Don't Miss!
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಕುಲ್ ಅಭಯಂಕರ್ ಸರಿಗಮಪ ಚಾಂಪಿಯನ್
ಕರ್ನಾಟಕ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಜೀ ಕನ್ನಡದ ಸರಿಗಮಪ ಚಾಲೆಂಜ್ ಸಂಗೀತ ಸಮರದ ಚಾಂಪಿಯನ್ ಆಗಿ ಮಂಗಳೂರಿನ ನಕುಲ್ ಅಭಯಂಕರ್ ಹೊರ ಹೊಮ್ಮಿದ್ದಾರೆ. ಅವರು ಅಂತಿಮ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಎರಡು ಲಕ್ಷ ರೂಪಾಯಿಗಳ ಬಾರಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಕಣದಲ್ಲಿ ಕೊಡಗಿನ ದೀಪಕ್, ಮೈಸೂರಿನ ಇಂದು ನಾಗರಾಜ್, ದಿವ್ಯ ಹಾಗೂ ಪುರುಷೋತ್ತಮ್ ಸ್ಪರ್ಧೆಯಲ್ಲಿದ್ದರು.
ಅಂತಿಮ ಹಣಾಹಣಿ ನಾಲ್ಕು ಸುತ್ತುಗಳಲ್ಲಿ ನಡೆಯಿತು. ಮಾಧುರ್ಯ ಗೀತೆಗಳು, ತೀರ್ಪುಗಾರರ ಆಯ್ಕೆ, ಲೆಜೆಂಡರಿ ಸ್ಪೆಷಲ್ ಹಾಗೂ ಫಾಸ್ಟ್ ಬೀಟ್ ಸುತ್ತುಗಳಲ್ಲಿ ಸ್ಪರ್ಧಿಗಳು ಹಾಡಿದರು. ಅಂತಿಮ ಸುತ್ತಿನ ಸ್ಪರ್ಧಿಗಳೆಲ್ಲರೂ ಉತ್ತಮ ಗಾಯಕ ಪ್ರತಿಭೆಗಳಾಗಿದ್ದು ನಿರೀಕ್ಷೆಯಂತೆಯೇ ಎಲ್ಲರ ನಡುವೆ ಕಠಿಣ ಸ್ಪರ್ಧೆ ನಡೆಯಿತು.
ಅಂತಿಮವಾಗಿ ನಕುಲ್ ಅಭಯಂಕರ್ ಚಾಂಪಿಯನ್ ಪ್ರಶಸ್ತಿ ಪಡೆದರೆ ಇವರಿಗೆ ತೀವ್ರ ಪೈಪೋಟಿ ನೀಡಿದ ಮೈಸೂರಿನ ಇಂದು ನಾಗರಾಜ್ ಪ್ರಥಮ ರನ್ನರ್ ಅಪ್ ಸ್ಥಾನಗಳಿಸುವ ಮೂಲಕ 1ಲಕ್ಷ ರೂಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡರು, ಮಡಿಕೇರಿಯ ದೀಪಕ್ 2ನೇ ರನ್ನರ್ ಅಪ್ ಆಗುವ ಮೂಲಕ 50 ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡರು. ಇಂಡಿಯಾಗೇಟ್ ಬಾಸುಮತಿ ರೈಸ್ ಕಂಪೆನಿ ಬಹುಮಾನಗಳನ್ನು ಪ್ರಾಯೋಜಿಸಿತು.
ಫೈನಲ್ಸ್ ಸ್ಪರ್ಧೆಯ ಈ ಸಂಚಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗೀತರಚನಾಕಾರ ಹಂಸಲೇಖ ಮುಖ್ಯ ತೀರ್ಪುಗಾರರಾಗಿದ್ದು ಖ್ಯಾತ ಗಾಯಕ ಹಾಗೂ ಗಾಯಕಿಯಾರಾದ ರಾಜೇಶ್ ಕೃಷ್ಣನ್, ಹೇಮಂತ್, ನಂದಿತಾ ಹಾಗೂ ಅರ್ಚನಾ ಉಡುಪ ಸಹ ತೀರ್ಪುಗಾರರಾಗಿದ್ದರು. ಕನ್ನಡ ಚಲನಚಿತ್ರ ರಂಗದ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಮನೋಮೂರ್ತಿ, ಗುರುಕಿರಣ್, ಅರ್ಜುನ್, ಕವಿರಾಜ್ ಹಾಗೂ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜೇತರಿಗೆ ಬಹುಮಾನವನ್ನು ಇಂಡಿಯಾಗೇಟ್ ಬಾಸುಮತಿ ರೈಸ್ನ ಮುಖ್ಯಸ್ಥ ಶ್ರೀನಿವಾಸ್, ಜೀ ಸಮೂಹದ ಗೌತಮ್ ಮಾಚಯ್ಯ ಮತ್ತು ಜೆ. ಶೇಖರ್ ವಿತರಿಸಿದರು. ಖ್ಯಾತ ಗಾಯಕಿ ಲಕ್ಷ್ಮಿ ಮನಮೋಹನ್ ಕಾರ್ಯಕ್ರಮವನ್ನು ನಿರೂಪಿಸಿದರು.