ಸುವರ್ಣ ಕಾರ್ಯಕ್ರಮದಲ್ಲಿ ದ್ವಾರಕೀಶ್ ಮಾಡಿದ್ದೇನು?

ಅವರ ನಿರೂಪಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ ಅಚ್ಚುಕಟ್ಟಾಗಿ ಯಾವುದೇ ಬಾಲಿವುಡ್ ಪ್ರಶಸ್ತಿ ಸಮಾರಂಭಕ್ಕೆ ಹೋಲಿಸಬಹುದಾದ ಕಾರ್ಯಕ್ರಮ ಇದಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಹೆಚ್ಚುಕಮ್ಮಿ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ರೆಬೆಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಕಿಚ್ಚ ಮುಂತಾದವರು ಗೈರು ಹಾಜರಾಗಿದ್ದರೆ, ಅದೇಕೋ ಕನ್ನಡ ಚಿತ್ರರಂಗದ ಅಮ್ಮ ಪಾರ್ವತಮ್ಮ ರಾಜಕುಮಾರ್ ಇತ್ತೀಚಿಗೆ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಅದು ಬಿಟ್ಟರೆ ಜೂಲಿ ಲಕ್ಷ್ಮಿ, ಸರಿತಾ ಕೂಡ ಭಾಗವಹಿಸಿದ್ದರು. ಡಾ.ರಾಜ್ ನೆನಪಿನಲ್ಲಿ ಭಾವೋದ್ರೇಕಕ್ಕೆ ಒಳಗಾಗಿ ವೇದಿಕೆಯಲ್ಲೇ ಕಣ್ಣೀರಿಟ್ಟು ಸರಿತಾ ನಿರ್ಗಮಿಸಿದ್ದು ಬೇಸರದ ಸಂಗತಿ.
ಪ್ರಶಸ್ತಿ ವಿತರಿಸಲು ವೇದಿಕೆಗೆ ಆಗಮಿಸಿದ 'ಪ್ರಚಂಡಕುಳ್ಳ' ದ್ವಾರಕೀಶ್ ತನ್ನ ಎಂದಿನ ದಾಟಿಯಲ್ಲಿ ಮಾತಿಗಿಳಿದರು. ತಾನು ಚಿತ್ರರಂಗಕ್ಕೆ ಬಂದಿದ್ದು, ರಾಜಣ್ಣ ಜೊತೆಗಿನ ಒಡನಾಟ, ವಿಷ್ಣು ಜೊತೆಗಿನ ಸ್ನೇಹ, ತನ್ನ 49 ವರ್ಷದ ಚಿತ್ರ ಪಯಣದ ಬಗ್ಗೆ ವಿವರಿಸುತ್ತಾ ನಿರೀಕ್ಷೆಯಂತೆ ತನ್ನ ಮುಂದಿನ "ವಿಷ್ಣುವರ್ಧನ' ಚಿತ್ರದ ಬಗ್ಗೆ ಮಾತು ಹೊರಳಿಸಿದರು.
ತಾನು ಮತ್ತು ವಿಷ್ಣು ಇಬ್ಬರೂ ಆಪ್ತಮಿತ್ರರು. ಇದರ ಬಗ್ಗೆ ಸಂಶಯ ಬೇಡ, ನನಗೆ ಅವನ ಮೇಲಿನ ಪ್ರೀತಿಯೇ ಈ ಚಿತ್ರ ತೆಗೆಯಲು ಸ್ಫೂರ್ತಿ. ನನ್ನ ಮನದಲೆಲ್ಲಾ ಅವನೇ ತುಂಬಿರುವಾಗ ಅವನ ಹೆಸರಿನಲ್ಲಿ ಚಿತ್ರ ತೆಗೆಯುವುದು ಏನು ತಪ್ಪು? ಎಂದು ಸಮರ್ಥನೆ ನೀಡಿದರು.
ಮಾತು ಮುಂದುವರಿಸುತ್ತಾ, ನಾನು ಈ ಚಿತ್ರವನ್ನು ವಿಷ್ಣುವಿಗೆ ಅರ್ಪಿಸುತ್ತೇನೆ. ವ್ಯಾಪಾರ ದೃಷ್ಟಿಯಿಂದ ನಾನು ಈ ಚಿತ್ರ ನಿರ್ಮಿಸುತ್ತಿಲ್ಲ.ಅದೇನು ತೊಂದರೆ ಬಂದರೂ ಎದುರಿಸುತ್ತೇನೆ. ನನ್ನ ಸ್ನೇಹಿತನಿಗಾಗಿ ಈ ಚಿತ್ರ ತೆರೆಗೆ ತಂದೇ ತರುತ್ತೇನೆ ಎಂದು ಕನ್ನಡಕ ಒರೆಸಿಕೊಂಡು ಘೋಷಿಸಿಯೇ ಬಿಟ್ಟರು. ದ್ವಾರಕೀಶ್ ವೇದಿಕೆಗೆ ಬರುವ ಮುಂಚೆ ಅಲ್ಲೇ ಇದ್ದ ಭಾರತಿ ವಿಷ್ಣುವರ್ಧನ್ ಎದ್ದು ಹೋಗುವ ಮೂಲಕ ಇದೇ ನನ್ನ ಉತ್ತರ ಎಂಬಂತಿತ್ತು.


Click it and Unblock the Notifications











