ಐವತ್ತು ಮುಗಿಸಿದ ಆಪ್ತಮಿತ್ರನ ನೆನೆಯುತ್ತಾ...

ಮಿತವಾದ ಮಿತ್ರರು. ಸದ್ಯಕ್ಕಂತೂ ವೀರೇಶ್, ಲಿಂಗದೇವರು, ಹೆಚ್ ಎಂ ರಾಮಚಂದ್ರ, ನಾನು ಹೀಗೆ ನಾಲ್ಕೈದು ಮಂದಿ ಇದ್ದರೆ ಹೆಚ್ಚು. ಮಿತವಾದ ಮಾತು. ಹೆಣ್ಮಕ್ಕಳೆಂದರೆ ಭಯ, ಭಕ್ತಿ ಮತ್ತು ಅಲರ್ಜಿ. ಮದುವೆಯೇ ಆಗೋಲ್ಲ ಅನ್ನುತ್ತಿದ್ದ ಉದಯ್ ಪ್ರೇಮದಲ್ಲಿ ಬಿದ್ದು ಮದುವೆಯಾದರು. ಮಕ್ಕಳು ಬೇಡ ಅನ್ನುತ್ತಿರುವಾಗಲೇ ಅವಳಿ ಮಕ್ಕಳ ತಂದೆಯಾದರು. ನಿಮ್ಮ ಬರಹಗಳ ಒಂದು ಪುಸ್ತಕ ತರೋಣ ಅಂತ ಗೆಳೆಯರು ಒತ್ತಾಯ ಮಾಡುತ್ತಿದ್ದರೆ ನೋಡೋಣ ಅಂತ ಗಡ್ಡ ಸವರಿಕೊಂಡು ಮಾತು ಬದಲಾಯಿಸುತ್ತಾರೆ.
ಈ ನಾಸ್ತಿಕ ಮಿತ್ರನಿಗೆ ಐವತ್ತಾದ ಸಂದರ್ಭದಲ್ಲಿ ನಾವೊಂದಷ್ಟು ಮಂದಿ ಸೇರಿದ್ದೆವು. ಹಳೆಯ ದಿನಗಳನ್ನು ನೆನಪಿಸಿಕೊಂಡೆವು. ಮಿಕ್ಕ ಆಯುಷ್ಯವನ್ನು ಹೇಗೆ ಕಳೆಯುವುದು ಎಂದು ಯೋಚಿಸಲು ಪುರುಸೊತ್ತಿಲ್ಲದಷ್ಟು ಕೆಲಸ ಕೈಯಲ್ಲಿದೆ. ಚಿತ್ರೋದ್ಯಮ ಮೊದಲಿನಷ್ಟು ಹುಮ್ಮಸ್ಸಿನಿಂದ ಕೂಡಿಲ್ಲ. ಟೀವಿಯ ಮುಂದೆ ಮಾತಾಡಬಲ್ಲ ನಟ, ನಿರ್ದೇಶಕರು ಓದುವುದು ಬಿಟ್ಟಿದ್ದಾರೆ. ನಡುರಾತ್ರಿವರೆಗೆ ಕಾದು ಕೂತು ಅವರ ಬಾಯಿಬಿಡಿಸಿ, ಅವರ ಒಳಹೊರಗುಗಳನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಈಗಿನ ತರುಣ ಪತ್ರಕರ್ತರಿಗೂ ಇದ್ದಂತಿಲ್ಲ.
ಅಂಥ ಹೊತ್ತಲ್ಲಿ ಉದಯ್ ಫಸ್ಟ್ ಹಾಫ್ ಮುಗಿಸಿದ್ದಾರೆ. ನೆಕ್ಸ್ಟ್ ಹಾಫ್ ಮುಗಿಸಿದಾಗ ಮತ್ತೊಂದು ಸುದೀರ್ಘ ಪಾರ್ಟಿ ಮಾಡೋಣ ಅಂತ ಗೆಳೆಯ ರವಿ ಹೆಗಡೆ ಹೇಳಿದರು. ನಾವೆಲ್ಲ ಒಂದೇ ಏಟಿಗೆ ಖಂಡಿತಾ ಅಂದೆವು. ಇನ್ನೂ ಐವತ್ತು ವರ್ಷ ನಾವೆಲ್ಲ ಬದುಕಿರುತ್ತೇವೆ ಎಂಬ ಆಸೆಗಿಂತ ಮುಕ್ಕಾಗದೇ ಉಳಿಯಬಲ್ಲ ಸ್ನೇಹಕ್ಕೆ ಪಕ್ಕಾಗಬಲ್ಲವರು ಕೇವಲ ಬೆರಳೆಣಿಕೆಯ ಮಂದಿ ಅಷ್ಟೇ ಎಂಬ ಸತ್ಯ ನಮಗೆಲ್ಲ ಅರ್ಥವಾದಂತಿತ್ತು.


Click it and Unblock the Notifications











