ಉಪ್ಪಿ ಚಿತ್ರದ ಬಗ್ಗೆ ಉದಯ್ ಬರೆದದ್ದು ಸುಳ್ಳಾಗಲಿಲ್ಲ

ರಮೇಶ್ ಅರವಿಂದ್ ಆಗೆಲ್ಲ ಮಧ್ಯಮ ವರ್ಗದ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಿತ್ರದ ಕೊನೆಯಲ್ಲಿ ಪ್ರೀತಿಸಿದವಳನ್ನು ಬೇರೆಯವರಿಗೆ ಬಿಟ್ಟುಕೊಡುವ ಪಾತ್ರವೇ ಅವರಿಗೆ ಸಿಗುತ್ತಿತ್ತು. ಅಂಥ ಒಂದು ಸಂದರ್ಭದಲ್ಲಿ ಉದಯ್ ರಮೇಶ್ ಅರವಿಂದ್ಗೆ ಕೊಟ್ಟ ಬಿರುದು- ತ್ಯಾಗರಾಜ. ಅದನ್ನು ರಮೇಶ್ ಎಷ್ಟು ಇಷ್ಟಪಟ್ಟಿದ್ದರೆಂದರೆ ಸಂದರ್ಶನಗಳಲ್ಲಿ ನಾಲ್ಕಾರು ಸಲವಾದರೂ ಅದನ್ನವರು ಹೇಳಿರಬೇಕು. ಉದಯ್ ಸಂದರ್ಶನವೊಂದನ್ನು ಮೆಚ್ಚಿದ ರಮೇಶ್ ಅವರಿಗೊಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಜಗತ್ತಿನ ಅತ್ಯುತ್ತಮ ಸಂದರ್ಶನಗಳಿದ್ದ ಪುಸ್ತಕ ಅದು. ಅದರ ಒಳಪುಟದಲ್ಲಿ ರಮೇಶ್ ಒಂದು ಸಾಲು ಬರೆದಿದ್ದರು- ನಾನು ಕಂಡ ಅತ್ಯುತ್ತಮ ಸಂದರ್ಶಕನಿಗೆ,ಪ್ರೀತಿಯಿಂದ.
ಕನ್ನಡಪ್ರಭದಲ್ಲೊಂದು ರಗಳೆಯಿತ್ತು. ಅದು ಜಾಹೀರಾತುಗಳನ್ನು ನಂಬಿಕೊಂಡ ಪತ್ರಿಕೆ. ಯಾವ ಸಿನಿಮಾವನ್ನೂ ತೆಗಳಬಾರದು ಎಂಬ ಅಲಿಖಿತ ನಿಯಮವಿತ್ತು. ಅಂಥ ಸಂದಿಗ್ಥದಲ್ಲೂ ಸಿನಿಮಾದ ಕುರಿತು ಓದುಗರಿಗೆ ಸ್ಪಷ್ಟ ಚಿತ್ರಣ ಸಿಗುವಂತೆ ಬರೆಯುತ್ತಿದ್ದವರು ಉದಯ್. ಅವರಿಗೆ ವ್ಯಂಗ್ಯ ಸಿದ್ಧಿಸಿತ್ತು. ಸಂಬಂಧಪಟ್ಟವರು ಸಂತೋಷಪಡುವಂತೆ, ಹೊರಗಿನವರು ಅದರ ಒಳಾರ್ಥವನ್ನು ತಿಳಿಯಬಲ್ಲಂತೆ ಉದಯ್ ಬರೆಯುತ್ತಿದ್ದರು. ಅವರು ಸಿನಿಮಾ ನೋಡಿದರು ಎಂದರೆ ನಿರ್ಮಾಪಕ, ನಿರ್ದೇಶಕರಿಗೆ ಖುಷಿ. ಅವರು ಹೊರಾಂಗಣ ಚಿತ್ರೀಕರಣ ವೀಕ್ಷಿಸಲು ಬರುತ್ತಾರೆ ಎಂದರೆ ಸಹಕಲಾವಿದರಿಗೆ ಸಂತೋಷ. ಒಂದು ಸಣ್ಣ ಪಾತ್ರದಲ್ಲಿ ನಟಿಸುವ ಸಹಕಲಾವಿದನನ್ನೂ ಮಾತಾಡಿಸಿ, ಅವನ ಮನಸ್ಸಿನಲ್ಲಿದ್ದುದನ್ನೂ ಉದಯ್ ಬರೆಯುತ್ತಿದ್ದರು. ಅವರು ಬರೆದ ಒಂದು ವರದಿ ಓದಿದರೆ ಸಾಕು, ಇಡೀ ಸನ್ನಿವೇಶವೇ ಕಣ್ಮುಂದೆ ಸುಳಿಯುತ್ತಿತ್ತು.


Click it and Unblock the Notifications











