'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಎನ್ನುತ ಥಿಯೇಟರ್ಗೆ ಲಗ್ಗೆ ಇಟ್ಟ ನಟ ದಿಲೀಪ್ ರಾಜ್
ದಿಲೀಪ್ ರಾಜ್.. ಕಿರುತೆರೆ ವೀಕ್ಷಕರಿಗಂತೂ ಇದು ತೀರಾ ಪರಿಚಿತ ಹೆಸರು ಮಾತ್ರವಲ್ಲ ಸಿನಿಮಾ ಮಂದಿಗೂ ಪರಿಚಯ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕ ಎಜೆ ಆಲಿಯಾಸ್ ಅಭಿರಾಮ್ ಜಯಶಂಕರ್ ಆಗಿ ಅಭಿನಯಿಸಿ ಸೀರಿಯಲ್ ವೀಕ್ಷಕರ ಮನ ಸೆಳೆದಿದ್ದ ದಿಲೀಪ್ ರಾಜ್ ಇದೀಗ ಮಗದೊಮ್ಮೆ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ತಯಾರಾಗಿದ್ದಾರೆ.
ಹೌದು, ಇದೇ ಜನವರಿ 10 ರಂದು ಬಿಡುಗಡೆಯಾಗಲಿರುವ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದಿಲೀಪ್ ರಾಜ್. ಆ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ಇವರು ರಂಜಿಸಿಲಿದ್ದಾರೆ. ಕಳೆದ ವರ್ಷ ತೆರೆಕಂಡಿರುವ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾದಲ್ಲಿಯೂ ಮುಖ್ಯ ಭೂಮಿಕೆಯಲ್ಲಿ ದಿಲೀಪ್ ರಾಜ್ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ಅದು ಸಿನಿ ಪ್ರಿಯರ ಮೆಚ್ಚುಗೆಗೂ ಕೂಡಾ ಪಾತ್ರವಾಗಿತ್ತು.

ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟ ದಿಲೀಪ್ ರಾಜ್ ಅವರು ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಿರುವವರು ಎಂದರೆ ತಪ್ಪಾಗಲಾರದು. 'ಜನನಿ', 'ಅರ್ಧ ಸತ್ಯ', 'ರಂಗೋಲಿ', 'ಕುಂಕುಮ ಭಾಗ್ಯ', 'ಮಾಂಗಲ್ಯ', 'ಮಳೆಬಿಲ್ಲು', 'ಪ್ರೀತಿಗಾಗಿ', 'ರಥಸಪ್ತಮಿ', 'ಪುರುಷೋತ್ತಮ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ದಿಲೀಪ್ ರಾಜ್ ಮೊದಲ ಬಾರಿ ನಟಿಸಿದ್ದು 'ಬಾಯ್ ಫ್ರೆಂಡ್' ಸಿನಿಮಾದಲ್ಲಿ.
ಮುಂದೆ 'ನನ್ನ ಲವ್ ಮಾಡ್ತೀಯಾ', '7'O ಕ್ಲಾಕ್', 'ಮಿಲನ', 'ನೀನೆ ನೀನೆ', 'ಲವ್ ಗುರು', 'ಗಾನಾ ಬಜಾನಾ', 'ಸುಗ್ರೀವ', 'ಪಂಚಾಮೃತ', 'ಬರ್ಫಿ', 'ಮಹಾನದಿ', 'ಟೋನಿ', 'ಕ್ರೇಜಿ ಸ್ಟಾರ್', 'ಯೂ ಟರ್ನ್', 'ಅಂಬಿ ನಿಂಗ್ ವಯಸ್ಸಾಯ್ತೋ', 'ಕಿಸ್ಮತ್' ಹೀಗೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು ದಿಲೀಪ್ ರಾಜ್. 2018 ರಲ್ಲಿ ಬಿಡುಗಡೆಯಾದ 'ಲೂಟಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ದಿಲೀಪ್ ರಾಜ್ ಮುಂದೆ ಐದು ವರ್ಷಗಳ ಕಾಲ ಯಾವ ಸಿನಿಮಾದಲ್ಲಿಯೂ ನಟಿಸಿರಲಿಲ್ಲ.
ನಟನೆಯ ಹೊರತಾಗಿ ಕಂಠದಾನ ಕಲಾವಿದೆಯಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. 'ಆ ದಿನಗಳು' ಸಿನಿಮಾದಲ್ಲಿ ಚೇತನ್ಗೆ ಧ್ವನಿ ನೀಡಿರುವ ಇವರು 'ಅಂತು ಇಂತು ಪ್ರೀತಿ ಬಂತು' ಸಿನಿಮಾದಲ್ಲಿ ಆದಿತ್ಯ ಬಾಬು ಅವರಿಗೆ, 'ಶಿವಲಿಂಗ' ಸಿನಿಮಾದಲ್ಲಿ ಶಕ್ತಿ ವಾಸುದೇವನ್ ಅವರಿಗೆ ದನಿ ನೀಡಿದ್ದಾರೆ.

ನಿರ್ದೇಶನದ ಜೊತೆಗೆ ದಿಲೀಪ್ ರಾಜ್ ಅವರು ನಿರ್ಮಾಪಕರಾಗಿಯೂ ಸೈ ಎನಿಸಿಕೊಂಡವರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಿದ್ಯಾ ವಿನಾಯಕ', 'ಪಾರು' ಹಾಗೂ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ನಿರ್ದೇಶನವನ್ನಲ್ಲದೇ, ನಿರ್ಮಾಪಕರಾಗಿಯೂ ದಿಲೀಪ್ ರಾಜ್ ಅವರು ಕಾಣಿಸಿಕೊಂಡಿದ್ದರು.


Click it and Unblock the Notifications











