ಜ 26ಕ್ಕೆ ರಂಗನಾಥ್ ಹೊಸವಾಹಿನಿ ಪಬ್ಲಿಕ್ ಟಿವಿ

ನಾಲ್ಕಾರು ಮಂದಿ ಉದ್ಯಮಶೀಲರು ಕಲೆತು ಆರಂಭಿಸಿರುವ Writemen Media Pvt Ltd ಸಂಸ್ಥೆ ಪಬ್ಲಿಕ್ ಟಿವಿಯನ್ನು ಸಾದರಪಡಿಸುತ್ತಿದೆ. ರಂಗನಾಥ್ ಅವರು ಸಂಸ್ಥೆಯ ಛೇರ್ಮನ್ ಮತ್ತು ಕಾರ್ಯನಿರ್ವಾಹಕ ಸಂಪಾದಕ.
" ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ" ಘೋಷವಾಕ್ಯ ಹೊಂದಿರುವ ವಾಹಿನಿಯು ಜನತೆಯಿಂದ ಜನತೆಗಾಗಿ ಜನತೆಗೋಸ್ಕರ ಮೂಡಿಬರುತ್ತಿರುವ ಟಿವಿ ಎಂದು ರಂಗನಾಥ್ ಹೇಳುತ್ತಾರೆ. ಶ್ರೀಸಾಮಾನ್ಯರ ಅಭಿಲಾಷೆಗಳ ಪ್ರತಿಬಿಂಬ ಮತ್ತು ಪ್ರತಿಧ್ವನಿ ನಮ್ಮ ತಂಡದ ಧ್ಯೇಯ ಎಂದು ರಂಗನಾಥ್ ಕನ್ನಡ ಒನ್ ಇಂಡಿಯಾಗೆ ಶುಕ್ರವಾರ ತಿಳಿಸಿದರು.
ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯುವುದು, ಕಂಪನಿ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಸಾರ್ವಜನಿಕರ ಆಶೋತ್ತರಗಳಿಗೆ ಕನ್ನಡಿಯಾಗುವುದು ನಮ್ಮ ಕಾಯಕ. ನಮ್ಮದು ಪತ್ರಕರ್ತರ ಚಿಂತನೆಗಳಿಂದ ಪ್ರೇರಿತವಾದ ಟಿವಿ ಎಂದು ರಂಗ ನುಡಿದರು.
ಒಂದು ಟಿವಿ ಚಾನಲ್ ಪ್ರಾರಂಭಿಸಬೇಕಾದರೆ 40-45 ಕೋಟಿ ರೂ ಅಗತ್ಯ ಎಂದು ಹೇಳುವುದಿದೆ. 100-150 ಕೋಟಿ ರೂ ಬಂಡವಾಳ ಅಗತ್ಯ ಎಂದು ಕೆಲವರು ಉತ್ಪ್ರೇಕ್ಷೆ ಮಾಡುವುದುಂಟು. ಆದರೆ ನಾವೇ ಬೇರೆ, ನಮ್ಮ ಸ್ಟೈಲೇ ಬೇರೆ.
ಚಾನಲ್ ನಿರ್ಮಾಣ, ಸಾಂಪ್ರದಾಯಿಕ ಮತ್ತು ಅಸಾಂಪ್ರಾಯಿಕ ವೇದಿಕೆಗಳ ಮೂಲಕ ವಾಹಿನಿಯನ್ನು ಪ್ರಚುರಗೊಳಿಸುವುದಕ್ಕೆ ತಗಲುವ ವೆಚ್ಚವೂ ಸೇರಿದರೆ ನಾವು ಹೂಡುತ್ತಿರುವ ಬಂಡವಾಳ ಅಬ್ಬಬ್ಬಾ ಎಂದರೆ 25-30 ಕೋಟಿ ಆದೀತು ಎನ್ನುತ್ತಾರೆ ಅವರು. ಕಂಪನಿಯ ಸಿಇಒ ಅರುಣ್ ಕುಮಾರ್. ಎಸ್. ದಿವಾಕರ್ ಅವರು ಮಾರಾಟ ಮತ್ತು ಮಾರುಕಟ್ಟೆ ಕಟ್ಟಿಕೊಳ್ಳುವ ವಿಭಾಗದ ಉಪಾಧ್ಯಕ್ಷರಾಗಿರುತ್ತಾರೆ.
ರಾಜಕಾರಣಿ ಅಥವಾ ಒಂದು ರಾಜಕೀಯ ಪಕ್ಷದ ಬಂಡವಾಳ/ ಹಸ್ತಕ್ಷೇಪವಿಲ್ಲದೆ ತೆರೆಕಾಣುತ್ತಿರುವುದು ಪಬ್ಲಿಕ್ ಟಿವಿ ಚಾನಲ್ಲಿನ ಒಂದು ವೈಶಿಷ್ಟ್ಯ. ಕನ್ನಡ ಟಿವಿ ಮಾರುಕಟ್ಟೆಯಲ್ಲಿ ಒಟ್ಟು 7 ವಾಹಿನಿಗಳಿವೆ. ಅವುಗಳ ಒಡೆತನದ ವಿವರಗಳು ಸ್ಥೂಲವಾಗಿ ಕೆಳಕಂಡಂತಿದೆ.
ಉದಯ ಟಿವಿ (ದಯಾನಿಧಿ ಮಾರನ್ - ಡಿಎಂಕೆ), ಈ ಟಿವಿ (ರಾಮೋಜಿರಾವ್ - ಅಂಬಾನೀಸ್), ಜನಶ್ರೀ ಟಿವಿ (ಜನಾರ್ದನ ರೆಡ್ಡಿ - ಭಾಜಪ), ಕಸ್ತೂರಿ ಟಿವಿ (ಅನಿತಾ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್), ಸಮಯ ಟಿವಿ (ಮುರುಗೇಶ್ ನಿರಾಣಿ, ಭಾಜಪ), ಟಿವಿ9 (ಶ್ರೀನಿರಾಜು, ಉದ್ಯಮಿ), ಸುವರ್ಣ ಟಿವಿ (ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ, ಪಕ್ಷೇತರ).


Click it and Unblock the Notifications











