶ್ ತಂದೆ ಪಾತ್ರದಲ್ಲಿ ನಟಿಸಿದ್ದರು. ತನ್ನ ಮಗನ ಭವಿಷ್ಯಕ್ಕಾಗಿ ಶ್ರಮಿಸುವ ಒಬ್ಬ ಮಧ್ಯಮವರ್ಗದ ತಂದೆ ಪಾತ್ರದಲ್ಲಿ ಗಮನ ಸೆಳೆದರು. ಈ ಪಾತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೂಡ ಪಡೆದರು.
ರಮೇಶ್ ನಾಯ್ಡು ನಿರ್ದೇಶನದಲ್ಲಿ ಮೂಡಿಬಂದಿದ್ದ ಹೆಜ್ಜೆಗಳು ಚಿತ್ರದಲ್ಲಿ ನಿರ್ವಹಿಸಿದ ಕೋದಂಡ ಪಾತ್ರಕ್ಕೆ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು,
ಪವನ್ ಕುಮಾರ್ ಲೂಸಿಯಾ ಚಿತ್ರದಲ್ಲಿ ಎರಡು ಶೇಡ್ ನ ಪಾತ್ರ ಮಾಡಿದರು. ಶಂಕ್ರಣ್ಣ ಎಂಬ ಥಿಯೇಟರ್ ಮಾಲೀಕನ ಪಾತ್ರ ಮತ್ತು `ನಿಖಿಲ್' ಎಂಬ ನಾಯಕನ ಮ್ಯಾನೇಜರ್ ಪಾತ್ರ ಮಾಡಿದ್ದರು. ಈ ಚಿತ್ರದ ನಟನೆಗಾಗಿ ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಚಿತ್ರದಲ್ಲಿ ಬಾಲು ಎಂಬ ಪಾತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಕಾಗೆಯಿಂದ ಹೆದರುವ ಪಾತ್ರದಲ್ಲಿ ಗಮನ ಸೆಳೆದರು.
ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಮಲಯಾಳಂ ಚಿತ್ರದ ರಿಮೇಕ್ ದೃಶ್ಯ ಚಿತ್ರದಲ್ಲಿ ಪೋಲಿಸ್ ಆಫೀಸರ್ ಪಾತ್ರದಲ್ಲಿ ನಟಿಸಿದರು. ಸೂರ್ಯ ಪ್ರಕಾಶ್ ಎಂಬ ನೆಗೆಟಿವ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದರು. ಈ ಚಿತ್ರದ ನಟನೆಗಾಗಿ ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ಸಂತೋಷ್ ಆನಂದರಾಮ್ ನಿರ್ದೇಶನದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಯಶ್ ತಂದೆಯಾಗಿ ನಟಿಸಿದರು. ಕಠಿಣ ತಂದೆ ಪಾತ್ರದಲ್ಲಿ ನಟಿಸಿದ್ದ ಅಚ್ಯುತ್, ಈ ಪಾತ್ರಕ್ಕಾಗಿ ಸೈಮಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ಅಜೇಯರಾವ್ ಕೃಷ್ಣ ನಾಯಕನಾಗಿ ನಟಿಸಿದ ಕೃಷ್ಣ ಲೀಲಾ ಚಿತ್ರದಲ್ಲಿ ಅಜೇಯ ತಂದೆ ಪಾತ್ರದಲ್ಲಿ ನಟಿಸಿದರು. ಕುಡುಕ ತಾತ್ಸಾರ ಭರಿತ ತಂದೆ ಪಾತ್ರದಲ್ಲಿ ನಟಿಸಿದ್ದ ಅಚ್ಯುತ್ ಐಫಾ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಗೆ ನಾಮಿನೇಟ್ ಆದರು.
ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ 1st ರ್ಯಾಂಕ್ ರಾಜು ಚಿತ್ರದಲ್ಲಿ ನಾಯಕ ಗುರುನಂದನ್ ತಂದೆ ಪಾತ್ರದಲ್ಲಿ ನಟಿಸಿದರು, ತಮ್ಮ ಮಗ ರಾಜುವನ್ನು ಕೇವಲ ಓದಿಗೆ ಸೀಮಿತಗೊಳಿಸುವ ಇವರು ಅವನನ್ನು ಸಮಾಜದ ಸಂಪರ್ಕದಿಂದ ವಿಮುಖಗೊಳಿಸುತ್ತಾರೆ.
ಸುಮನಾ ಕಿತ್ತೂರು ನಿರ್ದೇಶನದ ಕಿರಿಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಶಂಕರ ಪಾತ್ರದಲ್ಲಿ ಹಳ್ಳಿಯ ಗೋಮುಖ ಸಮಾಜ ಸೇವಕನ ಪಾತ್ರದಲ್ಲಿ ನಟಿಸಿದರು. ಸ್ವಾಮಿಯೊಬ್ಬರ ಜೊತೆ ಸೇರಿ ಊರಿನ ಸ್ವಾಸ್ಥ್ಯ ಹಾಳು ಮಾಡುವ ಪಾತ್ರದಲ್ಲಿ ನಟಿಸಿದ್ದ ಅಚ್ಯುತ್ ಐಫಾ ಪೋಷಕ ನಟ ಪ್ರಶಸ್ತಿಗೆ ನಾಮಿನೇಟ್ ಆದರು.
ಹೇಮಂತ್ ರಾವ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಕುಮಾರ್ ಎಂಬ ಗೃಹಸ್ಥನ ಪಾತ್ರದಲ್ಲಿ ನಟಿಸಿದರು. ರೌಡಿ ಮತ್ತು ಮರೆವಿನ ಖಾಯಿಲೆ ಇರುವ ವ್ಯಕ್ತಿಗಳು ತನ್ನ ಮನೆ ಸೇರಿದಾಗ ಒದ್ದಾಡುವ ಗೃಹಸ್ಥನ ಪಾತ್ರದಲ್ಲಿ ನಟಿಸಿ ಮತ್ತೊಮ್ಮೆ ಐಫಾ ಹಾಸ್ಯ ನಟ ಪ್ರಶಸ್ತಿಗೆ ನಾಮಿನೇಟ್ ಆದರು.
ಜಯತೀರ್ಥ ನಿರ್ದೇಶನದ ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿ ಅಚ್ಯುತ್ ಕೋದಂಡ ಎಂಬ ದುಷ್ಟ ಪೋಲಿಸ್ ಆಧಿಕಾರಿ ಪಾತ್ರದಲ್ಲಿ ನಟಿಸಿದರು. ಲಂಚದ ಆಸೆ ಮತ್ತು ಸೇಡಿನ ಗುಂಗಿನಲ್ಲಿ ಇಬ್ಬರ ಯುವತಿಯರು ಬದುಕನ್ನು ನಾಶ ಮಾಡುವ ಪೋಲಿಸ್ ಅಧಿಕಾರಿ ಪಾತ್ರಕ್ಕೆ ಮತ್ತೊಮ್ಮೆ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್ ಆದರು.
ಗಿರಿರಾಜ್ ನಿರ್ದೇಶನದಲ್ಲಿ ಮೂಡಿಬಂದ ಅಮರಾವತಿ ಚಿತ್ರದಲ್ಲಿ ಪೌರ ಕಾರ್ಮಿಕನ ಪಾತ್ರದಲ್ಲಿ ನಟಿಸಿದರು.ಈ ಚಿತ್ರ ಪೌರ ಕಾರ್ಮಿಕರ ಜೀವನ ರೀತಿ, ಅವರು ಅನುಭವಿಸುವ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿತು. ಈ ಚಿತ್ರದ ಪಾತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.
ಪ್ರದೀಪ್ ವರ್ಮಾ ನಿರ್ದೇಶನದ ಊರ್ವಿ ಚಿತ್ರದಲ್ಲಿ ಅಚ್ಯುತ್ ಕುಮಾರ್ ದೇವರು ಎಂಬ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು. ಈ ಚಿತ್ರದಲ್ಲಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್ ಮತ್ತು ಶ್ವೇತಾ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಜಯತೀರ್ಥ ನಿರ್ದೇಶನ ಬೆಲ್ ಬಾಟಂ ಚಿತ್ರದಲ್ಲಿ ರಿಷಭ್ ಶೆಟ್ಟಿ ತಂದೆಯಾಗಿ, ಅಣ್ಣಪ್ಪ ಎಂಬ ಕಾನಸ್ಟೇಬಲ್ ಪಾತ್ರದಲ್ಲಿ ನಟಿಸಿದರು.ರಿಷಭ್ ಮತ್ತು ಅಚ್ಯುತ್ ತಂದೆ-ಮಗನ ಕಾಂಬಿನೇಶನ್ ಚಿತ್ರದಲ್ಲಿ ಗಮನ ಸೆಳೆಯಿತು.
ಹೇಮಂತ ರಾವ್ ನಿರ್ದೇಶನದ ಕವಲು ದಾರಿ ಚಿತ್ರದಲ್ಲಿ ನಿಗೂಡ ಹಿನ್ನಲೆಯಿರುವ ಕುಮಾರ್/ಬಾಬು ಎಂಬ ಪತ್ರಕರ್ತನ ಪಾತ್ರದಲ್ಲಿ ನಟಿಸಿದರು. ಪಾಪ ಪ್ರಜ್ಞೆಯಿಂದ ನರಳುವ ಮತ್ತು ತನ್ನ ಮಗಳ ಸುರಕ್ಷತೆಗಾಗಿ ಹೋರಾಡುವ ಪಾತ್ರವನ್ನು ಸೂಕ್ಷ್ಮವಾಗಿ ನಿಭಾಯಿಸಿದರು.
ಸಚಿನ್ ರವಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಅಚ್ಯುತಣ್ಣ ಎಂಬ ಕಾನಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡರು, ರಕ್ಷಿತ್ ಮತ್ತು ಅಚ್ಯುತ್ ಕಾಂಬಿನೇಶನ್ ಪ್ರೇಕ್ಷಕರಿಗೆ ಸಾಕಷ್ಟು ಹಾಸ್ಯ ಕಚಗುಳಿಯಿಟ್ಟಿತು.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ 'ಕಾಂತಾರ' ಚಿತ್ರ ಬಾಕ್ಸ್ ಆಫೀಸ್ನಲ್ಲೂ ಸಖತ್ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ನಟ ಅಚ್ಯುತ್ ಕುಮಾರ್ ಊರಿನ ಧಣಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಕಂಠರದಲ್ಲಿನ ಅಚ್ಯುತ್ ಕುಮಾರ್ ನಟನೆಗೆ ಸಿನಿರಸಿಕರು ಫಿದಾ ಆಗಿದ್ದರು.