twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡ ವಾಹಿನಿಯಲ್ಲಿ 'ಕಾಮಿಡಿ ಕಿಲಾಡಿ' ಕೋಮಲ್

    By * ಶ್ರೀರಾಮ್ ಭಟ್
    |

    ಕಾಮಿಡಿ ನಟ ಕೋಮಲ್ ಈಗ 'ಕಾಮಿಡಿ ಕಿಲಾಡಿ'ಯಾಗಿದ್ದಾರೆ. ಅಂದರೆ, ಜೀ ಕನ್ನಡ ವಾಹಿನಿಯಲ್ಲಿ ಅವರು 'ಕಾಮಿಡಿ ಕಿಲಾಡಿಗಳು' ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಕೋಮಲ್ ಅವರನ್ನು 'ಕಾಮಿಡಿ ನಟ' ಎಂದು ಕರೆಯುವುದಕ್ಕಿಂತ 'ಕಾಮಿಡಿ ಸ್ಟಾರ್' ಎಂದೇ ಕರೆಯುವುದು ಸೂಕ್ತ. ಗೋವಿಂದಾಯ ನಮಃ ಚಿತ್ರದ 'ಪ್ಯಾರ್ ಕೆ ಆಗ್ಬುಟ್ಟೈತೆ...' ಹಾಡಂತೂ ಈಗ ಸೂಪರ್ ಹಿಟ್ ಲಿಸ್ಟ್ ಸೇರಿದೆ.

    ಏಕೆಂದರೆ ಅವರೀಗ ಚಿತ್ರದ ನಾಯಕರಾಗಿಯೂ ಚಿತ್ರವನ್ನು ಗೆಲ್ಲಿಸುತ್ತಿದ್ದಾರೆ. ನಾಯಕನಟರಿಗಿರುವ ಸಂಭಾವನೆ, ಅವಕಾಶ ಹಾಗೂ ಗೌರವ ಎಲ್ಲವೂ ಕೋಮಲ್ ಅವರಿಗಿದೆ. ಇಂಥ ಕೋಮಲ್, 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ ಕಾಮಿಡಿ ಕಿಲಾಡಿಗಳು ಶೋ ಹಾಗೂ ತಮ್ಮ ಮುಂದಿನ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ, ಓದಿ....

    ಪ್ರಶ್ನೆ: ನೀವು ಸಿನಿಮಾಗಳಲ್ಲಿ ಬಹಳಷ್ಟು ಬ್ಯುಸಿ. ಹೀಗಿದ್ದೂ ಕಿರುತೆರೆಯತ್ತ ಮುಖ ಮಾಡಲು ಕಾರಣ?

    ಉತ್ತರ: ಹೌದು, ನಾನು ಸಿನಿಮಾಗಳಲ್ಲಿ ಈಗ ಸಾಕಷ್ಟು ಬ್ಯುಸಿಯಾಗಿದ್ದೇನೆ. 'ಗೋವಿಂದಾಯ ನಮಃ' ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ಇನ್ನೂ ಸಾಕಷ್ಟು ಚಿತ್ರಗಳು ಬರಲಿವೆ. ನನ್ನ ಉದ್ದೇಶ, ಗುರಿ ನಟನೆ ಮತ್ತು ಇದೇ ರಂಗದಲ್ಲಿ ಇದ್ದು ಹೊಸತನ್ನೇದಾರೂ ಸಾಧಿಸುವುದು.

    ಹಾಗಾಗಿ, ನಮ್ಮದೇ ನಿರ್ಮಾಣ ಸಂಸ್ಥೆ, ನನ್ನ ಪತ್ನಿಯ ಹೆಸರಿನ 'ಸೌಂದರ್ಯ ಲಹರಿ ಕಂಬೈನ್ಸ್' ಅಡಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ 'ಕಾಮಿಡಿ ಕಿಲಾಡಿಗಳು ಪ್ರಾರಂಭಿಸಿದ್ದೇನೆ. ಇದು ನನ್ನ ಹೊಸ ಪ್ರಯತ್ನ. ಈ ಮೊದಲು ನಾನು ಹೋಮ್ ಬ್ಯಾನರ್ ಮೂಲಕ ನಿರ್ಮಿಸಿ ಬಿಡುಗಡೆ ಮಾಡಿದ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಹಾಗೂ 'ಕಳ್ ಮಂಜ' ಚಿತ್ರಗಳು ಯಶಸ್ವಿ ಪ್ರದರ್ಶನ ಕಂಡಿವೆ.

    ಪ್ರಶ್ನೆ: ಕಾಮಿಡಿ ಕಿಲಾಡಿಗಳು ಶೋ ಮಾಡಿದ ಉದ್ದೇಶ? ಒಟ್ಟೂ ಎಷ್ಟು ಸಂಚಿಕೆಗಳಿವೆ?

    ಉತ್ತರ: ಕಾಮಿಡಿ ಕಿಲಾಡಿಗಳು ಶೋ ನ ಪ್ರಮುಖ ಉದ್ದೇಶ ಸ್ಥಳೀಯ ಪ್ರತಿಭೆಗಳಿಗೆ ಒಂದು ಸುಸಜ್ಜಿತ 'ಫ್ಲಾಟ್ ಫಾರಂ' ಒದಗಿಸಿಕೊಡುವುದು. ಮನರಂಜನೆ ಇದ್ದೇ ಇರುತ್ತದೆ, ಆದರೆ ನಮ್ಮಲ್ಲಿ ಬಹಳಷ್ಟು ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಿಲ್ಲ. ಹಾಗಾಗಿ, ಈ ಕಾಮಿಡಿ ಕಿಲಾಡಿಗಳ ಶೋನಲ್ಲಿ ಭಾಗವಹಿಸುವ ಮೂಲಕ ಜನರು ವೇದಿಕೆಯನ್ನು ಉಪಯೋಗಿಸಿಕೊಳ್ಳಬಹುದು. ಕಾಮಿಡಿ ಕಿಲಾಡಿಗಳು ಒಟ್ಟೂ 20 ಸಂಚಿಕೆಗಳಲ್ಲಿ ಪ್ರಸಾರವಾಗಲಿವೆ.

    ಪ್ರಶ್ನೆ: ಈ ಶೋನಲ್ಲಿ ಒಟ್ಟೂ ಭಾಗವಹಿಸಿದವರ ಸಂಖ್ಯೆ ಎಷ್ಟು? ಮತ್ತೆ ಮುಂದುವರಿಸುವ ಯೋಚನೆ ಇದೆಯೇ?

    ಉತ್ತರ: ಸದ್ಯಕ್ಕೆ 20 ರಿಂದ 30 ಮಂದಿ ರಾಜ್ಯದ ನಾನಾಕಡೆಯಿಂದ ಬಂದ ಕಲಾವಿದರು ಭಾಗವಹಿಸಿದ್ದಾರೆ. ಬಿಜಾಪುರದ ಭೀಮಣ್ಣ ಕಂಡ್ರೆ, ಮಂಗಳೂರಿನ ರೋಹಿತ್ ಶೆಟ್ಟಿ ಮುಂತಾದವರು ಇನ್ನೂ ಹೆಚ್ಚು ಸಂಚಿಕೆಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಅವರೆಲ್ಲರಿಗೂ ಈ ಕಾನ್ಸೆಪ್ಟ್ ಇಷ್ಟವಾಗಿದ್ದು ಪ್ರತಿಭೆಗಳು ಭಾಗವಹಿಸುವಂತೆ ಮಾಡಲು ಸಹಕರಿಸುವುದಾಗಿ ಹೇಳಿದ್ದಾರೆ.

    ಪ್ರಶ್ನೆ: ಕಾಮಿಡಿ ನಟರಾಗಿ ಚಿತ್ರರಂಗಕ್ಕೆ ಬಂದು ಈಗ ನಾಯಕರಾಗಿ ಸಿನಿಮಾ ಗೆಲ್ಲಿಸುವಷ್ಟು ಬೆಳೆದಿದ್ದೀರಿ. ನಿಮ್ಮ ಯಶಸ್ಸಿಗೆ ಕಾರಣ?

    ಉತ್ತರ: ಇದನ್ನು 'ಯಶಸ್ಸು' ಅನ್ನುವುದಕ್ಕಿಂತ 'ಪ್ರಯಾಣ' ಅನ್ನುವುದು ಹೆಚ್ಚು ಸೂಕ್ತ ಅನ್ನುವುದು ನನ್ನ ಅನಿಸಿಕೆ. ಬಂದ ಅವಕಾಶಗಳಿಗೆ ನನ್ನಿಂದಾದ ನ್ಯಾಯ ಸಲ್ಲಿಸುತ್ತಾ ಬಂದಿದ್ದೇನೆ. ಎಲ್ಲಾ ದೇವರ ಕೃಪೆ ಹಾಗೂ ಪ್ರೇಕ್ಷಕರ ಆಶೀರ್ವಾದ. ನಾನು ಬೆಳೆದುಬಂದ ದಾರಿಯಲ್ಲಿ ಆಸಕ್ತಿಯಿರುವ ಇತರರೂ ಬರಲಿ, ಅವಕಾಶಗಳಿಗೆ ಪರದಾಡುವುದು ಬೇಡ ಎಂಬ ಉದ್ದೇಶದಿಂದ ಕಾಮಿಡಿ ಕಿಲಾಡಿಗಳು ನಿರ್ಮಿಸಿ ನಡೆಸಿಕೊಡುತ್ತಿದ್ದೇನೆ. ಈ ವೇದಿಕೆಯನ್ನು ಉಪಯೋಗಿಸಿಕೊಂಡು ಪ್ರತಿಭೆಗಳು ಬೆಳಕಿಗೆ ಬಂದರೆ ನನ್ನ ಈ ಶ್ರಮ ಹಾಗೂ ಉದ್ದೇಶ ಸಾರ್ಥಕ.

    ಪ್ರಶ್ನೆ: ನಿಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿ...

    ಉತ್ತರ: 2003ರಲ್ಲಿ ಜಯರಾಜ್ ನಿರ್ದೇಶನ, ದಿಲೀಪ್ ಕಾವ್ಯ ತಾರಾಗಣದ ಮಲೆಯಾಳಂ 'ತಿಲಕಂ' ಚಿತ್ರದ ಕನ್ನಡ ರೀಮೇಕ್ ನಲ್ಲಿ ನಟಿಸುತ್ತಿದ್ದೇನೆ. ಅದನ್ನು ನಾನು ನಿರ್ಮಿಸುತ್ತಿಲ್ಲ. ಬೇರೆಯವರ ನಿರ್ಮಾಣದ ಈ ಚಿತ್ರ ಏಪ್ರಿಲ್ ತಿಂಗಳಿನಲ್ಲಿ ಸೆಟ್ಟೇರಲಿದೆ.

    ಇವಿಷ್ಟು ಸಂಗತಿಗಳನ್ನು ಹಂಚಿಕೊಂಡರು ಕನ್ನಡದ ಹಾಸ್ಯ ನಕ್ಷತ್ರ ಕೋಮಲ್. ಅವರ ಉದ್ದೇಶ ಹಾಗೂ ಗುರಿ ಈಡೇರುವುದು ಖಾತ್ರಿ ಎಂಬುದನ್ನು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿದ್ದ ವೃತ್ತಿಪರತೆ ಹಾಗೂ ಆತ್ಮವಿಶ್ವಾಸವೇ ಸಾರಿ ಹೇಳುತ್ತಿತ್ತು. ಒಟ್ಟಿನಲ್ಲಿ ಕಾಮಿಡಿ ಕಿಲಾಡಿಗಳು ಶೋ ಮೂಲಕ ಯಶಸ್ಸು ತಮ್ಮೊಬ್ಬರ ಸ್ವತ್ತಲ್ಲ, ಬೇರೆಯವರಿಗೂ ಇರಲಿ ಎನ್ನುವ ಕೋಮಲ್ ಸಂದೇಶ, ಎಲ್ಲರಿಗೂ ಮಾದರಿಯಾಗಲಿ ಎನ್ನಬಹುದು.

    English summary
    This is Comedy Actor Komal Kumar's Exclusive Interview. Now, Komal producing and hosting the sow 'Comedy Kiladigalu' in Zee Kannada Channel.
 
    Thursday, February 23, 2012, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X