ಝಾನ್ಸಿ ಡಬ್ ಮಾಡಿಲ್ಲ : ಜೀ ಕನ್ನಡ ಸ್ಪಷ್ಟನೆ

"ಜೀ ಕನ್ನಡದ ಕಚೇರಿಯ ಮೇಲೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪದಾಧಿಕಾರಿಗಳು ನಡೆಸಿದ ದಾಳಿಯಿಂದ ಅತೀವ ನೋವಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ನಾವು ಭಾರತೀಯರು ಹೆಮ್ಮೆ ಪಡುವ ಸ್ವಾತಂತ್ರ್ಯೋತ್ಸವದ ದಿನದಂದು ಇಂಥ ದಾಳಿ ನಡೆದಿದ್ದು ವಿಷಾದನೀಯ.
ನಮ್ಮದೇ ಕುಟುಂಬದ ಸದಸ್ಯರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಧ್ವಂಸ ಮಾಡಿದ್ದನ್ನು ಸಿಸಿಟಿವಿ ತುಣುಕುಗಳಲ್ಲಿ ನೋಡಿ ಆಘಾತವಾಯಿತು. ನಿಮಗೆ ನಮ್ಮ ಕಾರ್ಯಕ್ರಮಗಳ ಕುರಿತು ಯಾವುದೇ ಆಕ್ಷೇಪಣೆ ಇದ್ದಿದ್ದರೆ ಅದನ್ನು ಮಾತಾಡಿ ಬಗೆಹರಿಸಿಕೊಳ್ಳುವುದು ಸಾಧ್ಯವಿತ್ತು.
ಕನ್ನಡದ ಮನರಂಜನಾ ಉದ್ಯಮದ ಸಾವಿರಾರು ಜನರಿಗೆ ಜೀ ಕನ್ನಡ ಬೆಂಬಲವಾಗಿ ನಿಂತಿರುವಾಗ ಈ ಉದ್ಯಮವನ್ನು ಪ್ರತಿನಿಧಿಸುವ ಒಕ್ಕೂಟವೊಂದು ಇಂಥ ಹಿಂಸಾಚಾರಕ್ಕೆ ಇಳಿದಿದ್ದು ನಿಜಕ್ಕೂ ಆತಂಕದ ವಿಚಾರ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಝಾನ್ಸಿ ರಾಣಿಯ ಮೇಲೆ ಒಂದು ಗಂಟೆಯ ವಿಶೇಷ ಸಂಚಿಕೆಯನ್ನು ನಾವು ಪ್ರಸಾರ ಮಾಡಿದ್ದೆವು. ಇದು ಡಬ್ ಮಾಡಿದ ಸಂಚಿಕೆ ಎಂದು ನೀವು ಹೇಳುತ್ತಿದ್ದೀರಿ. ಇದು ಡಬ್ ಮಾಡಿದ ಸಂಚಿಕೆ ಅಲ್ಲ ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ.
ಮೊದಲನೆಯದಾಗಿ, ಡಬ್ಬಿಂಗ್ ಕಾನೂನು ಬಾಹಿರ ಅಲ್ಲ. ಹೀಗಿದ್ದರೂ, ಜೀ ಕನ್ನಡ ಈ ಐದು ವರ್ಷಗಳ ತನ್ನ ಅವಧಿಯಲ್ಲಿ ಯಾವಾಗಲೂ ಡಬ್ ಮಾಡಿದ ಕಾರ್ಯಕ್ರಮವನ್ನು ಪ್ರಸಾರ ಮಾಡಿಲ್ಲ. ಝಾನ್ಸಿ ರಾಣಿಯ ವಿಶೇಷ ಸಂಚಿಕೆ ಕುರಿತು ಹೇಳುವುದಾದರೆ ಇದು ಕನ್ನಡಿಗರೇ ಮಾಡಿದ ಕಾರ್ಯಕ್ರಮ. ನಿರೂಪಣಾ ಸಾಹಿತ್ಯ ಬರೆದಿದ್ದು ಒಬ್ಬರು ಕನ್ನಡಿಗ. ನಿರೂಪಣೆ ಮಾಡಿದವರು ನಿಮಗೆಲ್ಲಾ ಗೊತ್ತಿರುವ ಸುಚೇಂದ್ರ ಪ್ರಸಾದ್ರಂಥ ಅಪ್ಪಟ ಕನ್ನಡಿಗ. ಈ ಕಾರ್ಯಕ್ರಮದ ನಿರ್ಮಾಣದಲ್ಲಿ ಭಾಗವಹಿಸಿದವರೆಲ್ಲರೂ ಕನ್ನಡಿಗರೇ. ನಾವು ಝಾನ್ಸಿಗಾಗಿ ಬಳಸಿಕೊಂಡ ತುಣುಕುಗಳು ನಮ್ಮದೇ ಜೀ ಟೀವಿಯಿಂದ ಬಳಸಿಕೊಂಡಿದ್ದು. ಇಡೀ ಒಂದು ಗಂಟೆಯ ಸಂಚಿಕೆಯಲ್ಲಿ ಡಬ್ ಆದ ಒಂದೇ ಒಂದು ಸಾಲೂ ಇರಲಿಲ್ಲ.
ಕನ್ನಡದ ನಿರೂಪಣಾ ಸಾಹಿತ್ಯ ಮತ್ತು ಬೇರೆ ಭಾಷೆಯ ತುಣುಕುಗಳನ್ನು ಬಳಸಿಕೊಂಡು ಹೀಗೆ ಕಾರ್ಯಕ್ರಮ ಪ್ರಸಾರ ಮಾಡುವುದು ಎಲ್ಲ ಕನ್ನಡದ ನ್ಯೂಸ್/ಮನರಂಜನಾ ಚಾನೆಲ್ಗಳಲ್ಲಿ ಸಾಮಾನ್ಯ ವಿಚಾರ. ಹೀಗಿರುವಾಗ ನೀವು ಬರೀ ಜೀ ಕನ್ನಡವನ್ನೇ ದಾಳಿ ಮಾಡಲು ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಜೀ ಕನ್ನಡ ಎಂದಿದ್ದರೂ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿದಿದೆ."
ಧನ್ಯವಾದಗಳು
ಮಹಾಂತೇಶ ಹಿರೇಮಠ
ಸಾರ್ವಜನಿಕ ಸಂಪರ್ಕಾಧಿಕಾರಿ
ಜೀ ಕನ್ನಡ, ಬೆಂಗಳೂರು.


Click it and Unblock the Notifications











