ಜೀ ಕನ್ನಡದಲ್ಲಿ 'ನಗೆಪಾಕ' ಸಿಹಿಕಹಿ ಮಾತುಕತೆ

ಜೀ ಕನ್ನಡ ವಾಹಿನಿಯ ಹಾಸ್ಯ ಧಾರಾವಾಹಿ ಪಾಂಡುರಂಗ ವಿಠಲ ಕಲಾವಿದರಾದ ಜಹಾಂಗೀರ್, ಅಪೇಕ್ಷಾ ಘಳಿಗಿ, ಮೇಘಶ್ರೀ ಭಾಗವತರ್, ಸುಜಯ್ ಶಾಸ್ತ್ರಿ, ಶ್ರೀಲಕ್ಷ್ಮಿ, ಸತೀಶ್, ಹಿರಿಯ ಕಲಾವಿದೆ ಬಿ.ಜಯಮ್ಮ, ಹಾಗೆಯೇ ಪಾರ್ವತಿ ಪರಮೇಶ್ವರ ಕಲಾವಿದರಾದ ಗಾನಶ್ರೀ, ರವಿತೇಜ, ಜಯಶೀಲಾ, ಸುಬ್ಬ ಬಸವರಾಜ್ ಮತ್ತಿತರರು ನಡೆಸಿಕೊಟ್ಟ ನರ್ತನ, ಮ್ಯಾಡ್ ಆಡ್ಸ್, ಫ್ಯಾಷನ್ ಷೋ ಇತ್ಯಾದಿ ಹಾಸ್ಯಭರಿತ ಕಾರ್ಯಕ್ರಮ ಸಿಹಿಕಹಿ ಮಾತುಕತೆಯಲ್ಲಿದೆ.
ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರ ಹಾಸ್ಯಚಟಾಕಿಗಳಿವೆ. ಸುಬ್ಬು ಮತ್ತು ವೇದಾ ಸ್ಪೆಷಲ್ ಡ್ಯಾನ್ಸ್ 'ಕುಳ್ಳನ ರಾಣಿ ಬಾರೇ...' ಸಖತ್ತಾಗಿದೆ. 75ರ ಹರೆಯದ ಬಿ.ಜಯಮ್ಮ ಹೆಜ್ಜೆ ಹಾಕಿದ 'ಜೋಕೆ ನಾನು ಬಳ್ಳಿಯ ಮಿಂಚು', ವೀಕ್ಷಿಸಿ ಅನೇಕರು ಯೌವನದ ಬಿಸಿ ನೆನಪಿಗೆ ಜಾರಬಹುದು. ವೀಕ್ಷಕರು ಮೊನಚಾದ ಪ್ರಶ್ನೆಗಳೊಂದಿಗೆ ಚಂದ್ರು ಮತ್ತು ತಂಡದವರನ್ನು ಗೋಳು ಹುಯ್ದುಕೊಂಡಿದ್ದನ್ನು ನೋಡಿ ಆನಂದಿಸಬಹುದು.
ರಾಯಚೂರಿನಲ್ಲಿ ನಡೆದ, ವಾಹಿನಿಯ ಮೊಟ್ಟಮೊದಲ ಕಾರ್ಯಕ್ರಮ ಇದಾಗಿದ್ದು ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರೇಕ್ಷಕರು ತುಂಬಿ ತುಳುಕಿದ್ದರು. ಇಂದು, ನಾಳೆ ಮತ್ತು ನಾಳಿದ್ದು ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಸ್ವತಃ ನೋಡಿ; ನಕ್ಕು ಹಗುರಾಗಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











