ಚಿತ್ರಪ್ರಭಕ್ಕೆ ಮತ್ತೆ ಜನಪ್ರಿಯತೆ ಸಿಕ್ಕಿದ್ದು ಹೇಗೆ ಗೊತ್ತೆ?

ಸಂಯುಕ್ತ ಕರ್ನಾಟಕದ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಉದಯ್ ಮತ್ತು ರವಿ ಜನಪ್ರಿಯ ಜೋಡಿ. ರವಿ ಮನೆಯಲ್ಲೇ ಉದಯ್ ವಾಸ್ತವ್ಯ. ಅಲ್ಲಿಂದ ನಂತರ ಸಿಕ್ಕವರು ವೈಯನ್ಕೆ. ಅಷ್ಟು ಹೊತ್ತಿಗಾಗಲೇ ಕನ್ನಡಪ್ರಭದಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ರಾಜ್ ವಿರುದ್ಧ ಅದೇನನ್ನೋ ಬರೆದು ಪತ್ರಿಕೆಯನ್ನೇ ಕಷ್ಟಕ್ಕೆ ದೂಡಿದ್ದರು. ಆ ಅನಾಹುತವನ್ನು ರಿಪೇರಿ ಮಾಡುವುದಕ್ಕೆ ಬಂದವರು ಉದಯ್. ಒಂದೇ ವರುಷದಲ್ಲಿ ಮತ್ತೆ ಕನ್ನಡಪ್ರಭ ಚಿತ್ರರಂಗದ ಅಚ್ಚುಮೆಚ್ಚಿನ ಪತ್ರಿಕೆಯಾಯಿತು.
ನಾನು ಉದಯ್ ಭೇಟಿಯಾದದ್ದು ವೈಯೆನ್ಕೆ ಕೃಪೆಯಿಂದಾಗಿ. ಕನ್ನಡಪ್ರಭಕ್ಕೆ ಕನ್ನಡ ಚಿತ್ರರಂಗ ಬೆಂಬಲ ಹಿಂದೆಗೆದುಕೊಳ್ಳಲು ನಿರ್ಧರಿಸಿದ ದಿನಗಳಲ್ಲಿ ವೈಯೆನ್ಕೆ ಸಿಟ್ಟಾಗಿದ್ದರು. ನನಗೆ ಓದುಗರು ಮುಖ್ಯ. ಅವರಿಗೆ ಆಸಕ್ತಿ ಹುಟ್ಟಿಸುವಂಥದ್ದು ಬರೀರಿ. ಹಿಂದಿ ಚಿತ್ರರಂಗದ ಬಗ್ಗೆ ಬರೀರಿ ಅಂದರು. ನಾನು ಬಾಲಿವುಡ್ ಘಾಸಿಪ್ ಎಂಬ ಅಂಕಣ ಬರೆಯಲು ಆರಂಭಿಸಿದೆ. ಅದಾಗಿ ಎರಡೋ ಮೂರೋ ವರ್ಷದ ನಂತರ ಮತ್ತೊಬ್ಬ ಗೆಳೆಯ ಶ್ಯಾಮ್ ಪ್ರೆಸ್ ಕ್ಲಬ್ಬಿನಲ್ಲಿ ನಮ್ಮನ್ನೆಲ್ಲ ಒಂದಾಗಿಸಿದರು.
ಅದಾದ ನಂತರ ನಮ್ಮಿಬ್ಬರ ಲಿವಿಂಗ್ ಟುಗೆದರ್ ಶುರುವಾಯಿತು. ಲಿಂಗದೇವರು ನಿರ್ದೇಶಿಸಿದ ಶಿಕಾರಿ ಸೀರಿಯಲ್ಲಿಗೆ ಜೊತೆಯಲ್ಲಿ ಸಂಭಾಷಣೆ ಬರೆದವು. ಚಿತ್ರಕತೆ ರಚಿಸಿದೆವು. ರವಿಕಿರಣ್ ಶಕ್ತಿ ಎಂಬ ಮೆಗಾಸೀರಿಯಲ್ಲಿನ ಕೆಲಸ ಕೊಟ್ಟರು. ಅಲ್ಲಿಂದೀಚೆಗೆ ನಾವು ಏನಿಲ್ಲವೆಂದರೂ ಮೂವತ್ತೋ ನಲವತ್ತೋ ಸೀರಿಯಲ್ಲುಗಳಿಗೆ ಸಂಭಾಷಣೆ ಬರೆದಿರಬಹುದು. ಮೌನಿ, ಕಾಡಬೆಳದಿಂಗಳು ಮುಂತಾದ ಸಿನಿಮಾಗಳನ್ನೂ ನಾವು ಜೊತೆಯಾಗಿಯೇ ಬರೆದದ್ದು.
ಉದಯ್ ಪರಮ ಸೋಮಾರಿ ಅಂದುಕೊಂಡಿದ್ದ ನಾನು ಗಾಬರಿಬೀಳುವಂತೆ ಕೆಲಸ ಮಾಡುವುದನ್ನು ಇದೇ ಅವಧಿಯಲ್ಲಿ ನಾನು ನೋಡಿದ್ದು. ಸಂತೆಯಲ್ಲಿ ಕೂತುಕೊಂಡೂ ಬರೆಯಬಲ್ಲವರು ಅವರು. ದಿನಕ್ಕೆ ಏನಿಲ್ಲವೆಂದರೂ ನಲವತ್ತು ಪುಟ ಸಲೀಸಾಗಿ ಬರೆಯಬಲ್ಲರು. ನಾನು ಡೆಡ್ಲೈನಿಗೆ ಕಾಯುವ ಅಸಾಮಿ. ಅವರು ಮೊದಲು ಕೆಲಸ ಮುಗಿಸಬೇಕು ಅನ್ನುವವರು.


Click it and Unblock the Notifications











