ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ರಾಧಾ ಕಲ್ಯಾಣ

ಒಂದು ಊರಿನ ಶ್ರೀ ಕೃಷ್ಣ ದೇವಸ್ಥಾನದ ಅರ್ಚಕರ ಸಾಕು ಮಗಳು ರಾಧಿಕಾ. ಕುಟುಂಬದ ಆಚಾರ ವಿಚಾರಗಳನ್ನು ಅರಿತು ಸಂಪ್ರದಾಯಸ್ಥೆಯಾಗಿ ಬೆಳೆದಿರುತ್ತಾಳೆ. ಆದರೆ ಅವಳ ಕುಲ ಗೋತ್ರ ಗೊತ್ತಿಲ್ಲದಿದ್ದುದರಿಂದ ಮಡಿ ಮಡಿ ಎಂದು ಎಲ್ಲರೂ ಅವಳನ್ನು ದೇವರ ಕೆಲಸದಿಂದ ದೂರವೇ ಇಟ್ಟಿರುತ್ತಾರೆ. ಆದರೆ ಅರ್ಚಕರು ಮಾತ್ರ ಪ್ರೀತ್ಯಾದರದಿಂದ ನೋಡಿಕೊಳ್ಳುತ್ತಿರುತ್ತಾರೆ.
ಅರ್ಚಕರ ಸ್ವಂತ ಮಗಳು ವಿಶಾಖಾ ಮಾಡರ್ನ್ ಹುಡುಗಿಯಾಗಿ ಬೆಳೆದಿರುತ್ತಾಳೆ. ಅವಳಿಗೆ ಮಾಡೆಲ್, ಸಿನಿಮಾ ಹಿರೋಯಿನ್ ಆಗುವ ಆಸೆ. ತನ್ನ ಎಲ್ಲ ಕೆಲಸಗಳಿಗೂ ರಾಧಿಕಾಳನ್ನು ಬೊಂಬೆಯ ತರಹ ಉಪಯೋಗಿಸಿಕೊಳ್ಳುತ್ತಿರುತ್ತಾಳೆ. ಮಡಿವಂತರಿಂದಾಗುವ ಅವಮಾನಗಳನ್ನು ಸಹಿಸುತ್ತ, ಅಕ್ಕನ ಕೈಗೊಂಬೆಯಾಗಿ, ಕೃಷ್ಣನಿಗಾಗಿ ಪರಿತಪಿಸುತ್ತಿರುವ ರಾಧಿಕಾಳ ಮದುವೆಯ ವಿಷಯದಲ್ಲೂ ವಿಶಾಖಾ ಆಟವಾಡಲು ಯೋಜಿಸುತ್ತಾಳೆ. ರಾಧಿಕಾ ಅಕ್ಕನ ಯೋಚನೆಗೆ ಪಕ್ಕಾಗುತ್ತಾಳಾ? ಇದು ಕಥೆಯ ಮುಖ್ಯ ತಿರುವು.
ಹೊಸ ಹೊಸ ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳುವುದರ ಜೊತೆಗೆ ಸಮಾಜದ ಓರೆಕೋರೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಪ್ರಯತ್ನ ಜೀ ಕನ್ನಡ ಧಾರಾವಾಹಿಗಳಲ್ಲಿ ನಡೆಯುತ್ತಿದೆ. ರಾಧಾ ಕಲ್ಯಾಣ ಅಂತಹ ಒಂದು ಹೊಸಥರ ಪ್ರಯತ್ನ ಎಂದು ಜೀ ವಾಹಿನಿ ದಕ್ಷಿಣ ಭಾರತ ಮುಖ್ಯಸ್ಥ ಗೌತಮ್ ಮಾಚಯ್ಯ ಹೇಳಿದ್ದಾರೆ.
ಕಿರುತೆರೆಯ ಜನಪ್ರಿಯ ನಟ ಅಶೋಕ್ ಹೆಗಡೆ ಅಪ್ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಧಾ ಕಲ್ಯಾಣವನ್ನು ನಿರ್ಮಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಬದುಕು ಜಟಕಾಬಂಡಿ ನಿರ್ದೇಶಕ ರಾಮ್ಜಿ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ರಾಧಾ ಕಲ್ಯಾಣ ಮುಖ್ಯ ಭೂಮಿಕೆಯಲ್ಲಿ ಕೃತಿಕಾ, ಚಂದನ್, ಚೈತ್ರಾ ರೈ, ಅಶೋಕ್ ಹೆಗಡೆ, ಸೀತಾ ಕೋಟೆ, ವೆಂಕಟಾದ್ರಿ, ರೇಖಾ ವಿ. ಕುಮಾರ್ ಮುಂತಾದವರಿದ್ದಾರೆ. ಕಥೆ- ಚಿತ್ರಕಥೆ: ಜೀ ಕನ್ನಡ ಕಥಾ ವಿಭಾಗ. ಸಂಭಾಷಣೆ: ರೈಟ್ ಪೀಪಲ್. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











