ದುನಿಯಾ ಸೂರಿ ತಮ್ಮ ರಾ ಚಿತ್ರಗಳಿಗೆ ಪ್ರಸಿದ್ಧರಾದವರು. ತುಂಬಾ ರಿಯಾಲಿಸ್ಟಿಕ್ ಚಿತ್ರಗಳ ನಿರ್ದೇಶನ ಮಾಡುವ ಸೂರಿ ವಿಷ್ಯುವಲ್ ಆರ್ಟ್ಸ್ ನಲ್ಲಿ ಪದವಿ ಪಡೆದಿದ್ದಾರೆ. ತಮ್ಮ 12 ನೇ ವಯಸ್ಸಿನಿಂದಲೇ ಸೈನ್ ಬೋರ್ಡ್ ಕೆಲಸ ಮಾಡುತ್ತಾ ಹಂತ ಹಂತವಾಗಿ ಮೇಲೆ ಬಂದ ಸೂರಿ ಇಂದು ಕನ್ನಡದ ಬಹು ಬೇಡಿಕೆಯ ನಿರ್ದೇಶಕರು. ಕತ್ತಲೆ ಬೆಳಕಿನ ಆಟವನ್ನು ಸರಿಯಾಗಿ ಸೆರೆಹಿಡಿಯುವ ಸೂರಿ, ತಮ್ಮ ಚಿತ್ರಗಳಲ್ಲಿ ನಮ್ಮ ಸುತ್ತಲಿನ ಜನಜೀವನದ ಜೀವಂತಿಕೆ ಮತ್ತು ಕರಾಳ ಪಾತಕತೆಯನ್ನು ನೇರವಾಗಿ ಬಿಂಬಿಸಿದ್ದಾರೆ. ಸೂರಿ ನಿರ್ದೇಶನದ ಟಾಪ್ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
2007ರಲ್ಲಿ ಬಿಡುಗಡೆಯಾದ 'ದುನಿಯಾ' ಚಿತ್ರದ ಮೂಲಕ ನಾಯಕನಾಗಿ ವಿಜಯ್ ಮತ್ತು ನಿರ್ದೇಶಕನಾಗಿ ಸೂರಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ವಿಜಯ ಮೊದಲ ಸಿನಿಮಾದಲ್ಲೇ ಸಾಕಷ್ಟು ಯಶಸ್ಸು ಗಳಿಸಿದರು. ಈ ಸಿನಿಮಾದಲ್ಲಿನ ನಟನೆಯಿಂದ ಅಭಿಮಾನಿಗಳ ಮನಸ್ಸಿನಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡರು. ಈ ಸಿನಿಮಾದ ಅದ್ಭುತ ನಟನೆಯಿಂದ 'ದುನಿಯಾ' ವಿಜಯ್ ಎಂದೇ ಚಿರಪರಿಚಿತರಾದರು. 'ಯಾರ ಘೋರಿ ಮೇಲೂ ಯಾರು ಯಾಕೆ ಸತ್ತರು ಅಂತ ಬರೆಯಲ್ಲ' ಎಂಬ ಟ್ಯಾಗ್ ಲೈನ್ ನೊಂದಿಗೆ ತೆರೆಕಂಡ ಈ ಚಿತ್ರ ಇಬ್ಬರು ಅನಾಥ ಪ್ರೇಮಿಗಳು, ಪ್ರೀತಿ ಮತ್ತು ಭೂಗತ ಜಗತ್ತಿನ ಛಾಯೆಯಲ್ಲಿ ಕಮರಿ ಹೋಗುವ ಕಥೆಯನ್ನು ಕಟ್ಟಿ ಕೊಟ್ಟಿತು. ದುನಿಯಾ ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನ ಪೂರೈಸಿತ್ತು. ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಿರ್ದೇಶಕ ಸೂರಿ ಅವರು 'ದುನಿಯಾ ಸೂರಿ' ಎಂದೇ ಖ್ಯಾತಿ ಗಳಿಸಿದರು.
ಇಂತಿ ನಿನ್ನ ಪ್ರೀತಿಯ' ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ, ಸೋನು ಗೌಡ ಮತ್ತು ಭಾವನಾ ನಾಯಕಿರಾಗಿ ಅಭಿನಯಿಸಿದ್ದರು. ಇದೊಂದು ದುರಂತ ಕಥೆಯುಳ್ಳ ಸಿನಿಮಾವಾಗಿತ್ತು. ನಾಯಕ (ಶ್ರೀನಗರ ಕಿಟ್ಟಿ) ಮತ್ತು ನಾಯಕಿ (ಸೋನು) ಪರಸ್ಪರ ಪ್ರೀತಿಸುತ್ತಿರುತ್ತಾರೆ. ಆದರೆ ನಾಯಕ ಹಾಗೂ ನಾಯಕಿಯ ಅಣ್ಣನ ಜಗಳದಿಂದಾಗಿ ಇವರಿಬ್ಬರ ಪ್ರೀತಿ ಮುರಿದು ಬೀಳುತ್ತದೆ. ನಂತರದಲ್ಲಿ ಕಿಟ್ಟಿ ಮದ್ಯಪಾನಿಯಾಗುತ್ತಾರೆ. ಇದರಿಂದ ಆತನನ್ನು ಹೊರತರಲು ಮನೆಯವರು ಆತನಿಗೆ ಬೇರೆ ಹುಡುಗಿಯೊಂದಿಗೆ (ಭಾವನಾ) ಮದುವೆ ಮಾಡುತ್ತಾರೆ. ಆಕೆಗೆ ದಾಂಪತ್ಯದ ಬಗ್ಗೆ ಸಾಕಷ್ಟು ಕನಸಿರುತ್ತದೆ. ಆದರೆ, ಅದೆಲ್ಲವೂ ಮೊದಲ ರಾತ್ರಿಯೇ ಮುರಿದು ಬೀಳುತ್ತದೆ. ಇನ್ನೇನು ಎಲ್ಲಾ ಸರಿ ಹೋಯಿತು ಅನ್ನುವಷ್ಟರಲ್ಲಿ ಕಿಟ್ಟಿಯ ಹೆಂಡತಿ ಸಾವನ್ನಪ್ಪುತ್ತಾಳೆ. ಬಳಿಕ ಆತ ಮತ್ತೆ ಮದ್ಯಪಾನಕ್ಕೆ ದಾಸನಾಗುತ್ತಾನೆ. ಇದು ಸಿನಿಮಾ ಕಥೆ. ಈ ಆಧುನಿಕ ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಸಾಂಸಾರಿಕ ಚಿತ್ರಗಳಂತೆ ಮೂಡಿಬಂದ ಈ ಚಿತ್ರ ಮಧ್ಯಪಾನ ಅಡ್ಡ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿತು. ಸಾಧು ಕೋಕಿಲಾ ಸಂಗೀತ ನಿರ್ದೇಶನದ ಚಿತ್ರದ ಹಾಡುಗಳು ಕೇಳುಗರ ಮನಸೆಳೆದವು.
ಜಂಗ್ಲಿ ಸಿನಿಮಾ ಮೂಲಕ ಮತ್ತೊಮ್ಮೆ ವಿಜಯ್ ಚಿತ್ರಕ್ಕೆ ನಿರ್ದೇಶಕ ಸೂರಿ ಆ್ಯಕ್ಸನ್ ಕಟ್ ಹೇಳಿದರು. ಐಂದ್ರಿತಾ ರೈ ನಾಯಕಿಯಾಗಿ ನಟಿಸಿದ್ದ ಈ ಚಿತ್ರದಲ್ಲಿ ರಂಗಾಯಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಹಳೇ ಪಾತ್ರೆ, ಹಳೇ ಕಬ್ಬಿಣ ಹಾಡು ತುಂಬಾ ಪ್ರಸಿದ್ಧಿ ಪಡೆದಿತ್ತು.
ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬಂದ 'ಜಾಕಿ' ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತ್ತು. ಚಿತ್ರದ ಗೀತೆಗಳು, ಡೈಲಾಗ್ಸ್ ಮತ್ತು ಸಾಹಸ ಸನ್ನಿವೇಶಗಳು ಉತ್ತಮವಾಗಿ ಮೂಡಿ ಬಂದಿದ್ದವು. ಅಪ್ಪು ಜೊತೆ ಭಾವನ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಶೋಭಾ ರಾಜ್, ರವಿ ಕಾಳೆ, ರಂಗಾಯಣ ರಘು, ಹೊನವಳ್ಳಿ ಕೃಷ್ಣ, ಸತ್ಯಜಿತ್ ರಾಜು, ತಾಳಿ ಕೋಟೆ, ಉಮೇಶ್, ಹರ್ಷಿಕ ಪೂನಚ್ಹ, ಬಿರಾದಾರ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿತ್ತು.
ಸೆಂಚುರಿ ಸ್ಟಾರ್ ಶಿವ ರಾಜ್ಕುಮಾರ್ ಮತ್ತು ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ನಟನೆಯ 'ಕಡ್ಡಿಪುಡಿ' ಸಿನಿಮಾಗೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ರಾಧಿಕಾ ಅವರು ಉಮಾ ಎಂಬ ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ನಟಿಸಿದರು. ಬಡತನದಲ್ಲಿ ಬೆಳೆಯುವ ಯುವತಿ ಪ್ರಸ್ತುತ ಒಳ್ಳೆಯ ದಾರಿಯಲ್ಲಿ ಸಾಗುತ್ತಿರುವ, ಆದರೆ ರೌಡಿಸಂ ಹಿನ್ನಲೆಯಿರುವ ವ್ಯಕ್ತಿಯನ್ನು ವಿವಾಹವಾದಾಗ ಎದುರಾಗುವ ಸವಾಲುಗಳನ್ನು ಚಿತ್ರ ತೋರಿಸಿತು. ಈ ಚಿತ್ರದ ವಿಶೇಷತೆಯೆಂದರೆ ಈ ಚಿತ್ರಕ್ಕೆ ಯಾರು ನೃತ್ಯ ಸಂಯೋಜಕರಿರಲಿಲ್ಲ. ಚಿತ್ರದ ಐದು ಗೀತೆಗಳಿಗೆ ಚಿತ್ರದ ಕಲಾವಿದರೇ ಸ್ವಯಂ ನೃತ್ಯ ಮಾಡಿದರು.
ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಸಿನಿಮಾ ಕಥೆ ಡ್ರಗ್ಸ್ ಮೇಲೆ ನಿಂತಿತ್ತು. ಪೊಲೀಸರು ಡ್ರಗ್ಸ್ನಿಂದ ಹೇಗೆ ಹಣ ಗಳಿಸುತ್ತಾರೆ. ಅದನ್ನು ಮುಚ್ಚಿಡುವುದು ಹೇಗೆ? ಡ್ರಗ್ಸ್ ಪ್ರಕರಣಗಳಲ್ಲಿ ಅಮಾಯಕರು ಹೇಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಮಾನ್ವಿತಾ ಕಾಮತ್ ಹಾಗೂ ವಿಕ್ಕಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಪೋಲಿಸ್ ಇಲಾಖೆಯಲ್ಲಿನ ಕೆಂಡದಂತ ಕ್ರೌರ್ಯ ಮತ್ತು ಸಂಪಿಗೆಯಂತ ಎಳೆ ಪ್ರೇಮಿಗಳ ಕಥೆಯನ್ನು ಹೊಂದಿದ್ದ ಇ ಸಿನಿಮಾ ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಮೂಡಿಸಿತ್ತು.
2018ರಲ್ಲಿ ತೆರೆಕಂಡ ಟಗರು ಚಿತ್ರ ಪೊಲೀಸ್ ಮತ್ತು ಡೆಡ್ಲಿ ರೌಡಿಗಳ ಕಣ್ಣಾಮುಚ್ಚಾಲೆಯನ್ನು ತೋರಿಸತ್ತು. ಖಡಕ್ ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ಮತ್ತು ಕ್ರೌರ್ಯದ ಪ್ರತಿರೂಪ ಡಾಲಿಯಾಗಿ ಧನಂಜಯ ಮಿಂಚಿದ್ದರು. ಮಾನ್ವಿತಾ ಕಾಮತ್, ಭಾವನ ಮೆನನ್, ವಸಿಸ್ಠ ಸಿಂಹ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಕರ್ತವ್ಯದಲ್ಲಿ ಪೊಲೀಸ್. ಆದರೆ ಮನಸ್ಸಿನ ತೃಪ್ತಿಗಾಗಿ ಖಾಕಿ ಧರಿಸಿ ಕೆಲಸ ಮಾಡುವ ನಾಯಕ (ಶಿವರಾಜ್ ಕುಮಾರ್), ಪುಡಿ ರೌಡಿ ಆಗಿದ್ದುಕೊಂಡು ಡಾನ್ ಆಗಬೇಕೆಂಬ ಕನಸು ಹೊತ್ತು ಟಗರಿನ ಮುಂದೆ ಕಾಳಗಕ್ಕೆ ಇಳಿಯುವ ಖಳನಾಯಕ ಡಾಲಿ ಅಲಿಯಾಸ್ ನಿಂಬೆ (ಧನಂಜಯ) ಯುವ ಕವಿಯಾಗಿ ಯಾರದ್ದೋ ಪ್ರೀತಿಗೆ ಸಹಾಯ ಮಾಡಲು ಹೋಗಿ ರೌಡಿ ಆಗುವ ಮತ್ತೊಬ್ಬ ಖಳನಾಯಕ ಚಿಟ್ಟೆ ಅಲಿಯಾಸ್ ಚಿತ್ತರಂಜನ್ (ವಸಿಷ್ಠ ಸಿಂಹ). ಡಾಲಿ ತಮ್ಮ ಕಾಕ್ರೋಚ್ ಇವರುಗಳ ಜೊತೆ ನಾಯಕಿಯರಾಗಿ ಮಾನ್ವಿತಾ ಹರೀಶ್ ಹಾಗೂ ಭಾವನಾ. ಪೊಲೀಸ್ ಹಾಗೂ ರೌಡಿಗಳ ಮಧ್ಯೆ ನಡೆಯೋ ಸಮರವೇ 'ಟಗರು' ಸಿನಿಮಾದ ಜೀವಾಳ.
ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ದೊಡ್ಮನೆ ಹುಡುಗ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದರು. ಇದು ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ 25ನೇ ಚಿತ್ರ. ಈ ಚಿತ್ರದ `ಅಭಿಮಾನಿಗಳೇ' ಗೀತೆಯನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗಿತ್ತು, ಈ ಚಿತ್ರದಲ್ಲಿ ಅಂಬರೀಶ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಇವರ ಜೊತೆಗೆ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್, ಚಿಕ್ಕಣ್ಣ, ರವಿಶಂಕರ್ ಮುಂತಾದವರು ಅಭಿನಯಿಸಿದ್ದರು. ಇ ಚಿತ್ರದಲ್ಲಿ ಪುನೀತ್ ಹುಬ್ಬಳ್ಳಿಯಲ್ಲಿ ರಸ್ತೆಬದಿ ಪ್ಲೇಟ್ ಲೆಕ್ಕದಲ್ಲಿ ಬಿರಿಯಾನಿ ಮಾರುವ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಪುನೀತ್ ಮತ್ತು ರಾಧಿಕಾರ `ತ್ರಾಸ್ ಆಕ್ಕೈತಿ' ಗೀತೆ ತುಂಬಾ ಗಮನ ಸೆಳೆದಿತ್ತು.
ದುನಿಯಾ ಸೂರಿ ನಿರ್ದೇಶನದ 'ಅಣ್ಣಾಬಾಂಡ್' ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಪ್ರಿಯಾಮಣಿ ನಾಯಕಿಯಾಗಿ ಅಭಿನಯಿಸಿದ್ದರು. ಡ್ರಗ್ಸ್ ಮಾಫಿಯಾ ಪಾತಕಗಳಿಗೆ ಸಮಾಜದ ಕೆಲವರು ಬಲಿಯಾಗುವ ಕಥೆಯ ಎಳೆಯೊಂದಿಗೆ ಸಮಾಜ ಸುಧಾರಣೆ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕೆಂಬ ಸಿದ್ಧಾಂತವೂ ಸಿನಿಮಾದಲ್ಲಿತ್ತು. ಈ ಸಿನಿಮಾದಲ್ಲಿ ರಂಗಾಯಣ ರಘು ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. 'ಅಣ್ಣಾಬಾಂಡ್' ಸಿನಿಮಾದಲ್ಲಿ ಲವ್ ಸ್ಟೋರಿ, ಫೈಟ್ಸ್, ಡ್ಯಾನ್ಸ್ ಎಲ್ಲವೂ ಇದ್ದು ಪ್ರೇಕ್ಷಕರ ಮನಗೆದ್ದಿತ್ತು.