'ಆಚಾರ್ಯ' ಸಿನಿಮಾಕ್ಕೆ ಆಗ ಬೇಡವಾಗಿದ್ದ ಕಾಜಲ್ ಸೋತ ಬಳಿಕ ಬೇಕಾಗಿದೆ ಏಕೆ?
ಬೇಡವೆಂದು ಬಿಟ್ಟುಹೋದವರು, ನಮ್ಮ ಮೌಲ್ಯ ಅರಿತು ನಮ್ಮ ಬಳಿಯೇ ವಾಪಸ್ ಬಂದಾಗ ಆಗುವ ಖುಷಿ, ಹೆಮ್ಮೆ ಹೇಳಲಾಗದ್ದು. ಅಂಥಹುದೇ ಸನ್ನಿವೇಶ ಎದುರಿಸಿದ್ದಾರೆ ನಟಿ ಕಾಜಲ್ ಅಗರ್ವಾಲ್!
ಹೌದು, ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಹಲವು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು, ಹಲವು ಪೋಸ್ಟರ್ಗಳಲ್ಲಿ ಕಾಜಲ್ ಕಾಣಿಸಿಕೊಂಡಿದ್ದರು.
ಆದರೆ ಸಿನಿಮಾ ಬಿಡುಗಡೆ ಆದಾಗ ಅವರ ಪಾತ್ರಕ್ಕೆ ಕತ್ತರಿ ಹಾಕಲಾಗಿತ್ತು. ಕಾಜಲ್ ನಟಿಸಿದ್ದ ಒಂದು ದೃಶ್ಯವನ್ನು ಸಹ ಸಿನಿಮಾದಲ್ಲಿ ಉಳಿಸಿಕೊಂಡಿರಲಿಲ್ಲ. ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿತು. ಬಜೆಟ್ ಸರಾಸರಿಯಲ್ಲಿ ಚಿರಂಜೀವಿಯ ಈವರೆಗಿನ ದೊಡ್ಡ ಫ್ಲಾಪ್ ಸಿನಿಮಾ ಎನಿಸಿಕೊಂಡಿತು. ಸಿನಿಮಾ ಫ್ಲಾಪ್ ಆದ ಬಳಿಕ ಈಗ 'ಆಚಾರ್ಯ' ತಂಡಕ್ಕೆ ಕಾಜಲ್ ಅವಶ್ಯಕತೆ ಒದಗಿಬಂದಿದೆ! ಹೇಗೆಂದು ಮುಂದೆ ತಿಳಿಯಿರಿ.

ಸ್ಯಾಟಲೈಟ್ ಹಕ್ಕು ಮಾರಾಟ
ಟಿವಿಯಲ್ಲಿ ಪ್ರಸಾರವಾಗಲಿದೆ 'ಆಚಾರ್ಯ'
'ಆಚಾರ್ಯ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧಾರುಣ ಸೋಲು ಕಂಡಿದೆ. ಸಿನಿಮಾ ವಿತರಕರು ಭಾರಿ ನಷ್ಟವನ್ನು ಈ ಸಿನಿಮಾದಿಂದಾಗಿ ಅನುಭವಿಸಿದ್ದಾರೆ. ನಿರ್ದೇಶಕ ಕೊರಟಾಲ ಶಿವ, ನಟ ಚಿರಂಜೀವಿ ಮನೆ ಮುಂದೆ ವಿತರಕರು ಪ್ರತಿಭಟನೆಗಳನ್ನು ಸಹ ಮಾಡಿದ್ದಾರೆ. ಆಗಿರುವ ನಷ್ಟವನ್ನು ತುಸುವಾದರೂ ಸರಿ ದೂಗಿಸಿಕೊಳ್ಳಲು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕನ್ನು ಮಾರಾಟ ಮಾಡಲಾಗಿದೆ.

ಕಾಜಲ್ ಪರಿಚಿತ ನಟಿಯೆಂಬ ಕಾರಣಕ್ಕೆ ನಿರ್ಧಾರ
ಒಟಿಟಿಯಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾ ಅಷ್ಟೇನು ಉತ್ತಮ ಪ್ರದರ್ಶನ ಕಂಡಿಲ್ಲ. ಇದೀಗ ಟಿವಿಯಲ್ಲಿ ಸಿನಿಮಾ ಬಿಡುಗಡೆ ಆಗಲು ತಯಾರಾಗಿದ್ದು, ಟಿವಿಯಲ್ಲಿ ಬಿಡುಗಡೆ ಆಗುವ ಸಿನಿಮಾದಲ್ಲಿ ನಟಿ ಕಾಜೊಲ್ ನಟಿಸಿದ್ದ ದೃಶ್ಯಗಳನ್ನು ಸೇರಿಸಲು ಚಿತ್ರತಂಡ ನಿರ್ಣಯಿಸಿದೆ! ಕೌಟುಂಬಿಕ ಸಿನಿಮಾಗಳಲ್ಲಿ ನಾಯಕನ ಜೊತೆ ನಾಯಕಿ ಇರಬೇಕಾಗುತ್ತದೆ ಹಾಗೂ ಕಾಜಲ್ ತೆಲುಗು ಪ್ರೇಕ್ಷಕರ ಚಿರಪರಿಚಿತ ನಟಿ ಆಗಿರುವ ಕಾರಣಕ್ಕೆ ಈ ನಿರ್ಣಯ ತೆಗೆದುಕೊಂಡಿದೆ ಚಿತ್ರತಂಡ.

ಪ್ರತಿಕ್ರಿಯೆ ನೀಡಿರಲಿಲ್ಲ ಕಾಜಲ್
ಕಾಜಲ್, 'ಆಚಾರ್ಯ' ಸಿನಿಮಾದಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಟಿಸಿದ್ದರು. ಅದೇ ಸಿನಿಮಾದಲ್ಲಿ ನಟಿಸಿದ್ದ ರಾಮ್ ಚರಣ್ಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದರು. ಕಾಜಲ್ ಜೊತೆ ಚಿತ್ರೀಕರಣ ಮುಗಿಸಿದ ಬಳಿಕ ಸಿನಿಮಾದ ಉದ್ದ ಹೆಚ್ಚಾಯಿತೆಂದು, ಕಾಜಲ್ ಪಾತ್ರಕ್ಕೆ ಪೂರ್ಣವಾಗಿ ಕತ್ತರಿ ಹಾಕಲಾಯ್ತು. ಸಿನಿಮಾದಲ್ಲಿ ಕಾಜಲ್ ಪಾತ್ರ ಅವಶ್ಯಕತೆ ಇರಲಿಲ್ಲ, ಕೇವಲ ನಾಯಕಿ ಒಬ್ಬಾಕೆ ಇರಬೇಕೆಂದಷ್ಟೆ ಕಾಜಲ್ ಅನ್ನು ಹಾಕಿಕೊಂಡಿದ್ದೆವು, ಈಗ ಪೂಜಾ ಹೆಗ್ಡೆ ನಾಯಕಿಯಾಗಿ ಇರುವ ಕಾರಣ ಕಾಜಲ್ ಪಾತ್ರವನ್ನು ತೆಗೆದಿದ್ದೇವೆ ಎಂದಿದ್ದರು ನಿರ್ದೇಶಕರು. ಕಾಜಲ್ಗೆ ಮಾಹಿತಿ ನೀಡಿಯೇ ಪಾತ್ರ ತೆಗೆದಿದ್ದೇವೆ ಎಂದಿದ್ದರು ಕೊರಟಾಲ ಶಿವ. ಆದರೆ ಈ ಬಗ್ಗೆ ಕಾಜಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಏಪ್ರಿಲ್ 29 ರಂದು ಬಿಡುಗಡೆ ಆಗಿದ್ದ ಸಿನಿಮಾ
ಚಿರಂಜೀವಿ, ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿದ್ದ 'ಆಚಾರ್ಯ' ಸಿನಿಮಾ ಏಪ್ರಿಲ್ 29 ರಂದು ಬಿಡುಗಡೆ ಆಗಿತ್ತು. ಊರೊಂದನ್ನು ರಕ್ಷಿಸಲು ಬರುವ ವ್ಯಕ್ತಿಯ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧಾರುಣ್ ಸೋಲು ಕಂಡಿತು. ವಿತರಕರ ಸರಣಿ ಮನವಿ, ಪ್ರತಿಭಟನೆಗಳ ಬಳಿಕ ಚಿರಂಜೀವಿ ಅವರು ಹಣ ಹಿಂತಿರುಗಿಸಿದರು. ಈ ಸಿನಿಮಾಕ್ಕೆ ರಾಮ್ ಚರಣ್ ತೇಜ ನಿರ್ಮಾಪಕರಾಗಿದ್ದರು. ಸಿನಿಮಾದಲ್ಲಿ ಪೂಜಾ ಹೆಗ್ಡೆ, ಸೋನು ಸೂದ್, ಕನ್ನಡದ ಕಿಶೋರ್, 'ಭಜರಂಗಿ' ಖ್ಯಾತಿಯ ಸೌರವ್ ಲೋಕೇಶ್, ನಾಸರ್, ಅಜಯ್, ತನಿಕೇಳ ಭರಣಿ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











