ಪ್ಯಾಟೆ ಮಂದಿ ಯಾತಕ್ಕಾದರೂ ಕಾಡಿಗೆ ಬಂದ್ರು?

ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ಕೆಳಾಸೆಯಲ್ಲಿ ಚಿತ್ರಿಕರಣದಲ್ಲಿ ತೊಡಗಿಕೊಂಡಿರುವ ಪ್ಯಾಟೆ ಮಂದಿ ತಂಡ ಇಲ್ಲಿನ ಬಿದಿರು ಮೆಳೆಗಳನ್ನು ಬೇಕಾಬಿಟ್ಟಿ ಕಡಿದು ಹಾಕಿ ರಾತ್ರಿ ವೇಳೆಯಲ್ಲೂ ಚಿತ್ರೀಕರಣಕ್ಕೆ ಮುಂದಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಪರವಾನಿಗೆ ನಿರಾಕರಿಸಲ್ಪಟ್ಟದ್ದರಿಂದ ಸ್ಥಳೀಯರೊಬ್ಬರ ಗದ್ದೆಯಲ್ಲಿ ಚಿತ್ರೀಕರಣ ಮುಂದುವರಿಸಿತ್ತು.
ಆದರೀಗ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿ ಅರಣ್ಯ ಇಲಾಖೆಯ ಸೂಕ್ಷ್ಮತೆಯನ್ನು ಕಾಡಿನ ಸಭ್ಯತೆಯನ್ನು ಗಾಳಿಗೆ ತೂರಿದೆ. ರಿಯಾಲಿಟಿ ಶೋದ "ಗ್ರಾಂಡ್ ಫಿನಾಲೆ" ಎಂದು ಹೇಳಿಕೊಂಡು ಶನಿವಾರ ರಾತ್ರಿ ಭಾರಿ ಪ್ರಮಾಣ ಬೆಂಕಿಯೆಬ್ಬಿಸಿ ಪ್ರಾಣಿಗಳನ್ನಷ್ಟೇ ಅಲ್ಲ; ಅರಣ್ಯ ಇಲಾಖೆ ಸಹಿತ ಸುತ್ತುಮುತ್ತಲಿನ ಗ್ರಾಮಸ್ಥರ ನಿದ್ದೆಯನ್ನೂ ಕೆಡಿಸಿದೆ.
ಶಿಶಿರದಲ್ಲಿ ಸಹಜವಾಗಿ ಬೀಸುವ ಗಾಳಿ, ಗದ್ದೆಗಳಲ್ಲಿ ಪೇರಿಸಿಟ್ಟಿರುವ ಭತ್ತದ ಗೊಣಬೆಗಳು, ಕಾಡಿನಲ್ಲಿ ಹಸಿರು ಮಾಸಿ ಒಣ ತರಗೆಲೆಗಳು ಉದುರುವ ಈ ಸಮಯದಲ್ಲಿ ಈ ರಿಯಾಲಿಟಿ ಶೋದವರು ಹೀಗೆ ಬೆಂಕಿಯೊಂದಿಗೆ ಚೆಲ್ಲಾಟವಾಡುತ್ತಿರುವುದು ಸ್ಥಳೀಯ ವಾಸಿಗಳನ್ನು ಭಯದ ವಾತಾವರಣದಲ್ಲೇ ಬದುಕುವಂತೆ ಮಾಡಿದೆ.
ಸ್ಥಳೀಯರಿಗೆ ಅಪಮಾನ: ಅಷ್ಟೇ ಅಲ್ಲದೇ ಗ್ರ್ಯಾಂಡ್ ಫಿನಾಲೆ ಶೋನಲ್ಲಿ ಹೇಳಿಕೊಂಡು ಕಾರ್ಯಕ್ರಯಕ್ಕೆ ಆಹ್ವಾನಿಸಿದ ಸ್ಥಳೀಯ ಹಾಗೂ ಕೆಲವು ಜನಪ್ರತಿನಿಧಿಗಳಿಗೂ ಅಪಮಾನವಾಗುವಂತೆ ಚಿತ್ರೀಕರಣ ತಂಡ ನಡೆದುಕೊಂಡಿದೆ. ಆಹ್ವಾನಿತರಾಗಿ ಸ್ಥಳಕ್ಕೆ ತೆರಳಿದ್ದ ಇಡಗುಂದಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಅವರಿಗೆ ಆಸನ ವ್ಯವಸ್ಥೆಯನ್ನೂ ನೀಡದೇ ವಾಪಸ್ ಮರಳುವಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕರ್ನಾಟಕ ಕಾಡಿನ ಜ್ಞಾನವಿಲ್ಲ: ಈ ರಿಯಾಲಿಟಿ ಶೋನಲ್ಲಿ ನಡೆಸುವ ಟಾಸ್ಕ್ ಗಳು ಯಾವುದೋ ಬೇರೆ ಪ್ರದೇಶದ ಜನಾಂಗದ ಕ್ರಿಯೆಗಳನ್ನು ಎತ್ತು ತೋರಿಸುತ್ತವೆ. ಅಲ್ಲದೆ, ನಿರೂಪಕ ಅಕುಲ್ ಬಾಲಾಜಿಯಾಗಿ ಎಲ್ಲಾ ಅಭ್ಯರ್ಥಿಗಳು ಸಹನೆಯ ಕಟ್ಟೆ ಒಡೆದು ನಿಜವಾದ ಅರ್ಥದಲ್ಲಿ ಕಾಡು ಮನುಷ್ಯರಂತೆ ವರ್ತಿಸಿರುವುದು ಈಗಾಗಲೇ ಪ್ರಸಾರವಾಗಿದೆ. [ರಿಯಾಲಿಟಿ ಶೋ]


Click it and Unblock the Notifications











