ಸುವರ್ಣ Vs ಜೀ ಕನ್ನಡ; ಮಜಾ ವಿತ್ ಸೃಜಾಗೆ ತಡೆ
ಎರಡು ಕನ್ನಡ ಟಿವಿ ವಾಹಿನಿಗಳ ನಡುವಿನ ಜಟಾಪಟಿ ತಾರಕಕ್ಕೇರಿದ್ದು ಕಡೆಗೆ ಕೋರ್ಟ್ ಮೆಟ್ಟಿಲೇರಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಜಾ ವಿತ್ ಸೃಜ' ಕಾರ್ಯಕ್ರಮ ಪ್ರಸಾರಕ್ಕೆ ಬೆಂಗಳೂರಿನ 24ನೇ ಹೆಚ್ಚುವರಿ ನ್ಯಾಯಾಲಯ ತಡೆ ನೀಡಿ ಸೋಮವಾರ(ಅ.25) ಆದೇಶಿಸಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಸಾರವಾಗುತ್ತಿರುವ 'ಬೃಹತ್ ಬ್ರಹ್ಮಾಂಡ' ಕಾರ್ಯಕ್ರವನ್ನು ಅಣಕಿಸುವ ರೀತಿಯಲ್ಲಿ 'ಮಜಾ ವಿತ್ ಸೃಜ' ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ನಿಲ್ಲಿಸುವಂತೆ ದೂರಿ ಜೀ ಕನ್ನಡ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು.
ಜ್ಯೋತಿಷಿ ನರೇಂದ್ರ ಬಾಬು ಶರ್ಮ ನಡೆಸಿಕೊಡುತ್ತಿರುವ 'ಬೃಹತ್ ಬ್ರಹ್ಮಾಂಡ' ಕಾರ್ಯಕ್ರಮವನ್ನು ಅಣಕಿಸುವ ರೀತಿಯಲ್ಲಿ ಸುವರ್ಣ ವಾಹಿನಿ ಕಾರ್ಯಕ್ರಮ ಮೂಡಿಬರುತ್ತಿದೆ. ಇದರಿಂದ ನರೇಂದ್ರ ಬಾಬು ಅವರ ಮಾನಕ್ಕೆ ಹಾನಿಯಾಗಿದೆ ಎಂದು ಅರ್ಜಿದಾರರು ದೂರಿದ್ದರು.
ಈ ಸಂಬಂಧ ಸುವರ್ಣ ವಾಹಿನಿಯ ನಿರ್ದೇಶಕ, ನಿರ್ಮಾಪಕ ಸೇರಿದಂತೆ 12 ಮಂದಿ ವಿರುದ್ಧ ಕೋರ್ಟ್ ನೋಟೀಸ್ ಜಾರಿಗೆ ಆದೇಶಿಸಿದೆ. ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಲಾಗಿದೆ. ಸದ್ಯಕ್ಕೆ 'ಮಜಾ ವಿತ್ ಸೃಜಾ' ಕಾರ್ಯಕ್ರಮದಲ್ಲಿ ನರೇಂದ್ರ ಬಾಬು ಅವರನ್ನು ಅಣಕು ಮಾಡಲಾಗುತ್ತಿದೆ ಎಂಬ ಭಾಗಕ್ಕೆ ಕತ್ತರಿ ಹಾಕಿ ಪ್ರಸಾರ ಮಾಡಲಾಗುತ್ತಿದೆ.
'ಮಜಾ ವಿತ್ ಸೃಜ' ಕಾರ್ಯಕ್ರಮದ ಆರಂಭದಲ್ಲೇ ನಿರೂಪಕ ಸೃಜನ್ ಲೋಕೇಶ್ ಈ ಕಾರ್ಯಕ್ರಮದ ಸೂಕ್ಷ್ಮ ಗಳನ್ನು ತಿಳಿಸಿದ್ದರು. ಇದೊಂದು ಪಕ್ಕಾ ಹಾಸ್ಯ ಕಾರ್ಯಕ್ರಮವಾಗಿದ್ದು ಯಾರನ್ನೂ ಉದ್ದೇಶಿಸಿ ಮಾಡಲಾಗಿಲ್ಲ. ಕಾರ್ಯಕ್ರಮದಲ್ಲಿನ ಎಲ್ಲ ಸನ್ನಿವೇಶಗಳು ಕೇವಲ ಕಾಲ್ಪನಿಕ ಅಷ್ಟೇ ಎಂಬ ವಿಶೇಷ ಸೂಚನೆಯನ್ನು ಕೊಟ್ಟಿದ್ದರು.
ಮುಖ ಸಪ್ಪೆ ಮಾಡಿಕೊಂಡು ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ. ಯಾವುದೇ ವಿಚಾರವನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳದೆ ಅದರಲ್ಲೂ ನಗುವುದನ್ನು ಕಲಿಯಬೇಕು. ಈ ಕಾರ್ಯಕ್ರಮದಲ್ಲಿ ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ ಮಜಾ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡಿದ್ದೇವೆ ಎಂದು ಸೃಜನ್ ಲೋಕೇಶ್ ಆರಂಭದಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದರು.


Click it and Unblock the Notifications











