ಕನ್ನಡದಲ್ಲಿ ಸ್ನೇಹದ ಮೇಲೆ ಸಾಕಷ್ಟು ಚಲನಚಿತ್ರಗಳು ತೆರೆಗೆ ಬಂದಿವೆ. ಡಾ. ರಾಜಕುಮಾರ್ ರವರ ಸ್ನೇಹಿತನಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಕಾಮನಬಿಲ್ಲು ಚಿತ್ರದಿಂದ ಹಿಡಿದು ವಿಷ್ಣುವರ್ಧನ್ ರವರ ಸ್ನೇಹಿತನಿಗಾಗಿ ಪ್ರಾಣ ನೀಡುವ ದಿಗ್ಗಜರು ಚಿತ್ರಗಳ ವರೆಗೆ ಹಲವಾರು ಚಿತ್ರಗಳು ಸ್ನೇಹದ ಮೇಲೆ ವಿಭಿನ್ನ ಬೆಳಕು ಚೆಲ್ಲಿವೆ. ಸ್ನೇಹಿತರ ಪ್ರೀತಿಗೆ ತಮ್ಮ ಪ್ರಾಣ ಒತ್ತೆ ಇಟ್ಟು ಸಾಥ್ ನೀಡುವ ಹುಡುಗರು, ಸ್ನೇಹದ ಹೆಸರಿನಿಲ್ಲಿ ಬೆನ್ನಿಗೆ ಇರಿಯುವ ಸ್ನೇಹಿತರ ಬಗ್ಗೆ ಹೇಳುವ ರಾಜಾಹುಲಿ ಹೀಗೆ ಹತ್ತು ಹಲವು ಚಿತ್ರಗಳು ಈ ಲಿಸ್ಟಿನಲ್ಲಿವೆ..
ಚಿ ದತ್ತರಾಜ್ ನಿರ್ದೇಶನದಲ್ಲಿ 1983 ರಲ್ಲಿ ತೆರಕಂಡ ಈ ಚಿತ್ರದಲ್ಲಿ ರಾಜಕುಮಾರ್ ಮತ್ತು ಅನಂತನಾಗ್ ಪ್ರಾಣ ಸ್ನೇಹಿತರಾಗಿ ನಟಿಸಿದರು. ತನ್ನ ಸ್ನೇಹಿತನಿಗಾಗಿ ತಾನು ಪ್ರೀತಿಸಿದ ಹುಡುಗಿಯನ್ನು ತ್ಯಾಗ ಮಾಡಿ ಅಂಗವಿಕಲೆಯನ್ನು ಮದುವೆಯಾಗುವ ನಾಯಕನಾಗಿ ರಾಜ್ ಮಿಂಚಿದ್ದರು.
ಸ್ಯಾಂಡಲ್ವುಡ್ನ ಎವರ್ ಗ್ರೀನ್ ಸಿನಿಮಾಗಳಲ್ಲಿ ದಿಗ್ಗಜರು ಕೂಡ ಒಂದು. ನಿಜಜೀವನದ ಪ್ರಾಣ ಸ್ನೇಹಿತರಾದ ವಿಷ್ಣು-ಅಂಬಿ ಈ ಸಿನಿಮಾದಲ್ಲಿ ಕೂಡ ಕುಚಿಕು ಸ್ನೇಹಿತರಾಗಿ ಮಿಂಚಿದ್ದರು. ಇದು ತಮಿಳಿನ ನತ್ಪುಕ್ಕಾಗ ಸಿನಿಮಾದ ರಿಮೇಕ್ ಆಗಿದ್ದರೂ ಕೂಡ ವಿಷ್ಣು ದಾದಾ ಹಾಗೂ ಅಂಬಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಡಿ ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಅಂತಸ್ತಿನ ಅಂತರವಿದ್ದರೂ ಬಾಲ್ಯದಿಂದಲೂ ಸ್ನೇಹಿತರಾಗಿ ಬೆಳೆದ ಇಬ್ಬರು ಸ್ನೇಹಿತರ ಸರ್ವ ಶ್ರೇಷ್ಠ ಸ್ನೇಹದ ಉದಾಹರಣೆಯಾಗಿ ನಿಂತಿತ್ತು. ಈ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದು, 'ಕುಚಿಕು ಕುಚಿಕು' ಹಾಡಿಗೆ ಸಿನಿರಸಿಕರು ಫಿದಾ ಆಗಿದ್ದರು.
ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ನಟ ರಮೇಶ್, ಪಂಚಮುಖಿ ಹೇಮಾ ಹಾಗೂ ಅಕ್ಷಯ್ ಆನಂದ್ ನಟಿಸಿದ್ದರು. ಕರ್ನಾಟಕದ ಕರಾವಳಿಯ ಹಳ್ಳಿಯೊಂದರ ಬೆಳೆಯುವ ಮೂರು ಜನ ಸ್ನೇಹಿತರು ಮತ್ತು ಅವರ ಮಧ್ಯೆ ಚಿಗರೊಡುವ ಪ್ರೇಮವನ್ನು ಅಮೇರಿಕಾದ ಹಿನ್ನಲೆಯಿಂದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ.
ಮಲೆನಾಡಿನ ಪ್ರಕೃತಿ ಮಧ್ಯೆ ಅರಳುವ ತ್ರಿಕೋನ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಇಬ್ಬರು ಪ್ರಾಣ ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ನಂತರ ಒಬ್ಬರಿಗಾಗಿ ಒಬ್ಬರು ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ಮುಂದಾಗುತ್ತಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿಬಂದ 'ನಮ್ಮೂರ ಮಂದಾರ ಹೂವೆ' ಚಿತ್ರದಲ್ಲಿ ಶಿವರಾಜಕುಮಾರ್, ಪ್ರೇಮಾ, ರಮೇಶ್ ಅರವಿಂದ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ತ್ರಿಕೋನ ಪ್ರೇಮಕಥೆ ಹೊಂದಿದ್ದ ಈ ಚಿತ್ರಕ್ಕೆ ಇಳಯರಾಜ ಮಧುರ ಗೀತೆಗಳನ್ನು ಸಂಯೋಜಿಸಿದ್ದರು. ಈ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು ಮುಂದೆ ಅಮೇರಿಕಾದ ಕೆಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಈ ಸಿನಿಮಾ ಬಳಿಕ ರಮೇಶ್ ಅರವಿಂದ್ 'ತ್ಯಾಗರಾಜ' ಎಂಬ ಹೆಸರು ಪಡೆದುಕೊಂಡರು. ರಮೇಶ್ ಈ ಸಿನಿಮಾದಲ್ಲಿ ತಾವು ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಮಲೆನಾಡಿನ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲೂ ಯಾನದಲ್ಲಿ ಹೆಚ್ಚು ದೃಶ್ಯಗಳನ್ನು ಶೂಟ್ ಮಾಡಲಾಗಿತ್ತು. ನಮ್ಮೂರ ಮಂದಾರ ಹೂವೆ ಸಿನಿಮಾ ತೆರೆಕಂಡ ಬಳಿಕ 'ಯಾನ' ಪ್ರಸಿದ್ಧ ಪ್ರವಾಸಿ ತಾಣವಾಯಿತು. ಸಿನಿಮಾದಲ್ಲಿ ಬರುವ ಫ್ರೆಂಡ್ಷಿಪ್ ಸ್ಲೋಗನ್ ಟ್ರೆಂಡ್ ಆಯಿತು. ರಮೇಶ್ ಅರವಿಂದ್ ಹಾಗೂ ಶಿವರಾಜ್ ಕುಮಾರ್ ಭೇಟಿ ಮಾಡುವ ಸಮಯದಲ್ಲಿ ಬಳಸುತ್ತಿದ್ದ 'ಹೇ ಹೇ...ಓಹೋ ಓಹೋ ಎನ್ನುವ ಸಿಂಪಲ್ ಆಗ ಸ್ನೇಹಿತರ ಪಾಲಿಗೆ ನಿತ್ಯದ ಸ್ಲೋಗನ್ ಆಗಿ ಬಳಕೆಯಾಗಿತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ಸಿಪಾಯಿ ಸಿನಿಮಾದಲ್ಲಿ ಸೌಂದರ್ಯ ನಾಯಕಿಯಾಗಿ ಅಭಿನಯಿಸಿದ್ದರು. ೧೯೯೬ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ಪ್ರೇಮಕಥೆ ಜೊತೆಗೆ ಸೈನಿಕರಿಬ್ಬರ ಸ್ನೇಹವನ್ನು ತೋರಿಸಲಾಗಿದ್ದು, ದೊಡ್ಡ ಯಶಸ್ಸು ಗಳಿಸಿತ್ತು. ಇದು ತೆಲಗು ನಟ ಚಿರಂಜೀವಿ ನಟಿಸಿದ ಪ್ರಥಮ ಕನ್ನಡ ಚಲನಚಿತ್ರ. ಬಳಿಕ ತೆಲುಗಿಗೆ ಮೇಜರ್ ಹೆಸರಿನಲ್ಲಿ ರಿಮೇಕ್ ಆಗಿತ್ತು.
ಪ್ರಾಣ ಸ್ನೇಹಿತನ ಸಹೋದರಿಯನ್ನು ತಿಳಿಯದೇ ಪ್ರೀತಿಸುವ ನಾಯಕ ನಂತರ ತನ್ನ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಸಿದ್ಧನಾಗುತ್ತಾನೆ. ಹೊಸತನದ ಗೀತೆಗಳನ್ನು ಹೊಂದಿದ್ದ ಈ ಚಿತ್ರ ಸ್ನೇಹಕ್ಕೆ ವಿಭಿನ್ನ ಆಯಾಮಗಳನ್ನು ನೀಡಿತು.
ಮೂರು ಸ್ನೇಹಿತರ ಪಟ್ಟಣದ ತಮ್ಮ ಜೀವನಶೈಲಿಯಿಂದ ಬೇಸರವಾಗಿ ಒಂದು ಮಲೆನಾಡಿನ ಹಳ್ಳಿಗೆ ಬಮದಾಗ ಅಲ್ಲಿ ಇವರ ಪ್ರೇಮದ ಅಧ್ಯಾಯ ಆರಂಭವಾಗುತ್ತದೆ. ಮನ ಮುಗ್ಧಗೊಳಿಸುವ ಗೀತೆಗಳನ್ನು ಹೊಂದಿರುವ ಈ ಚಿತ್ರ ಕನ್ನಡದ ಅತ್ತ್ಯುತ್ತಮ ರೋಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲೊಂದು.
ತಮ್ಮ ಸ್ನೇಹಿತನ ಪ್ರೀತಿಯನ್ನು ಉಳಿಸಲು ಹೋಗಿ ಒಬ್ಬ ತನ್ನ ಪ್ರೀತಿ, ಮತ್ತೊಬ್ಬ ತನ್ನ ಕಾಲು ಕಳೆದುಕೊಂಡರೆ, ಇನ್ನೊಬ್ಬ ಕಿವುಡನಾಗುತ್ತಾನೆ. ಚಿತ್ರದಲ್ಲಿ ಪುನೀತ್, ಶ್ರೀನಗರ ಕಿಟ್ಟಿ ಮತ್ತು ಯೋಗೇಶ್ ಸ್ನೇಹಿತರಾಗಿ ನಟಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ಮೇಘನಾ ರಾಜ್ ಅಭಿನಯದ 'ರಾಜಾಹುಲಿ' ತಮಿಳಿನ ಸುಂದರಪಾಂಡಿಯನ್ ಚಿತ್ರದ ರಿಮೇಕ್ ಆಗಿತ್ತು. ಈ ಸಿನಿಮಾವನ್ನು ಗುರು ದೇಶಪಾಂಡೆ ನಿರ್ದೇಶಿಸಿದ್ದು, 6 ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಿಸಲಾಗಿತ್ತು. ಮಂಡ್ಯ ಜಿಲ್ಲೆಯ ಕಾಲೇಜಿನಲ್ಲಿ ಒಟ್ಟಿಗೆ ಕಲಿತ ಸ್ನೇಹಿತರ ಮಧ್ಯೆ ಒಂದು ಹುಡುಗಿಗಾಗಿ ಭಿನ್ನಾಭಿಪ್ರಾಯ ಮೂಡುತ್ತದೆ. ಮದುವೆಯ ಹೊಸ್ತಿಲಲ್ಲಿದ್ದ ಸ್ನೇಹಿತನನ್ನು ನಂಬಿಸಿ ಕೊಲೆ ಮಾಡುವ ಸಂಚಿನಲ್ಲಿದ್ದ ಗೆಳೆಯರು ಮತ್ತು ಅದರಿಂದ ಪಾರಾಗಿ ಅವನು ಅವರನ್ನು ಕ್ಷಮಿಸುವ ಕಥೆಯನ್ನು ಚಿತ್ರ ಹೊಂದಿದೆ.
ಇಬ್ಬರು ಕಾಲೇಜ್ ಸ್ನೇಹಿತರು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ನಂತರ ಬೆಂಗಳೂರಿನ ಎರಡು ಪರಸ್ಪರ ವಿರುದ್ಧ ಮಾಫಿಯಾ ಗ್ಯಾಂಗ್ ಗಳಲ್ಲಿ ಸೇರುತ್ತಾರೆ. ನಂತರ ಈ ಇಬ್ಬರು ಪರಸ್ಫರ ಹೇಗೆ ಕಾದಾಟಕ್ಕೆ ನಿಲ್ಲುತ್ತಾರೆ ಮತ್ತು ಅದರ ಅಂತ್ಯವೇನು ಎಂಬದನ್ನು ಚಿತ್ರ ನಿರೂಪಿಸುತ್ತದೆ.
ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಯಶ್, ರಾಧಿಕಾ, ಶುಭಾ ಪೂಂಜಾ ಸೇರಿದಂತೆ ಅನೇಕರು ನಟಿಸಿದ್ದರು. ಚಿತ್ರದಲ್ಲಿ ಹದಿಹರೆಯದ ವಯಸ್ಸಿನಲ್ಲಿನ ಸ್ನೇಹ, ಪ್ರೀತಿ ಸೇರಿದಂತೆ ಅನೇಕ ವಿಷಯಗಳನ್ನು ವಿವರಿಸಲಾಗಿತ್ತು. ಮೊಗ್ಗಿನ ಮನಸು ಸಿನಿಮಾ ಸೂಪರ್ ಹಿಟ್ ಆಗುವುದಲ್ಲದೇ, ಐದು ಫಿಲಂ ಫೇರ್ ಪ್ರಶಸ್ತಿ ಬಾಚಿಕೊಂಡಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ (ರಾಧಿಕಾ ಪಂಡಿತ್), ಅತ್ಯುತ್ತಮ ಪೋಷಕ ನಟ (ಯಶ್), ಅತ್ಯುತ್ತಮ ಪೋಷಕ ನಟಿ (ಶುಭಾ ಪೂಂಜಾ) ಫಿಲಂ ಫೇರ್ ಅವಾರ್ಡ್ ಲಭಿಸಿತ್ತು.
ಜಾಲಿಡೇಸ್ ಚಿತ್ರದಲ್ಲಿ ಪ್ರದೀಪ್, ಪ್ರವೀಣ್, ವಿಶ್ವಾಸ್, ಸ್ಫೂರ್ತಿ ಸುರೇಶ್, ಋತುವ, ರಾಘವೇಂದ್ರ, ಐಶ್ವರ್ಯ ನಾಗ್, ಕೀರ್ತಿ, ಬಲ್ಲಾಳ್ ಮೊದಲಾದವರ ತಾರ ಬಳಗವಿತ್ತು. ಈ ಸಿನಿಮಾದಲ್ಲಿ ನಾಲ್ಕು ಜನ ಸ್ನೇಹಿತರು, ಅವರ ಕಾಲೇಜು ಜೀವನ, ಮಧ್ಯ-ಮಧ್ಯ ಸಣ್ಣ ಮನಸ್ತಾಪವನ್ನು ತೋರಿಸಲಾಗಿತ್ತು. ಇದೊಂದು ಸ್ನೇಹಿತರಿಗಾಗಿಯೇ ಮಾಡಿದ ಅದ್ಭುತ ಸಿನಿಮಾ.
ಜೋಶ್ ಚಿತ್ರದಲ್ಲಿ ರಾಕೇಶ್ ಅಡಿಗ ನಾಯಕನಾಗಿ ಮತ್ತು ಪೂರ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಶಿವಮಣಿ ಅವರ ನಿರ್ದೇಶನದಲ್ಲಿ ಮೂಡಬಂದ ಈ ಸಿನಿಮಾ ಸ್ನೇಹಿತರ ಪ್ರಾಮುಖ್ಯತೆ ಜೊತೆಗೆ ಬದುಕಿಗೆ ಬೇಕಾದ ಪಾಠವನ್ನು ಸಹ ಹೇಳಿತ್ತು. ಕೆಲ ಸ್ನೇಹಿತರ ಸ್ಟೋರಿಯನ್ನೇ ಈ ಚಿತ್ರದಲ್ಲಿ ತರಲಾಗಿತ್ತು.
'ಆಪ್ತಮಿತ್ರ' ಸಿನಿಮಾದಲ್ಲಿ ವಿಷ್ಣುವರ್ಧನ್, ರಮೇಶ್, ಪ್ರೇಮಾ, ಸೌಂದರ್ಯ, ದ್ವಾರಕೀಶ್, ಸತ್ಯಜಿತ್, ಅವಿನಾಶ್, ಶಿವರಾಮ್, ಪ್ರೇಮಿಳಾ ಜೋಶೋಯ್ ಮೊದಲಾದವರ ತಾರಬಳಗವಿತ್ತು. 2004ರಲ್ಲಿ ಬಿಡುಗಡೆಯಾಗಿದ್ದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಮಲಯಾಳಂನ 'ಮಣಿಚಿತ್ರತ್ತಾಳ್' ರಿಮೇಕ್ ಆಗಿತ್ತು. ಕನ್ನಡದಲ್ಲಿ ಪಿ.ವಾಸು ನಿರ್ದೇಶನ ಮಾಡಿದ್ದರು. ಡಾ.ವಿಜಯ್ ಪಾತ್ರದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡರೆ, ರಮೇಶ್ ಅವರ ಗೆಳೆಯನಾಗಿ ನಟಿಸಿದ್ದರು. ಗಂಗಾ ಮತ್ತು ನಾಗವಲ್ಲಿಯಾಗಿ ಸೌಂದರ್ಯ ಅಭಿನಯಿಸಿದ್ದರು. ಪ್ರೇಮ ವಿಷ್ಣುವರ್ಧನ್ ಗೆ ನಾಯಕಿಯಾಗಿ ನಟಿಸಿದ್ದರು. ಚಿತ್ರಮಂದಿರಗಳಲ್ಲಿ ಈ ಚಿತ್ರ ಒಂದು ವರ್ಷ ಪ್ರದರ್ಶನ ಕಂಡಿದ್ದು, ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದೆ.