ಯಾರಾಗಲಿದ್ದಾರೆ ಜೀ ಕನ್ನಡದ ಕನಸಿನ ಕಣ್ಮಣಿ?
ಕನ್ನಡದ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ವಿಭಿನ್ನತೆ ಹಾಗೂ ಹೊಸತನ ಮೂಡಿಸಿದ ಜೀ ಕನ್ನಡದ ನೂತನ ರಿಯಾಲಿಟಿ ಶೋ 'ಕನಸಿನ ಕಣ್ಮಣಿ' ಇದೀಗ ಅಂತಿಮ ಘಟ್ಟ ತಲುಪಿದೆ. ಕಳೆದ ಮೂರು ತಿಂಗಳ ಹಿಂದೆ ಆರಂಭವಾದ ಈ ಕಾರ್ಯಕ್ರಮ ಉತ್ತಮತೆಯಲ್ಲಿ ಅತ್ಯುತ್ತಮ ಎನ್ನಬಹುದಾದ ವಧು ಓರ್ವಳನ್ನು ಹುಡುಕುವ ಕುತೂಹಲ ಭರಿತ ಕಾರ್ಯಕ್ರಮವಾಗಿತ್ತು. ವಿವಿಧ ಹಂತಗಳನ್ನು ದಾಟಿ ಬಂದಿರುವ 'ಕನಸಿನ ಕಣ್ಮಣಿ'ಯ ಫೈನಲ್ ಸಂಚಿಕೆ ದಿನಾಂಕ ಆಗಸ್ಟ್ 6ರ ಶುಕ್ರವಾರ ರಾತ್ರಿ 9 ಗಂಟೆಯಿಂದ ನಿಮ್ಮ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಕನ್ನಡಿಗರಿಗೆ ಹೊಸತನದ ಕಾರ್ಯಕ್ರಮಗಳನ್ನು ನೀಡುತ್ತಿರುವ ಜೀ ಕನ್ನಡ ಕನಸಿನ ಕಣ್ಮಣಿಯಂತಹ ಕಾರ್ಯಕ್ರಮವನ್ನು ಸಹ ಹೊಸತನದೊಂದಿಗೆ ಆರಂಭಿಸಿತ್ತು. ಸುಮಾರು 24 ಸಂಚಿಕೆಗಳಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದಾದ್ಯಂತ ಅರ್ಜಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತಿಯಿಂದ ಸಾವಿರಾರು ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು ಆದರೆ ಅಂತಿಮವಾಗಿ ಆಯ್ಕೆಯಾಗಿದ್ದವರು 12 ಜನ ಮಾತ್ರ.
ಇವರ ನಡುವೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಒಬ್ಬಳು ಆದರ್ಶ ವಧು ಹೇಗಿರಬೇಕು ಎಂಬುದರ ಕುರಿತಂತೆ ವಿವಿಧ ಹಂತಗಳಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳನ್ನು ಎದುರಿಸಿ ಏಳು ಜನರಷ್ಟೇ ಸೆಮಿಫೈನಲ್ಸ್ಗೆ ಅರ್ಹತೆ ಸಂಪಾದಿಸಿದ್ದರು. ಈ ಪೈಕಿ ಇಬ್ಬರು ಸ್ಪರ್ಧೆಯಿಂದ ಹೊರಗುಳಿದಿದ್ದು ಉಳಿದ ಐದು ಯುವತಿಯರು ಫೈನಲ್ಸ್ ಪ್ರವೇಶಿಸಿದ್ದಾರೆ.
ಫೈನಲ್ಸ್ನಲ್ಲಿಯೂ ವಿವಿಧ ಹಂತಗಳಿದ್ದು ಪ್ರತಿಯೊಂದು ಹಂತದಲ್ಲಿಯೂ ಯುವತಿಯೋರ್ವಳು ಪರಿಪೂರ್ಣ ವಧುವಾಗುವಂತಹ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾಳೆಯೇ ಎಂಬುದನ್ನು ಓರೆಗೆ ಹಚ್ಚಲಾಗುತ್ತದೆ. ಆಕೆಯ ಸೌಂದರ್ಯ, ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ, ಸಹಜತೆ, ಸಹಬಾಳ್ವೆ ಹಾಗೂ ಸಹನಾಶೀಲತೆ ಹೀಗೆ ವಿವಿಧ ಮೌಲ್ಯಗಳ ಕುರಿತಂತೆ ಪರೀಕ್ಷೆ ನಡೆಸಿ ಅಂತಿಮವಾಗಿ ಓರ್ವಳನ್ನು ಪರಿಪೂರ್ಣ ವಧುವೆಂದು ಘೋಷಿಸಲಾಗುತ್ತದೆ.
ಆಕೆಯ ಗುಣಾವಗುಣಗಳ ವಿಶ್ಲೇಷಣೆ ನಡೆಸಿ ಅಂತಿಮವಾಗಿ ಅತ್ಯುತ್ತಮ ವಧುವಿನ ಆಯ್ಕೆ ಮಾಡುವ ಸಮಯ ಸನ್ನಿಹಿತವಾಗಿದೆ. ಅಂತಿಮ ವಿಜೇತರಿಗೆ ಕನಸಿನ ಕಣ್ಮಣಿ "Karnataka"s Best Bride 2010" ಎಂಬ ಬಿರುದಿತ್ತು ಸನ್ಮಾನಿಸಲಾಗುವುದು ಎಂದು ಜೀ ಕನ್ನಡದ ವ್ಯವಹಾರಗಳ ಮುಖ್ಯಸ್ಥರಾದ ಜೆ.ಶೇಖರ್ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಹಾಗೂ ನಟ ವಿಜಯರಾಘವೇಂದ್ರ ತೀರ್ಪುಗಾರರಾಗಿದ್ದು ಅತ್ಯುತ್ತಮ ವಧುವನ್ನು ಅವರು ಆಯ್ಕೆ ಮಾಡಲಿದ್ದಾರೆ. ಅಂತಿಮ ಸ್ಪರ್ಧೆ ಮನಮೋಹಕವಾಗಿದ್ದು ನೃತ್ಯ ಹಾಗೂ ವೈವಿಧ್ಯಮಯ ಪ್ರದರ್ಶನಗಳನ್ನು ಒಳಗೊಂಡಿದೆ. ಅಂತಿಮ ಸಂಚಿಕೆಗೆ ನಾಯಕ ನಟ ಕಿರಣ್ ಅವರ ಲವಲವಿಕೆಯ ನಿರೂಪಣೆ ಇದೆ.


Click it and Unblock the Notifications











