ಶ್ರೀಶಂಕರ ವಾಹಿನಿಯಲ್ಲಿ ಶ್ರೀ ಸತ್ಯಸಾಯಿಬಾಬಾ

ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ 85ನೇ ಜನ್ಮದಿನ ಸಂಭ್ರಮಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ 85 ಗಂಟೆಗಳ ನಿರಂತರ ಭಜನೆಯ ಅನನ್ಯ ಕಾರ್ಯಕ್ರಮವನ್ನು ಶ್ರೀಶಂಕರ ವಾಹಿನಿಯಲ್ಲಿ ಅಖಂಡ ನೇರ ಪ್ರಸಾರ ಮಾಡಲುವಾಹಿನಿಯ ನಿರ್ದೇಶಕರಾದ ಸುರೇಶ್ ಕುಮಾರ್, ಜಿ. ಶ್ರೀನಿವಾಸ ಮತ್ತು ಹರಿಕೃಷ್ಣನ್ ಅವರು ಸಕಲ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿರುವ ಶ್ರೀ ಸತ್ಯಸಾಯಿಬಾಬಾ ಆಶ್ರಮವಾದ "ಬೃಂದಾವನ"ದಲ್ಲಿ 85 ಗಂಟೆಗಳ ನಿರಂತರ ಭಜನೆಯಲ್ಲಿ ಪಾಲ್ಗೊಳ್ಳಲಿವೆ. "ಶ್ರಾವಣ ಮಂಗಳ" ಎಂಬ ಹೆಸರಿನ ಈ ಅಭೂತಪೂರ್ವ ಕಾರ್ಯಕ್ರಮ ಇದೇ ಆಗಸ್ಟ್ 12 ರ ಮುಂಜಾನೆ 5 ಗಂಟೆಗೆ ಆರಂಭವಾಗಿ ಆಗಸ್ಟ್ 15 ರ ಮುಸ್ಸಂಜೆ 6.5 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಶ್ರೀಶಂಕರ ವಾಹಿನಿ ಇದನ್ನು ಶ್ರದ್ಧಾಪೂರ್ವಕವಾಗಿ ಎಡೆಬಿಡದೆ ಜಗತ್ತಿಗೆ ಪ್ರಸಾರಮಾಡಲಿದೆ ಹಾಗೂ ಶ್ರೀಸಾಯಿ ನಾದಾಮೃತವನ್ನು ಜಗತ್ತಿನಾದ್ಯಂತ
ಭಕ್ತರ ಮನೆ ಮನೆಗೆ, ಮನ ಮನಕ್ಕೆ ತಲುಪಿಸಲು ಚರಿತ್ರಾರ್ಹ ಪ್ರಯತ್ನ ನಡೆಸಿದೆ.ಶ್ರೀ ಸತ್ಯಸಾಯಿ ಸೇವಾ ಸಂಘಗಳ ಒಕ್ಕೂಟ ಆಯೋಜಿಸಿರುವ 85 ಗಂಟೆಗಳ ನಿರಂತರ ಭಜನೆ ಕಾರ್ಯಕ್ರಮವನ್ನು ಶ್ರೀ ಸತ್ಯಸಾಯಿಬಾಬಾ ಅವರ ಭಕ್ತರು ತಾವಿರುವ ಎಡೆಯಲ್ಲೆ ವೀಕ್ಷಿಸಿ, "ಶ್ರಾವಣ ಮಂಗಳ"ದ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.
ಈ ವಿಸ್ಮಯಕರ ಕಾರ್ಯಕ್ರಮ ಭಕ್ತರನ್ನು ಭಾವಲೋಕಕ್ಕೆ,ಭಕ್ತಿಲೋಕಕ್ಕೆ ಕರೆದೊಯ್ಯಲಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ಜಾಗತಿಕ ನೆಲೆಗೆ ಕೊಂಡೊಯ್ಯಲು ಶ್ರೀಶಂಕರ ವಾಹಿನಿ ನಡೆಸಿರುವ ನೇರಪ್ರಸಾರದ ಮಹಾಪ್ರಯೋಗ ಪ್ರಪಂಚದಲ್ಲೆ ಅನನ್ಯವಾದದ್ದು.
ಈ ಮಹಾಪ್ರಯೋಗ ಗಿನ್ನಿಸ್ ದಾಖಲೆ ಮತ್ತು ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಲು ಸರ್ವ ರೀತಿಯಲ್ಲೂ ಯೋಗ್ಯವಾಗಿದೆ. ಈ ದಿಸೆಯಲ್ಲಿ ಪ್ರಯತ್ನವೂ ನಡೆದಿದೆ.ಈ ಮಹಾ ಪ್ರಯೋಗಕ್ಕೆ ಅವಕಾಶ ಕಲ್ಪಿಸಲು ಶ್ರೀಶಂಕರ ವಾಹಿನಿಯಲ್ಲಿ ಆಗಸ್ಟ್ 12 ರ ಮುಂಜಾನೆ 5 ಗಂಟೆಯಿಂದ ಆಗಸ್ಟ್ 15 ರ ಮುಸ್ಸಂಜೆ 6.5 ಗಂಟೆಯವರೆಗೆ ದೈನಂದಿನ ಪ್ರಸಾರವನ್ನು ಕೈಬಿಡಲಾಗಿದೆ. ತದನಂತರ ಎಂದಿನಂತೆ ಕಾರ್ಯಕ್ರಮಗಳು ಪ್ರಸಾರವಾಗಲಿವೆ.


Click it and Unblock the Notifications











