ರಂಗನಾಥ್ ಟಿವಿ ಚಾನೆಲ್ ಗೆ ಲಹರಿ ವೇಲು ದುಡ್ಡು

ಹೀಗೊಂದು ಪ್ರಶ್ನೆ ಕರ್ನಾಟಕ ಮಾಧ್ಯಮ ವಲಯಗಳಲ್ಲಿ ಹಲವು ದಿನಗಳಿಂದ ಸುಳಿದಾಡುತ್ತಿದೆ. ಸ್ವಯಂ ರಂಗನಾಥ್ ಅವರೇ ತಮ್ಮ ದುಡ್ಡನ್ನೇ ಹಾಕುತ್ತಿದ್ದಾರೆಂದು ಹಲವರು ಹೇಳುತ್ತಿದ್ದರು.
ಆದರೆ, ಈ ಊಹೆ ತಪ್ಪು, ರಂಗಣ್ಣ ದುಡ್ಡು ಹಾಕುತ್ತಿಲ್ಲ. ನಿಜಕ್ಕೂ ಬಂಡವಾಳ ಹೂಡುತ್ತಿರುವವರು ಚಿತ್ರ ನಿರ್ಮಾಪಕ ವಿತರಕ ಹಾಗೂ ನಟ ರಾಕ್ ಲೈನ್ ವೆಂಕಟೇಶ್ ಎಂಬ ಸುದ್ದಿಯೂ ಹರಿದಾಡುತ್ತಿತ್ತು.
ಎರಡು ಊಹೆ ಸಾಲದು ಎಂಬಂತೆ ನಿರ್ಮಾಪಕ ಮುನಿರತ್ನ ಚಾನೆಲ್ ಗೆ ಹಣ ಹಾಕುತ್ತಿದ್ದಾರೆ ಎಂಬ ಮೂರನೇ ಗಾಳಿಪಟವೂ ಬೆಂಗಳೂರು ನಭೋಮಂಡಲದಲ್ಲಿ ತೇಲಾಡುತ್ತಿತ್ತು. ಆದರೆ ಈ ಎಲ್ಲಾ ಗಾಸಿಪ್ ಗಳ ತಲೆಯ ಮೇಲೆ ಹೊಡೆದಂತೆ ಹೊಸ ಗಾಸಿಪ್ ಎಂಟ್ರಿ ಪಡೆದಿದೆ.
ಅದೇನಪ್ಪ ಅಂದರೆ ಲಹರಿ ರೆಕಾರ್ಡಿಂಗ್ ಕಂಪೆನಿಯ ಮಾಲೀಕ ಲಹರಿ ವೇಲು 'ಕದಂಬ' ನ್ಯೂಸ್ ಚಾನೆಲ್ ಗೆ ಹಣ ಹಾಕಿದ್ದಾರೆ ಎನ್ನುವ ಸ್ಪೋಟಕ ಸುದ್ದಿ ಮಂಗಳವಾರ ಮುಸ್ಸಂಜೆ ಹೊರಬಿದ್ದಿದೆ.
ಅಸಂಖ್ಯಾತ ಕನ್ನಡ ಚಲನಚಿತ್ರಗಳ ಆಡಿಯೋಗಳನ್ನೂ ಹೊರತಂದ ಖ್ಯಾತಿ ಲಹರಿಗೆ ಸಲ್ಲುತ್ತದೆ. ಈ ಸಂಸ್ಥೆ ಇದೀಗ ಟಿವಿ ವಾಹಿನಿಯ ಮೂಲಕ ಹೊಸತನಕ್ಕೆ ತುಡಿಯುತ್ತಿದೆ ಎಂದು ಹೇಳಲಾಗುತ್ತಿದೆ. ಮಾರ್ಕೆಟಿಂಗ್ ವಿಭಾಗದಲ್ಲಿ ಚೆನ್ನಾಗಿ ಪಳಗಿರುವ ವೇಲು, ಟಿವಿ ವಾಹಿನಿಯನ್ನೂ ಕೂಡ ಮಾರ್ಕೆಟಿಂಗ್ ಮಾಡಬಲ್ಲರೇ ಎಂಬ ಕುತೂಹಲ ಇದೀಗ ಉದ್ಭವಿಸಿದೆ.
ಏನೇ ಆಗಲಿ, ಮೂಲತಃ ತೆಲುಗು ಭಾಷಿಗರಾದರೂ ಕನ್ನಡ ನಾಡಿನಲ್ಲಿ ಕನ್ನಡ ಸೇವೆಯನ್ನೇ ಮಾಡುತ್ತಿರುವ ಲಹರಿ ವೇಲು ಅವರ ಟಿವಿ ಸಾಹಸ ಕೂಡಾ ಕನ್ನಡ ಮುಖಾಂತರವೇ ಆಗುತ್ತಿರುವುದು ಸುವಾರ್ತೆ ಎಂದು ನಮ್ಮ ಗಾಂಧಿನಗರದ ಪಾರ್ಟ್ ಟೈಮ್ ರಿಪೋರ್ಟರ್ ಎಸ್ ಎಂ ಎಸ್ ಮೂಲಕ ತಿಳಿಸಿದ್ದಾರೆ.


Click it and Unblock the Notifications











