ಎದೆ ಧಸಕ್ ಎನ್ನಿಸುವ ಬಿಗ್ ಬಿ ರಸಪ್ರಶ್ನೆ ಕಾರ್ಯಕ್ರಮ
"ಕೌನ್ ಬನೇಗಾ ಕರೋಡ್ಪತಿ" ನಾಲ್ಕನೆ ಆವೃತ್ತಿ ಅಕ್ಟೋಬರ್ 11ರಿಂದ ಝಗಮಗಿಸಲು ವೇದಿಕೆ ಸಿದ್ಧವಾಗಿದೆ. ಈ ರಸಪ್ರಶ್ನೆ ಕಾರ್ಯಕ್ರಮವನ್ನು ಮತ್ತಷ್ಟು ರಸವತ್ತಾಗಿ ಬಿತ್ತರಿಸಲು ಸೋನಿ ಟಿವಿ ಮುಂದಾಗಿದೆ. ಬಿಗ್ ಬಿ ಮಗಅಭಿಷೇಕ್ ಬಚ್ಚನ್ ಹಾಗೂ ಅವರ ಮುದ್ದಿನ ಸೊಸೆ ಐಶ್ವರ್ಯ ರೈ ಅವರನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಲು ಚಿಂತಿಸಲಾಗಿದೆ.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ತೂರಿ ಬರುವ ಪ್ರಶ್ನೆ ಹೀಗೇ ಇರುತ್ತದೆ ಎಂದು ಊಹಿಸುವುದು ಅಸಾಧ್ಯ. ಅದು ರಾಜಕೀಯ, ಇತಿಹಾಸ, ವಿಜ್ಞಾನ, ಚಿತ್ರರಂಗ ಯಾವುದೇ ಕ್ಷೇತ್ರದಿಂದ ಪ್ರಶ್ನೆ ತೂರಿಬರಬಹುದು. ಉತ್ತರ ಕೊಟ್ಟ ಬಳಿಕ ತುದಿಗಾಲಲ್ಲಿ ನಿಲ್ಲುವಂತೆ ಮಾಡುವುದು ಬಿಗ್ ಬಿ ವಿಶೇಷತೆ.
"ಶೂರ್, ಆರ್ ಯು ಕಾನ್ಫಿಡೆಂಟ್, ಲಾಕ್ ಕಿಯಾ ಜಾಯೇಗಾ..." ಎನ್ನುತ್ತಿದ್ದರೆ ಎಂತವರಿಗೂ ಎದೆ ಧಸಕ್ ಎನ್ನದೆ ಇರದು. ಅದೇ ಬಿಗ್ ಬಿ ಸ್ಪೆಷಾಲಿಟಿ. ಕಿಂಗ್ ಖಾನ್ ಶಾರುಖ್ ಅವರನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಎಂಬ ಸುದ್ದಿಯೂ ಇದೆ. ಈಗಾಗಲೆ ಶಾರುಖ್ ಅವರನ್ನು ಸೋನಿ ಟಿವಿ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಮಾತುಕತೆಯ ವಿವರಗಳನ್ನು ಮಾತ್ರ ಸೋನಿ ಟಿವಿ ಬಹಿರಂಗಪಡಿಸಿಲ್ಲ.
ಬಾಲಿವುಡ್ ತಾರೆಗಳಾದ ಸಂಜಯ್ ದತ್ ಹಾಗೂ ಜಾನ್ ಅಬ್ರಹಾಂ ಅವರು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇವರನ್ನೆಲ್ಲಾ ನೋಡಿ ಆನಂದಿಸಬೇಕಾದರೆ ಅಕ್ಟೋಬರ್ 11ರ ತನಕ ಕಾಯಲೇಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ಸಾಮಾನ್ಯ ಜ್ಞಾನದ ಜೊತೆಗೆ ಅಸಾಮಾನ್ಯ ಜ್ಞಾನವೂ ಬೇಕಾಗುತ್ತದೆ ಎಂಬುದು ಬಲ್ಲವರಅಭಿಪ್ರಾಯ.
ಈ ಕಾರ್ಯಕ್ರಮದ ಬಗ್ಗೆ ಬಿಗ್ ಬಿ ಪ್ರತಿಕ್ರಿಸಿದ್ದು ಹೀಗೆ, ಅಲಹಾದ್ ಪಕ್ಕದಲ್ಲಿರುವ ಅಲ್ಲಾಪುರದ ಗಲ್ಲಿಯೊಂದಕ್ಕೆ ನನ್ನ ಹೆಸರನ್ನು ಇಡಲಾಗಿದೆಯಂತೆ. ನನಗೆ ತುಂಬ ಹೆಮ್ಮೆ ಅನ್ನಿಸಿತು. ಕಾರಣ ನಾನು ಹುಟ್ಟಿದ್ದು ಅಲ್ಲೇ. ಮೊದಲ ಸ್ಪರ್ಧಿ ಹೇಳುವವರೆಗೂ ಈ ವಿಷಯ ನನಗೆ ಗೊತ್ತೇ ಇರಲಿಲ್ಲ. ನೀವು ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದಾಗ ಅವರು ಹೇಳಿದ್ದು ಕೇಳಿ ಖುಷಿಯಾಯಿತು ಎಂದಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮದಲ್ಲಿ ರು.5 ಕೋಟಿ ಗೆಲ್ಲುವ ಅವಕಾಶವಿದೆ. ಈ ಹಿಂದೆ ರು.1 ಕೋಟಿ ಇದ್ದ ಬಹುಮಾನದ ಮೊತ್ತವನ್ನು ರು.5ಕೋಟಿಗೆ ಹೆಚ್ಚಿಸಲಾಗಿದೆ.


Click it and Unblock the Notifications











