'ಬೆಳಕು' ಹುಡುಕಿ ಬಂದ ರತ್ನಮ್ಮ-ಮಂಜಮ್ಮನ ನೋವಿನ ಕಥೆ
Recommended Video
''ಸೋಲದೆ ಗೆಲ್ಲುತ್ತಿದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ....ಜೀವನ ಪೂರ್ತಿ ಸೋಲನ್ನೆ ಕಂಡಿರುವ ನಿಮ್ಮ ಬಾಳಲ್ಲಿ ಇನ್ಮುಂದೆ ಗೆಲುವೊಂದೇ''.....ತುಮಕೂರು ಜಿಲ್ಲೆಯ ಮಧುಗಿರಿ ತಾಲೋಕಿನ ಅಂಧ ಗಾಯಕಿಯರಾದ ರತ್ನಮ್ಮ ಮತ್ತು ಮಂಜಮ್ಮ ಅವರ ಪ್ರತಿಭೆ ಕಂಡ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನುಡಿದ ಆತ್ಮವಿಶ್ವಾಸದ ಮಾತು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ 17ನೇ ಸೀಸನ್ ಆರಂಭವಾಗಿದೆ. ಈ ಆವೃತ್ತಿಯಲ್ಲಿ ಹಲವು ಪ್ರತಿಭೆಗಳು ಬೆಳಕಿಗೆ ಬಂದಿದೆ. ಇದರಲ್ಲಿ ಪ್ರಮುಖವಾಗಿ ರತ್ನಮ್ಮ ಮತ್ತು ಮಂಜಮ್ಮ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ.
ಹುಟ್ಟಿನಿಂದಲೂ ಇಬ್ಬರಿಗೂ ಕಣ್ಣಿಲ್ಲ, ಇಬ್ಬರು ಸಹೋದರಿಯರು, ಬಹಳ ಚೆನ್ನಾಗಿ ಹಾಡುತ್ತಾರೆ. ಮತ್ತು ಕಷ್ಟದಿಂದಲೇ ಬೆಳೆದವರ ನೋವಿನ ಕಥೆ ಶೋಗೆ ಭಾವನಾತ್ಮಕ ಟಚ್ ನೀಡಿದೆ. ಇದು ಈ ಶೋನ ಭವಿಷ್ಯವನ್ನು ಹೇಳುವಂತ್ತಿತ್ತು.

ಜೀವನಕ್ಕಾಗಿ ಹಾಡು ಆರಂಭಿಸಿದವರು
ಹೆಸರು ರತ್ನಮ್ಮ ಮತ್ತು ಮಂಜಮ್ಮ. ಇಬ್ಬರು ಅಕ್ಕ-ತಂಗಿ. ಹುಟ್ಟಿನಿಂದ ಇಬ್ಬರಿಗೂ ಕಣ್ಣಿಲ್ಲ. ಒಟ್ಟು ನಾಲ್ಕು ಜನ ಮಕ್ಕಳಲ್ಲಿ ಇಬ್ಬರಿಗೆ ಕಣ್ಣಿಲ್ಲ . ಗಂಡು ಮಗು ಒಬ್ಬ ತೀರಿಕೊಂಡ. ಕಾಯಿಲೆಯಿಂದ ತಾಯಿಯೂ ನಿಧನ. ಅಜ್ಜಿ ಜೊತೆ ವಾಸವಾಗಿದ್ದು, ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂತಹ ಕಷ್ಟದಲ್ಲೂ ಬದುಕಿನ ಬಂಡಿ ಸಾಗಬೇಕು, ಅದನ್ನು ಸಾಗಿಸುವ ಹೊಣೆಹೊತ್ತವರು ಈ ರತ್ನಮ್ಮ ಮತ್ತು ಮಂಜಮ್ಮ. ಊಟಕ್ಕಾಗಿ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಆರಂಭಿಸಿದರು ಇಂದು ಕರ್ನಾಟಕ ಜನತೆಯ ಮನಸ್ಸಿನಲ್ಲಿ ಮನೆ ಮಾಡಲು ವೇದಿಕೆ ಹತ್ತಿದ್ದಾರೆ.

ಅಭ್ಯಾಸವಿಲ್ಲ, ಸಂಗೀತ ಕಲಿತಿಲ್ಲ
ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಂಗೀತ ಕಲಿತಿಲ್ಲ. ಹೊಟ್ಟೆಪಾಡಿಗಾಗಿ ಹಾಡಲು ಆರಂಭಿಸಿದವರು. ಅದೇ ಅವರ ವೃತ್ತಿಯೂ ಆಗಿದೆ. ಇದೀಗ, ಅವರ ಜೀವನಕ್ಕೊಂದು ತಿರುವು ಸಿಕ್ಕಿದೆ. ಸರಿಗಮಪ ವೇದಿಕೆಯಲ್ಲಿ ಅವಕಾಶ ಪಡೆದುಕೊಂಡಿರುವ ಜೋಡಿ ಸಹೋದರಿಯರ ಬದುಕಿನಲ್ಲಿ ಈ ಶೋ ಖುಷಿಯ ಸಿಂಚನ ನೀಡಲಿದೆ ಎಂಬ ನಂಬಿಕೆ ಮೂಡಿದೆ.

ವಿಡಿಯೋ ವೈರಲ್ ಮಾಡಿದ್ದು ಯಾರು?
ರತ್ನಮ್ಮ ಮತ್ತು ಮಂಜಮ್ಮ ಅವರ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡುತ್ತಿದ್ದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಅದು ಫೇಸ್ ಬುಕ್ನಲ್ಲಿ ವೈರಲ್ ಆಗಿದೆ. ಸರಿಗಮಪ ಆಯೋಜಕರ ಮೊಬೈಲ್ಗೆ ವಾಟ್ಸಾಪ್ ಮೂಲಕ ತಲುಪಿದೆ. ಇವರಿಬ್ಬರ ಹಾಡು ನೋಡಿದ ಆಯೋಜಕರು, ಇವರಿಬ್ಬರು ಸರಿಗಮಪ ವೇದಿಕೆಗೆ ತರಲೇಬೇಕೆಂದು ಮನಸ್ಸು ಮಾಡಿ ಕರೆತಂದಿದೆ. ವೇದಿಕೆ ಹತ್ತಿದ ಸಹೋದರಿಯರು ಆ ವಿಡಿಯೋ ಮಾಡಿದ ವ್ಯಕ್ತಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದರು.

ವಿಶೇಷ ಕಾಳಜಿ ಇರುವುದು ಉತ್ತಮ
ಸಂಗೀತ ಅಭ್ಯಾಸ ಕಲಿತು, ಕೌಟುಂಬಿಕವಾಗಿ ಆರ್ಥಿಕವಾಗಿ ಚೆನ್ನಾಗಿರುವ ಸ್ಪರ್ಧಿಗಳ ನಡುವೆ ಸಂಗೀತದ ಬಗ್ಗೆ ಹೆಚ್ಚು ಗೊತ್ತಿಲ್ಲದ ಹಾಗೂ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವ ಹಾಗೂ ದೈಹಿಕವಾಗಿ ವಿಕಲಚೇತನರಾಗಿರುವ ರತ್ನಮ್ಮ ಮತ್ತು ಮಂಜಮ್ಮ ಆಯ್ಕೆ ಅನೇಕರಿಗೆ ಖುಷಿ ಕೊಟ್ಟಿದೆ. ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅದು ಈ ಶೋ ಮಾಡಲಿ ಎಂಬ ಒತ್ತಾಯವೂ ಇದೆ.

ಈ ಆಯ್ಕೆ ಮಾದರಿಯಾಗಬೇಕಿದೆ!
ಪ್ರತಿ ಸಲವೂ ಇಂತಹ ಪ್ರತಿಭೆಗಳನ್ನು ಕರೆದುಕೊಂಡು ಬಂದು, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಡಲು ಆಯೋಜಕ ತಂಡ ಮಾಡುವ ಪೂರ್ವ ಯೋಜನೆ ಇದು ಎಂಬ ಆಪಾದನೆಯೂ ಇದೆ. ಇಂತಹ ಆರೋಪದ ಮಧ್ಯೆಯೂ ಇವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡು ಅವರಿಗೊಂದು ಬದುಕು ಕಲ್ಪಿಸಿಕೊಡುವಲ್ಲಿ ಹೆಜ್ಜೆಯಿಟ್ಟಿದೆ. ಆದರೆ, ಕೆಲವೊಮ್ಮೆ ಅತಿಯಾದ ವೈಭವ, ಅತಿಯಾದ ಹೊಗಳಿಕೆ ಹಾಗೂ ನಿರ್ದಿಷ್ಟ ಅಂಶವನ್ನು ಹೆಚ್ಚು ಫೋಕಸ್ ಮಾಡಿ ಬಿಂಬಿಸುವುದು ಟೀಕೆಗೆ ಗುರಿಯಾಗುತ್ತೆ. ಇದೆಲ್ಲ ಏನೇ ಇದ್ದರೂ ಇಂತಹ ಪ್ರತಿಭೆಗಳ ಆಯ್ಕೆ ಸಮಾಜಕ್ಕೆ ಹಾಗೂ ಇತರರಿಗೆ ಮಾದರಿಯಾಗಲಿ ಅಷ್ಟೇ.


Click it and Unblock the Notifications











