ಸಿಹಿಕಹಿ ಚಂದ್ರು ಕ್ಯಾಷ್ ಬಾಕ್ಸ್ನಲ್ಲಿ ಜಿರಲೆ

ಆದಾಯ ತೆರಿಗೆ ದಾಳಿ ಎಂಬ ಸೌಂಡ್ ಕೇಳಿದಾಕ್ಷಣ ಸಾವಿರ, ಐದುನೂರರ ಕಂತೆ ಕಂತೆ ನೋಟುಗಳು, ಆಲ್ ಮೈರಾದಿಂದ ಇಣುಕುತ್ತಿರುವ ಬಂಗಾರದೊಡವೆಗಳು, ಭೂಮಿ, ತೋಟ, ಬಂಗಲೆಗಳನ್ನು ನೊಂದಾಯಿಸಿದ ಪತ್ರಗಳ ಚಿತ್ರ ನಿಮ್ಮ ಕಣ್ಣುಂದೆ ಹಾದು ಹೋಗುವುದು ಅಭ್ಯಾಸ. ನಮ್ಮ ಸಿನಿ ಕರ್ಮಿಗಳ ಮನೆಯಲ್ಲಿ ಇವೆಲ್ಲ ಸಿಕ್ಕವೇ?
ರವಿಕಿರಣ್ ಮತ್ತು ಕೊಬ್ಬರಿ ಮಂಜಣ್ಣರ ಮನೆ ಮೇಲೆ ದಾಳಿ, ತೆರಿಗೆ ವಂಚನೆ ಮತ್ತು ಸಂಪತ್ತಿನ ಲೆಕ್ಕ ಪತ್ರಗಳು ನಮಗೆ ತಿಳಿದುಬಂದಿಲ್ಲ. ಆದರೆ, ಸಿಹಿಕಹಿ ಚಂದ್ರು ಮನೆಯ ಮೇಲೆ ನಡೆದ ದಾಳಿಯ ವೇಳೆ ತೆರಿಗೆ ಅಧಿಕಾರಿಗಳಿಗೆ ದೊರೆತ ಅಕ್ರಮ ಸಂಪತ್ತಿನ ವರದಿ ಓದಿದರೆ ನೀವು ಹೌಹಾರಿ ಬೀಳುವುದು ಖಂಡಿತ.
ಚಂದ್ರು ಮನೆಯಲ್ಲಿ ಸಿಕ್ಕಿದ್ದು ಹತ್ತು ಸಾವಿರ ರೂ ನಗದು ಮತ್ತು 20 ಗ್ರಾಂ ಬಂಗಾರ ಮಾತ್ರ ಎಂದು ಸ್ವತಃ ಚಂದ್ರು ಅವರೇ ಭಾನುವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು. ಜೊತೆಗೆ, ಅವರ ಮನೆಯಲ್ಲಿ ಒಂದು ಕ್ಯಾಷ್ ಬಾಕ್ಸ್ ಇದೆಯಂತೆ. ಅದನ್ನು ತೆರೆದು ನೋಡಿ ವರ್ಷಗಳೇ ಆಗಿತ್ತಂತೆ. ಅದರ ಕೀಲಿ ಕೈ ಕೇಳಿ ಬೀಗ ತೆಗೆದು ನೋಡಿದ ಅಧಿಕಾರಿಗಳಿಗೆ ಸಿಕ್ಕಿದ್ದು ಯಾವತ್ತೋ ಸತ್ತು ನೆಗೆದು ಬಿದ್ದಿದ್ದ ಒಂದೇ ಒಂದು ಜಿರಲೆ ಅಂತೆ , ಅಂತ ಚಂದ್ರು ಹೇಳಿದರು.
ನಾನು ತೆರಿಗೆ ವಂಚಿಸುವ ಪ್ರಮೇಯವೇ ಇಲ್ಲ. ಟಿವಿಗೆ ಮಾಡಿಕೊಡುವ ಧಾರಾವಾಹಿ ಮತ್ತಿತರ ಕಾರ್ಯಕ್ರಮಗಳ ಫೀ ಚೆಕ್ ಮೂಲಕವೇ ಬರುತ್ತದೆ. ಅವರು TDS ಹಿಡಿದುಕೊಂಡೇ ಚೆಕ್ ರಿಲೀಜ್ ಮಾಡುತ್ತಾರೆ. ಹೀಗಿರುವಾಗ ವಂಚನೆ ಮಾಡುವುದು ಹೇಗೆ? ಎಂದು ಚಂದ್ರು ನಮ್ಮ. ವರದಿಗಾರರನ್ನೇ ಕೇಳಿದರು.
ಇದುವರೆವಿಗೂ ಕೇವಲ credit worthy ವ್ಯಕ್ತಿಯಾಗಿದ್ದ ನಾನು ಈಗ Raid worthy ಕಲಾವಿದನಾಗಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ ಎಂದು ತಮಾಷೆ, ಹಾಸ್ಯ ಚಟಾಕಿ ಸಿಡಿಸುವುದಕ್ಕೆ ಹೆಸರಾದ ಸಿಲ್ಲಿ ಲಲ್ಲಿ ಚಂದ್ರು ನಕ್ಕೋತ ನಕ್ಕೋತ ಹೇಳಿದರು. (ದಟ್ಸ್ಕನ್ನಡ ಎಕ್ಸ್ಕ್ಲೂಸಿವ್)


Click it and Unblock the Notifications











