ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್

1980-90ರ ದಶಕದಲ್ಲಿ ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಕಾಶೀನಾಥ್ ಹಿಂದಿಯಲ್ಲಿ ಕೂಡ ಒಂದು ಚಿತ್ರವನ್ನು ನಿರ್ಮಿಸಿದ್ದರು. ನಟನೆ, ನಿರ್ದೇಶನ, ಸಂಗೀತ, ಚಿತ್ರ ನಿರ್ಮಾಣ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸಿರುವ ಕಾಶೀನಾಥ್ ಅವರ ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದವು.
ಅವರ ಅನುಭವ, ಅನಂತನ ಅವಾಂತರ, ಹೆಂಡತಿ ಎಂದರೆ ಹೀಗಿರಬೇಕು, ಅವಳೇ ನನ್ನ ಹೆಂಡತಿ ಮುಂತಾದ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಅಜಗಜಾಂತರ ಚಿತ್ರ ಯಾವ ಮಟ್ಟಿಗೆ ಯಶಸ್ವಿಯಾಗಿತ್ತೆಂದರೆ ಈ ಚಿತ್ರವನ್ನು 'ಜುದಾಯಿ' ಎನ್ನುವ ಹೆಸರಿನಲ್ಲಿ (ಅನಿಲ್ ಕಪೂರ್, ಶ್ರೀದೇವಿ, ಊರ್ಮಿಳಾ) ಹಿಂದಿಗೆ ಇವರೇ ರಿಮೇಕ್ ಮಾಡಿದ್ದರು. ಅಲ್ಲದೇ ಅವಳೇ ನನ್ನ ಹೆಂಡತಿ ಚಿತ್ರ 'ಜವಾನಿ ಜಿಂದಾಬಾದ್' ಹೆಸರಿನಲ್ಲಿ ( ಅಮೀರ್ ಖಾನ್, ಫರಾ) ರಿಮೇಕ್ ಆಗಿದ್ದವು.
13 ಕನ್ನಡ, 2 ತೆಲುಗು ಮತ್ತು ಒಂದು ಹಿಂದಿ ಚಿತ್ರವನ್ನು ನಿರ್ದೇಶಿಸಿರುವ ಕಾಶೀನಾಥ್ 11 ಕನ್ನಡ ಮತ್ತು ತಲಾ ಒಂದೊಂದು (ಹಿಂದಿ ಮತ್ತು ತೆಲುಗು) ಚಿತ್ರವನ್ನು ನಿರ್ಮಿಸಿದ್ದರು ಕೂಡ. ಇಷ್ಟೆಲ್ಲಾ ಹೇಳಲು ಕಾರಣ ಈಗ ಕಾಶೀನಾಥ್ ಕಿರುತೆರೆಗೆ ಅಡಿಯಿಟ್ಟಿದ್ದಾರೆ. ಕಾಮಿಡಿ ಕಾರ್ಯಕ್ರಮವೊಂದರಲ್ಲಿ ನಟಿಸುತ್ತಿದ್ದಾರೆ.
ಕಸ್ತೂರಿ ವಾಹಿನಿ ಪ್ರಸಾರ ಮಾಡುತ್ತಿರುವ 'ಕಾಮಿಡಿ ದರ್ಬಾರ್' ಎನ್ನುವ ಕಾಮಿಡಿ ಶೋ ಈಗಾಗಲೇ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8.30ಕ್ಕೆ ಈ ಶೋ ಪ್ರಸಾರವಾಗುತ್ತಿದೆ. ನಿಖಿಲ್ ಕ್ರಿಯೇಸನ್ಸ್ ನಿರ್ಮಿಸುತ್ತಿರುವ ಈ ಹಾಸ್ಯ ಧಾರಾವಾಹಿಯಲ್ಲಿ ಕೊಡಗಿನ ಮಹಾರಾಜನಾಗಿ ಕಾಶೀನಾಥ್ ಮತ್ತು ಮಂತ್ರಿಯಾಗಿ ನಟ ಹಾಗೂ ರಂಗಭೂಮಿ ಪ್ರತಿಭೆ ರಾಜು ತಾಳಿಕೋಟೆ ನಟಿಸಿದ್ದಾರೆ. ಅಲ್ಲದೆ ಈ ಕಾರ್ಯಕ್ರದಲ್ಲಿ ಖ್ಯಾತ ಹಾಸ್ಯ ನಟರು ಕೂಡಾ ಅಭಿನಯಿಸುತ್ತಿದ್ದಾರೆ. ಟಿ ಆರ್ ಪಿ ಯಲ್ಲಿ ಮುನ್ನುಗ್ಗ ಬೇಕಾದರೆ ಈ ತಂಡ ಇನ್ನೂ ಕ್ವಾಲಿಟಿ ಹಾಸ್ಯ ನೀಡಬೇಕಾಗುವುದಂತೂ ಸತ್ಯ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











