ಪೌರಾಣಿಕ ಪಾತ್ರಗಳಲ್ಲಿ ಮಿಂಚುತ್ತಿರುವ ಅಮಿತ್ ಕಶ್ಯಪ್ ಮಹಾವಿಷ್ಣು ಪಾತ್ರದ ಮೂಲಕ ರೀ ಎಂಟ್ರಿ
ಸಾಮಾನ್ಯವಾಗಿ ಧಾರಾವಾಹಿಗಳು ಆರಂಭವಾಗುವಾಗ ಪ್ರೇಕ್ಷಕರಲ್ಲಿ ಸಹಜವಾಗಿ ಒಂದಷ್ಟು ಕುತೂಹಲವಿರುತ್ತದೆ. ಆದರೆ ಈ ಧಾರಾವಾಹಿ ಆರಂಭವಾಗುತ್ತಿದೆ ಎಂಬ ಪ್ರೋಮೋ ನೋಡಿದಾಗಿಂದ ಪ್ರೇಕ್ಷಕರು ಆದಷ್ಟು ಬೇಗ ಈ ಧಾರಾವಾಹಿಯನ್ನು ಪ್ರಸಾರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಹುಚ್ಚ ಹೊಸ ಧಾರಾವಾಹಿಗೆ ಈಗಾಗಲೇ ಬಹಳ ಡಿಮಾಂಡ್ ಬಂದಿದೆ.
ಅತಿ ಶೀಘ್ರದಲ್ಲೇ ಆರಂಭವಾಗುತ್ತಿರುವ ಈ ಧಾರಾವಾಹಿ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, "ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರುಸಾರ್ವಭೌಮ" ಎಂದು ಆರಂಭವಾಗುವ ಈ ಪ್ರೋಮೋಗೆ ಜನ ಮೆಚ್ಚುಗೆ ಸಿಕ್ಕಿದೆ.

ಇಡೀ ರಾಜ್ಯವೇ ಖುಷಿಪಡುವ ಸುದ್ದಿ, ಮೈ ಜುಮ್ ಎನಿಸುವ ಪ್ರೋಮೋ, ನಾವು ಕಾಯುತ್ತಾ ಇದ್ದೇವೆ ರಾಯರನ್ನು ಬರಮಾಡಿಕೊಳ್ಳಲಿಕ್ಕೆ ಎಂಬಿತ್ಯಾದಿ ಕಾಮೆಂಟ್ಗಳ ಸುರಿಮಳೆಗೆ ಸುರಿದಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಮಹಾವಿಷ್ಣುವಿನ ಅವತಾರದಲ್ಲಿ ನಟ ಅಮಿತ್ ಕಶ್ಯಪ್ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ಕೃಷ್ಣ ಅಲಿಯಾಸ್ ಕ್ರಿಶ್ ಪಾತ್ರದಲ್ಲಿ ಮಿಂಚಿದ್ದ ಈ ನಟ ತಮ್ಮ ನಟನೆಯಿಂದಲೇ ಕಿರುತೆರೆ ಪ್ರೇಕ್ಷಕರ ಮನಕದ್ದಿದ್ದಾರೆ. ಇದೀಗ 'ಶ್ರೀ ಗುರು ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ವಿಷ್ಣುವಿನ ಪಾತ್ರದಲ್ಲೂ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ನಟ ಅಮಿತ್ ಕಶ್ಯಪ್ ಬಗ್ಗೆ ಹೇಳುವುದಾದರೆ ಇಂಜಿನಿಯರಿಂಗ್ ಪದವೀಧರರಾದ ಇವರು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಅದೇ ಸಂದರ್ಭದಲ್ಲಿ ನಟನೆ ಮಾಡಬೇಕೆಂಬ ಬಾಲ್ಯದ ಕನಸು ಚಿಗುರುಗೊಂಡಿತು. ಆ ಸಲುವಾಗಿಯೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಇದೀಗ ನಟನೆಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ.
ಮೊದಲಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರವಾಹಿಯಾದ 'ಶ್ರೀ ವಿಷ್ಣು ದಶಾವತಾರ' ಧಾರಾವಾಹಿಯಲ್ಲಿ, ಸಾಕ್ಷಾತ್ ಶ್ರೀ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಂಡು ವೀಕ್ಷಕರ ಕಣ್ಮನ ಸೆಳೆದರು ಈ ನಟ. ತಮಗೆ ಸಿಕ್ಕ ಮೊದಲ ಅವಕಾಶದಲ್ಲೇ ಪೌರಾಣಿಕ ಪಾತ್ರಕ್ಕೆ ಜೀವ ತುಂಬಿದ್ದು ವಿಶೇಷ. ಅದರಲ್ಲೂ ಶ್ರೀ ವಿಷ್ಣುವಿನ ಪಾತ್ರಕ್ಕೆ ಅದ್ಭುತವಾಗಿಯೇ ಜೀವ ತುಂಬಿದ್ದರು.
ತಮ್ಮ ಮೊದಲ ಧಾರವಾಹಿಯ ನಟನೆಯಲ್ಲಿ ಜೀ ಕುಟುಂಬ ಅವಾರ್ಡ್ ಫಂಕ್ಷನ್ ನಲ್ಲಿ ಬೆಸ್ಟ್ ಪ್ರಾಮಿಸಿಂಗ್ ಫೇಸ್ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅದಾದ ಮೇಲೆ 'ರಾಧಾಕೃಷ್ಣ' ಧಾರಾವಾಹಿಯಲ್ಲಿ ಮಾಡನ್ ಹುಡುಗ ಕ್ರಿಶ್ ಪಾತ್ರದಲ್ಲಿ ನಟಿಸಿ ಮತ್ತೊಂದು ಪ್ರೇಕ್ಷಕರನ್ನು ತನ್ನೊಳಗೆ ಸೆಳೆದರು. ಇದೀಗ ಮತ್ತೆ "ಶ್ರೀ ರಾಘವೇಂದ್ರ ಮಹಾತ್ಮೆ" ಧಾರಾವಾಹಿಯಲ್ಲಿ ಶ್ರೀ ವಿಷ್ಣುವಾಗಿಯೇ ನಟಿಸುತ್ತಿದ್ದಾರೆ.
ಈ ನಟನ ನಟನೆಯನ್ನು ಈಗಾಗಲೇ ಮೆಚ್ಚಿರುವ ಕನ್ನಡ ಕಿರುತೆರೆ ಪ್ರೇಕ್ಷಕರು ಈ ಹೊಚ್ಚ ಹೊಸ ಧಾರಾವಾಹಿಗೆ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ವಿಶೇಷವೆಂದರೆ ದಶಕದ ಹಿಂದೆ ಪ್ರಸಾರವಾಗುತ್ತಿದ್ದ 'ಶ್ರೀ ರಾಘವೇಂದ್ರ ವೈಭವ' ಧಾರಾವಾಹಿಯಲ್ಲಿ ಶ್ರೀ ಗುರು ರಾಘವೇಂದ್ರ ಪಾತ್ರವನ್ನೇ ಅದ್ಭುತವಾಗಿ ನಿಭಾಯಿಸಿದ್ದ ನಟ ಪರೀಕ್ಷಿತ್, ಇದೀಗ ಮತ್ತೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯ ಪ್ರೊಮೋದಲ್ಲಿ ವ್ಯಾಸ ಮಹರ್ಷಿಗಳಾಗಿ ಕಾಣಿಸಿಕೊಂಡಿದ್ದಾರೆ. ವರ್ಷಗಳ ನಂತರ ಮತ್ತೆ ನಟ ಪರೀಕ್ಷಿತ್ ಅವರನ್ನು ಕಿರುತೆರೆ ಮೇಲೆ ನೋಡಿದ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.
ಪ್ರೊಮೋ ಬಿಡುಗಡೆ ಆಗಿ ಇನ್ನು ಶೀಘ್ರದಲ್ಲೇ ಆರಂಭಗೊಳ್ಳುವ ಈ ಧಾರಾವಾಹಿಗೆ ಈಗಾಗಲೇ ಬಹಳಷ್ಟು ಡಿಮಾಂಡ್ ಸೃಷ್ಟಿಗೊಂಡಿದ್ದು, ಇದು ಯಾವ ರೀತಿ ಕಿರುತೆರೆ ಪ್ರೇಕ್ಷಕರ ಮನಸೆಳೆಯುತ್ತದೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











