'ಮೇಘ ಸಂದೇಶ' ಧಾರಾವಾಹಿಯಲ್ಲಿ ನಾಯಕನಾಗಿ ನಟ ಅಭಿನವ್; ಹಿನ್ನೆಲೆ ಏನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ "ನನ್ನರಸಿ ರಾಧೆ" ಯೂ ಒಂದು. " ನನ್ನರಸಿ ರಾಧೆ" ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಆಗಿ ಅಭಿನಯಿಸಿದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಅಭಿನವ್ ವಿಶ್ವನಾಥನ್. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣವಕಾಶ ಪಡೆದುಕೊಂಡಿರುವ ಅಭಿನವ್ ವಿಶ್ವನಾಥನ್ ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಪ್ರದ್ಯುಮ್ನನಾಗಿ.
ಇದೀಗ "ನನ್ನರಸಿ ರಾಧೆ" ಧಾರಾವಾಹಿ ಮುಕ್ತಾಯದ ಬಳಿಕ "ತ್ರಿಪುರ ಸುಂದರಿ" ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ತ್ರಿಪುರ ಸುಂದರಿ ಧಾರಾವಾಹಿಯ ಬಳಿಕ ಮಗದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ಅಭಿನವ್. ಹೌದು, ಅಭಿನವ್ ಅವರು ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸಣ್ಣ ಬದಲಾವಣೆಯೆಂದರೆ ಅಭಿನವ್ ಅವರು ಈ ಬಾರಿ ನಟಿಸುತ್ತಿರುವುದು ಕನ್ನಡ ಧಾರಾವಾಹಿಯಲ್ಲಿ ಅಲ್ಲ. ಬದಲಿಗೆ ತೆಲುಗು ಧಾರಾವಾಹಿಯಲ್ಲಿ.

ಹೌದು, ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ "ಮೇಘಸಂದೇಶಂ" ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಅಭಿನವ್. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಅಭಿನವ್ ಅವರಿಗೆ ಜೋಡಿಯಾಗಿ ನಟಿಸುತ್ತಿರುವುದು ಕೂಡಾ ಕನ್ನಡದ ಹುಡುಗಿಯೇ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಲಕ್ಷ್ಮಿ ಬಾರಮ್ಮ" ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸುತ್ತಿರುವ ಭೂಮಿಕಾ ರಮೇಶ್ "ಮೇಘಸಂದೇಶಂ" ನಲ್ಲೂ ನಾಯಕಿಯಾಗಿ ಮೋಡಿ ಮಾಡಲಿದ್ದಾರೆ.
ಈಗಾಗಲೇ ಜೀ ತೆಲುಗು ವಾಹಿನಿಯು ಎರಡು ಪ್ರೋಮೋಗಳನ್ನು ರಿಲೀಸ್ ಮಾಡಿದ್ದು ತೆಲುಗು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ ಕನ್ನಡ ಕಿರುತೆರೆಯ ಕಲಾವಿದರನ್ನು ಪರಭಾಷೆಯ ಕಿರುತೆರೆಯಲ್ಲಿ ನೋಡಿ ಕನ್ನಡ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.
ಮಹಾನಗರಿಯ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಅಭಿನವ್ ವಿಶ್ವನಾಥನ್ ಆಯ್ದುಕೊಂಡಿದ್ದು ಮಾತ್ರ ನಟನಾ ಕ್ಷೇತ್ರವನ್ನು. ನಟನಾಗಬೇಕು ಎಂಬ ಹಂಬಲವನ್ನು ಹೊಂದಿದ್ದ ಅಭಿನವ್ ಅವರು ಅಗಸ್ತ್ಯ ರಾಥೋಡ್ ಆಗಿ ಕಿರುತೆರೆ ಪಯಣ ಆರಂಭಿಸಿದರು. ಹೌದು, "ನನ್ನರಸಿ ರಾಧೆ" ಧಾರಾವಾಹಿಯ ನಾಯಕನಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿನವ್ ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಅದೃಷ್ಟವಂತ.
ಮುಂದೆ "ತ್ರಿಪುರ ಸುಂದರಿ" ಧಾರಾವಾಹಿಯಲ್ಲಿ ನಾಯಕ ಪ್ರದ್ಯುಮ್ನನಾಗಿ ಅಭಿನಯಿಸಿದ್ದಾರೆ ಅಭಿನವ್. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಭಿನವ್ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಾತ ಹೌದು. ಹಾಗೇ ನೋಡಿದರೆ ಅಭಿನವ್ ಅವರ ಕೆರಿಯರ್ ಶುರುವಾಗಿದ್ದು ಕೂಡಾ ಮಾಡೆಲಿಂಗ್ ನಿಂದ ಎಂದು ಹೇಳಿದರೆ ತಪ್ಪಾಗಲಾರದು. ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿದ ಅಭಿನವ್ ಕೆಲವೊಂದು ಫ್ಯಾಷನ್ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಕಿರುತೆರೆಯ ನಂತರ ಹಿರಿತೆರೆಯಲ್ಲಿ ನಟಿಸುವ ಆಸೆ ಹೊಂದಿದ್ದ ಅಭಿನವ್ ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಕನ್ನಡ ಕಿರುತೆರೆ ವೀಕ್ಷಕರನ್ನು ತನ್ನ ಅಭಿನಯದ ಮೂಲಕ ರಂಜಿಸಿರುವ ಅಭಿನವ್ ಅವರು ಪರಭಾಷೆಯ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











