ಸುವರ್ಣ ವಾಹಿನಿಯಲ್ಲಿ 'ಬೀದಿಗೆ ಬಿದ್ದವರು'
ವೈವಿಧ್ಯಮಯ ಮೆಗಾ ಧಾರಾವಾಹಿಗಳಿಗೆ ಹೆಸರಾಗಿರುವ ಸುವರ್ಣ ವಾಹಿನಿಯಲ್ಲಿ ಈಗ ವೀಕ್ಷಕರಿಗೆ ಮತ್ತೊಂದು ಮಹೋನ್ನತ ಮನರಂಜನೆ ಉಣಬಡಿಸಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ ಫಣಿ ರಾಮಚಂದ್ರ ಅವರ 'ಬೀದಿಗೆ ಬಿದ್ದವರು' ಮೆಗಾ ಧಾರಾವಾಹಿ ಅಕ್ಟೋಬರ್ 18ರಿಂದ ಆರಂಭವಾಗಿದೆ.
ತಮ್ಮದೇ ಆದ ವಿಶಿಷ್ಟ ವಿಡಂಬನೆ ಮತ್ತು ಹಾಸ್ಯ ಚಿತ್ರ ಹಾಗೂ ಧಾರಾವಾಹಿಗಳಿಗೆ ಹೆಸರಾಗಿರುವ ಫಣಿ ರಾಮಚಂದ್ರ ಅಲ್ಪ ವಿರಾಮದ ಬಳಿಕ 'ಬೀದಿಗೆ ಬಿದ್ದವರು' ಮೂಲಕ ಕಿರುತೆರೆಗೆ ವಾಪಸಾಗುತ್ತಿದ್ದಾರೆ. ಗಣೇಶನ ಮದುವೆ, ಗೌರಿ ಗಣೇಶ, ಗಣೇಶ ಮತ್ತೆ ಬಂದ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನೆಮಾಗಳು ಮತ್ತು ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ ಕೆಲವು ಧಾರಾವಾಹಿಗಳನ್ನು ಫಣಿ ನಿರ್ದೇಶಿಸಿದ್ದಾರೆ.
ಸಾಫ್ಟ್ವೇರ್ ಉದ್ಯಮವೇ ಸರ್ವಸ್ವ, ಬಹುರಾಷ್ಟ್ರೀಯ ಕಂಪೆನಿಗಳೇ ಬದುಕಿನ ಜೀವಾಳ ಎಂಬ ಹುಚ್ಚಿಗೆ ಬಿದ್ದು, ಲಕ್ಷಲಕ್ಷ ಸಂಬಳದಾಸೆಗಾಗಿ ಈ ನೆಲದ ಸಂಸ್ಕೃತಿಯನ್ನು ಮರೆತು ಕೊನೆಗೊಮ್ಮೆ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ದೀವಾಳಿಯಾದವರ ಕತೆ ಇದು. ಆರು ಮಂದಿ ಸಾಫ್ಟ್ವೇರ್ ಉದ್ಯೋಗಿಗಳು ಮತ್ತವರ ಕುಟುಂಬದ ಸುತ್ತ ಹೆಣೆದ ಕಥೆ ಇದು. ಕೌಟುಂಬಿಕ ಹಂದರದೊಂದಿಗೆ, ಹಾಸ್ಯ-ವಿಡಂಬನೆಯ ಲೇಪನದೊಂದಿಗೆ ಸಮಾಜಕ್ಕೊಂದು ಅಮೂಲ್ಯ ಸಂದೇಶ ನೀಡುವ ಫಣಿಯವರ ಶೈಲಿ ಈ ಧಾರಾವಾಹಿಯಲ್ಲೂ ಇರುತ್ತದೆ.
"ನನ್ನ ಎಲ್ಲ ಸಿನೆಮಾ, ಧಾರಾವಾಹಿಗಳಂತೆ ಈ ಬಾರಿಯೂ ಸಮಾಜಕ್ಕೊಂದು ಒಳ್ಳೆಯ ಸಂದೇಶ ಇಟ್ಟುಕೊಂಡು ಕಥೆ ಮಾಡಿದ್ದೇನೆ. ಆ ಸಂದೇಶವನ್ನು ನನ್ನದೇ ಆದ ಹಾಸ್ಯ-ವಿಡಂಬನೆಯ ಧಾಟಿಯಲ್ಲಿ ಜನರಿಗೆ ತಲುಪಿಸುತ್ತೇನೆ. ಇದು ಐಟಿ-ಬಿಟಿ ಹುಡುಗರು ಮತ್ತವರ ಕುಟುಂಬದ ಸುತ್ತ ನಡೆಯೋ ಕಥೆ ಆದರೂ ಇದರಲ್ಲಿ ಇಡೀ ಸಮಾಜಕ್ಕೆ ಒಂದು ಪಾಠ ಇದೆ. ಇದೂ ಕೂಡ ವೀಕ್ಷಕರಿಗೆ ಇಷ್ಟವಾಗುತ್ತೆ ಅನ್ನೋ ನಂಬಿಕೆ ನನಗಿದೆ" ಎನ್ನುತ್ತಾರೆ ನಿರ್ದೇಶಕ ಫಣಿ ರಾಮಚಂದ್ರ.
ಹದಿಹರಯದ ಮನಸುಗಳು ಮತ್ತು ಪೋಷಕರ ತಲ್ಲಣಗಳ ಕತೆ ಹೊಂದಿರುವ 'ಕ್ಲಾಸ್ ಮೇಟ್ಸ್', ಅವಿಭಕ್ತ ಕುಟುಂಬದ ಸುಖದುಃಖಗಳ ಕಥಾ ಹಂದರ ಹೊಂದಿರುವ 'ಸಿಂಧೂರ', ಮುಗ್ಧ ಬಾಲಕಿಯೊಬ್ಬಳ ಬಾಳ ಪಯಣದ ಯಶೋಗಾಥೆ 'ಲಕುಮಿ' ಹಾಗೂ ಶ್ರೀ ಗುರು ರಾಘವೇಂದ್ರರ ಜೀವನ ಚರಿತ್ರೆ 'ಗುರು ರಾಘವೇಂದ್ರ ವೈಭವ' ಹೀಗೆ ಒಂದಕ್ಕಿಂತ ಒಂದು ಭಿನ್ನವಾದ ಧಾರಾವಾಹಿಗಳು ಸುವರ್ಣದಲ್ಲಿ ಪ್ರಸಾರವಾಗುತ್ತಿವೆ.
ಈ ಎಲ್ಲ ಧಾರಾವಾಹಿಗಳನ್ನು ವೀಕ್ಷಕರು ಪ್ರೀತಿಯಿಂದ ಸ್ವಿಕರಿಸಿದ್ದಾರೆ. 'ಫಣಿ ರಾಮಚಂದ್ರ" ಅವರ 'ಬೀದಿಗೆ ಬಿದ್ದವರು" ಕೂಡ ಇನ್ನೊಂದು ವಿಭಿನ್ನ ಪ್ರಯತ್ನ. ಇದೂ ಕೂಡ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಏಕೆಂದರೆ, ನಮಗೆ ಮಾತ್ರವಲ್ಲ, ವೀಕ್ಷಕರಿಗೂ ಫಣಿಯವರ ಧಾರಾವಾಹಿ ಎಂದರೆ ಎಲ್ಲಿಲ್ಲದ ಪ್ರೀತಿ" ಎನ್ನುತ್ತಾರೆ ಸುವರ್ಣ ವಾಹಿನಿಯ ಮುಖ್ಯಸ್ಥ ಅನೂಪ್ ಚಂದ್ರಶೇಖರ್. 'ಬೀದಿಗೆ ಬಿದ್ದವರು" ಅಕ್ಟೋಬರ್ 18ರಿಂದ, ಸೋಮವಾರದದಿಂದ ಶುಕ್ರವಾರ ರಾತ್ರಿ 7 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











