ಬಿಗ್ ಬಾಸ್ 'ಖೆಡ್ಡಾ'ಗೆ ಬಿದ್ದ ವೈದ್ಯ, ಬಿತ್ತು ಹತ್ತು ಲಕ್ಷ ಪಂಗನಾಮ
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದೂವರೆ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ಬಿಗ್ ಬಾಸ್ ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು.
ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ. ಹಿಂದಿಯಲ್ಲಿ ಈ ಕಾರ್ಯಕ್ರಮದ 18 ಸೀಸನ್ಗಳು ಪೂರ್ಣಗೊಂಡಿವೆ. ಕನ್ನಡದಲ್ಲಿ 11 ಸೀಸನ್ ಯಶಸ್ವಿಯಾಗಿ ನಡೆದಿವೆ. ತೆಲುಗು ಮತ್ತು ತಮಿಳಿನಲ್ಲಿ 8 ಸೀಸನ್ ಪೂರ್ಣಗೊಂಡಿದ್ದರೆ ಮಲಯಾಳಂನಲ್ಲಿ 7 ಸೀಸನ್ಗಳು ಮುಕ್ತಾಯಗೊಂಡಿವೆ. ಮರಾಠಿಯಲ್ಲಿ ಇಲ್ಲಿಯವರೆಗೆ 5 ಸೀಸನ್ಗಳಾಗಿವೆ.

ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಕೇವಲ ಸೆಲೆಬ್ರೆಟಿಗಳಿಗೆ..ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ಗಳಿಗೆ .. ಜ್ಯೋತಿಷಿಗಳಿಗೆ ಅಷ್ಟೇ ಸೀಮಿತವಾದದ್ದು. ನಿಜಾ.. ಅಲ್ಲಲ್ಲಿ ಜನಸಾಮಾನ್ಯರಿಗೆ ಅವಕಾಶವನ್ನು ನೀಡಲಾಗಿದೆ. ಮಲಯಾಳಂ ಮತ್ತು ತೆಲುಗಿನಲ್ಲಿ ಈ ಬಾರಿ ಕಾಮನ್ ಮ್ಯಾನ್ಗಳಿಗೆ ಮುಖ್ಯದ್ವಾರವನ್ನು ತೆಗೆಯಲಾಗಿದೆಯಾದರೂ ಸಾಮಾನ್ಯ ಜನರಿಗೆ ಇಲ್ಲಿ ಅವಕಾಶ ಸಿಗುವುದು ತುಂಬಾನೇ ವಿರಳ.
ಈ ವಿಚಾರ ಗೊತ್ತಿದ್ದರು ಕೂಡ ಕೆಲವರು ''ಬಿಗ್ ಬಾಸ್'' ಕಾರ್ಯಕ್ರಮದ ಕನಸು ಕಾಣ್ತಾರೆ. ನಾನಾ ತರಹದ ಸರ್ಕಸ್ ಮಾಡುತ್ತಾರೆ. ಮತ್ತೂ ಕೆಲವೊಮ್ಮೆ ಬಿಗ್ ಬಾಸ್ ಆಸೆಗೆ ಬಿದ್ದು ಮೋಸಗಾರರು ತೋಡಿದ ಖೆಡ್ಡಾಗೆ ಬಿದ್ದು ದುಡ್ಡನ್ನು ಕೂಡ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಡಾಕ್ಟರ್ ಅಭಿನೀತ್ ಗುಪ್ತಾ.
ಹೌದು, ಭೋಪಾಲ್ನ ಡಾ ಅಭಿನೀತ್ ಗುಪ್ತಾಗೆ ''ಬಿಗ್ ಬಾಸ್'' ಆಸೆಯನ್ನು ತೋರಿಸಿ ಹತ್ತು ಲಕ್ಷ ರೂಪಾಯಿ ಪಂಗನಾಮವನ್ನು ಕರಣ್ ಸಿಂಗ್ ಎಂಬ ವ್ಯಕ್ತಿ ಹಾಕಿದ್ದಾನೆ. 2022ರಲ್ಲಿ ಚರ್ಮರೋಗ ತಜ್ಞರಾದ ಡಾ ಅಭಿನೀತ್ ಗುಪ್ತಾ ಅವರನ್ನು ಸಂಪರ್ಕಿಸಿದ ಕರಣ್ ಸಿಂಗ್ ನೀವು ಭೋಪಾಲ್ನ ಜನಪ್ರಿಯ ವೈದ್ಯ ನೀವ್ಯಾಕೇ ''ಬಿಗ್ ಬಾಸ್'' ಹೋಗಬಾರದು ಎಂದು ಕೇಳಿದ್ದಾನೆ. ''ಬಿಗ್ ಬಾಸ್'' ತಂಡದ ಜೊತೆ ನನಗೆ ಉತ್ತಮವಾದ ಭಾಂದವ್ಯ ಇದೆ ಸಹಾಯ ಮಾಡುವುದಾಗಿ ಹೇಳಿದ್ದಾನೆ.
ಕರಣ್ ಸಿಂಗ್ ಮಾತು ಕೇಳಿ ಮರುಳಾದ ಡಾ.ಅಭಿನೀತ್ ಗುಪ್ತಾ ಕೂಡಲೇ ಹಿಂದಿ ''ಬಿಗ್ ಬಾಸ್'' ಮನೆಗೆ ತೆರಳಲು ರೆಡಿಯಾಗಿದ್ದಾರೆ. ಆಗ ಕರಣ್ ಸಿಂಗ್ ಒಂದು ಕೋಟಿ ಹಣ ನೀಡುವಂತೆ ಕೇಳಿದಾಗ ಅಷ್ಟೊಂದು ಹಣ ನನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ. ಆ ನಂತರ 60 ಲಕ್ಷದ ಬೇಡಿಕೆ ಇಟ್ಟ ಕರಣ್ ಸಿಂಗ್ ಮುಂಬೈಗೆ ಡಾ ಅಭಿನೀತ್ ಗುಪ್ತಾ ಅವರನ್ನು ಕರೆಸಿಕೊಂಡು ಎಂಡೆಮೋಲ್ ಕಂಪನಿಯ ಉಪಾಧ್ಯಕ್ಷ ಹರೀಶ್ ಶಾ ಅವರನ್ನು ಭೇಟಿ ಮಾಡಿಸಿದ್ದಾನೆ. ಈ ಭೇಟಿಯ ನಂತರ ಕರಣ್ ಸಿಂಗ್ನ ನಂಬಿದ ಡಾ ಅಭಿನೀತ್ ಗುಪ್ತಾ ಕೊನೆಗೆ ಹತ್ತು ಲಕ್ಷ ಹಣವನ್ನು ನೀಡಿದ್ದಾರೆ.

ಇನ್ನೇನು ''ಬಿಗ್ ಬಾಸ್'' ಹೋಗುವ ಕನಸು ನನಸಾಯ್ತು ಎಂದು ಡಾ ಅಭಿನೀತ್ ಅಂದುಕೊಂಡಾಗಲೇ ಆಘಾತವಾಯ್ತು. "ಬಿಗ್ ಬಾಸ್ ಸೀಸನ್ 16" ರ ಸ್ಪರ್ಧಿಗಳ ಪಟ್ಟಿಯಲ್ಲಿ ಅಭಿನೀತ್ ಅವರ ಹೆಸರೇ ಇರಲಿಲ್ಲ. ಹೀಗಾಗಿ ಈ ಬಗ್ಗೆ ಕರಣ್ ಸಿಂಗ್ನ ಅಭಿನೀತ್ ಪ್ರಶ್ನೆ ಮಾಡಿದ್ದಾರೆ. ಆಗ ನಿಮ್ಮದು ''ವೈಲ್ಡ್ ಕಾರ್ಡ್'' ಎಂಟ್ರಿ ಎಂದು ಹೇಳಿದ್ದಾನೆ. ಇದನ್ನು ಕೇಳಿ ಸಮಾಧಾನ ಮಾಡಿಕೊಂಡ ಅಭಿನೀತ್ ಇಂದಲ್ಲ.. ನಾಳೆ.. ಕರೆಯಬಹುದು ಎಂದುಕೊಂಡು ಕಾಯುತ್ತಾ ಕುಂತಿದ್ದಾರೆ. ಆದರೆ ಸೀಸನ್ ಮುಗಿಯಿತೇ ಹೊರತು ಡಾ.ಅಭಿನೀತ್ಗೆ ''ವೈಲ್ಡ್ ಕಾರ್ಡ್'' ಸಿಗಲೇ ಇಲ್ಲ.
ಈ ಹಿನ್ನೆಲೆ ಮತ್ತೆ ಕರಣ್ ಸಿಂಗ್ ಅವರನ್ನು ಡಾ ಅಭಿನೀತ್ ಸಂಪರ್ಕ ಮಾಡಿದಾಗ ''ಬಿಗ್ ಬಾಸ್ ಸೀಸನ್ 17''ರ ಕನಸನ್ನು ಕರಣ್ ಸಿಂಗ್ ತೋರಿಸಿದ್ದಾನೆ. ಆಗಲೂ ಕೂಡ ಆಶಾಭಾವನೆಯಿಂದ ಕಾದ ಡಾ.ಅಭಿನೀತ್ಗೆ ಮತ್ತೊಮ್ಮೆ ನಿರಾಸೆಯಾಗಿದೆ. ಆ ನಂತರ ಹತ್ತು ಲಕ್ಷ ಮರಳಿ ಕೊಡುವಂತೆ ಅಭಿನೀತ್ ಕೇಳಿದ್ದಾರೆ. ಆದರೆ ಅಲ್ಲಿಂದ ಕರಣ್ ಸಿಂಗ್ ಕೈಗೆ ಸಿಗದೇ ಓಡಾಡುತ್ತಿದ್ದಾನೆ.
ಹೀಗಾಗಿ ಬೇರೆ ದಾರಿ ಇಲ್ಲದೇ ಪೊಲೀಸರ ಮೊರೆ ಹೋದ ಡಾ.ಅಭಿನೀತ್ ದೂರು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪೊಲೀಸರಿಂದ ಸಹಕಾರ ಸಿಗಲಿಲ್ಲ. ಕೊನೆಗೂ ಈಗ ಎರಡು ವರ್ಷದ ನಂತರ ಎಫ್ಐಆರ್ ದಾಖಲಾಗಿದೆ. ಡಾ.ಅಭಿನೀತ್ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಅಂದ್ಹಾಗೇ ಈ ಎಲ್ಲಾ ವಿಚಾರವನ್ನು ಇತ್ತೀಚೆಗೆ ಡಾ.ಅಭಿನೀತ್ ಪತ್ರಿಕಾಗೋಷ್ಠಿಯನ್ನು ಕರೆದು ಮಾಧ್ಯಮದವರ ಎದುರು ಹೇಳಿದ್ದಾರೆ. ಕರಣ್ನಂತಹ ಜನರಿಂದ ವಂಚನೆಗೆ ಒಳಗಾಗದಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.


Click it and Unblock the Notifications











