"ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವುದು ಕಲಾವಿದನ ಕೆಲಸ"; ಗಟ್ಟಿಮೇಳ ನಟ ಅಭಿಷೇಕ್ ದಾಸ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಗಟ್ಟಿಮೇಳ'ವೂ ಒಂದು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ನಟಿಸಿ ಅಭಿಷೇಕ್ ದಾಸ್ ಸೈ ಎನಿಸಿಕೊಂಡಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಟ ಆಗಿ ಅಭಿನಯಿಸುತ್ತಿದ್ದ ಅಭಿಷೇಕ್ ದಾಸ್ ಆ ಪಾತ್ರದ ಮೂಲಕ ಗಮನಸೆಳೆದ ಹ್ಯಾಂಡ್ ಸಮ್ ಹುಡುಗ.
ಅಭಿಷೇಕ್ ದಾಸ್ ಈಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅವರ ನಟನೆಯ 'ನಗುವ ಹೂಗಳ ಮೇಲೆ' ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿದೆ. ಈ ಸಿನಿಮಾ ಪ್ರೀತಿಯ ಕಥೆ ಅಷ್ಟೇ ಅಲ್ಲದೆ ಲೈಫ್ ಹಾಗೂ ಫ್ಯಾಮಿಲಿ ಬಗ್ಗೆ ಹಲವಾರು ವಿಚಾರಗಳನ್ನು ಹೇಳಲಿದೆ ಎಂಬುದು ಅಭಿಷೇಕ್ ಅವರ ಅಭಿಪ್ರಾಯ.

ಲಾಂಗ್ ಡಿಸ್ಟೆನ್ಸ್ ಬರೀ ಪ್ರೇಮಿಗಳಿಗಷ್ಟೇ ಅಲ್ಲದೆ ಅವರ ಸಂಬಂಧಿಕರಿಗೆ ಹಾಗೂ ಕುಟುಂಬಸ್ಥರಿಗೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈ ಸಿನಿಮಾ ತೋರಿಸಲಿದೆ ನಟ ಅಭಿಷೇಕ್ ದಾಸ್ ಎಂದು ಹೇಳುತ್ತಾರೆ. ನಗುವ ಹೂಗಳ ಮೇಲೆ ಸಿನಿಮಾ ಲವ್ ಸ್ಟೋರಿ ಹೊಂದಿದ್ದರೂ ಬೇರೆ ಎಲ್ಲಾ ಕಥೆಗಳಿಗಿಂತಲೂ ವಿಭಿನ್ನವಾದ ಸಿನಿಮಾ ಇದಾಗಿರುವುದರಿಂದ ಈ ಬಗ್ಗೆ ಅಭಿಷೇಕ್ ಅವರಿಗೆ ಸಂಭ್ರಮವಿದೆಯಂತೆ.
'ನಗುವ ಹೂಗಳ ಮೇಲೆ' ಸಿನಿಮಾದಲ್ಲಿ ಸಿವಿಲ್ ಇಂಜಿನಿಯರ್ ಹುಡುಗನಾಗಿ ನಟ ಅಭಿಷೇಕ್ ದಾಸ್ ಕಾಣಿಸಿಕೊಂಡಿದ್ದಾರೆ. ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಅಭಿಷೇಕ್ ದಾಸ್ "ಇದು ಸಾಧು ಸ್ವಭಾವದ ಹುಡುಗನ ಪ್ರೇಮಿಯ ಕಥೆ. ಅದಕ್ಕಿಂತಲೂ ಮುಖ್ಯವಾಗಿ ತುಂಬಾ ತಾಳ್ಮೆಯ ಪ್ರೇಮಿ. ಇದೆಲ್ಲವೂ ನನ್ನ ನಿಜ ಜೀವನಕ್ಕೆ ಬಹಳ ವಿರುದ್ಧವಾಗಿರುವಂಥದ್ದು. ನಿಜ ಜೀವನದಲ್ಲಿ ನಾನು ಇಂಜಿನಿಯರ್ ಆದರೂ ಕೆಲಸ ಬಿಟ್ಟು ನಟನೆ ಕಡೆಗೆ ಫೋಕಸ್ ಮಾಡಲು ಹೊರಟಿದ್ದೇನೆ ಹಾಗೂ ನನಗೆ ತಾಳ್ಮೆ ಅಷ್ಟಕ್ಕಷ್ಟೇ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದರು ಅಭಿಷೇಕ್ ದಾಸ್.
ಒಬ್ಬ ಕಲಾವಿದನಾಗಿ ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಲು ಅದಕ್ಕೆ ಜೀವ ತುಂಬಲು ನಾನು ಪ್ರಯತ್ನಿಸುತ್ತಾರೆ ನಟ ಅಭಿಷೇಕ್. ಅಂದ ಹಾಗೇ ಅಭಿಷೇಕ್ ಅವರಿಗೆ ಯಾವಾಗಲೂ ನಾಯಕನ ಪಾತ್ರವೇ ಬೇಕೆಂಬ ಷರತ್ತುಗಳಿಲ್ಲ. ಅದರ ಬದಲಿಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಕೊಡುವುದು ಒಬ್ಬ ಕಲಾವಿದನ ಧರ್ಮ ಎಂಬುದು ಅವರ ನಂಬಿಕೆ.

ಧಾರಾವಾಹಿಗಳಲ್ಲಿ ನಟಿಸುವಾಗ ನಮ್ಮ ಪಾತ್ರಗಳಿಗೆ ಒಂದಷ್ಟು ಲಿಮಿಟೇಶನ್ಗಳಿರುತ್ತವೆ. ಆದರೆ, ಸಿನಿಮಾ ಹಾಗೂ ವೆಬ್ ಸೀರೀಸ್ನಲ್ಲಿ ಹಾಗಲ್ಲ, ಎಂತಹದ್ದೇ ಪಾತ್ರವಾದರೂ ಅದಕ್ಕೆ ಅದರದ್ದೇ ಆದ ವಿಶಾಲ ದೃಷ್ಟಿಕೋನವಿರುತ್ತದೆ. ಈ ದೃಷ್ಟಿಕೋನದಲ್ಲಿ ಪಾತ್ರವನ್ನು ಕಟ್ಟುವ ಸ್ವಾತಂತ್ರ್ಯವೂ ಇದೆ. ಹಾಗಾಗಿ ಸಿನಿಮಾ ಹಾಗೂ ವೆಬ್ ಸೀರೀಸ್ಗಳಿಂದ ಅವಕಾಶ ಬಂದರೆ ನನಗಂತೂ ಬಹಳ ಖುಷಿ ಇದೆ. ವೈವಿಧ್ಯಮಯ ಪಾತ್ರಗಳನ್ನು ಮಾಡುವ ಆಶಯದಲ್ಲಿ ನಾನಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವಾಗ ನಟ ಅಭಿಷೇಕ್ ದಾಸ್ ಹೇಳಿಕೊಂಡಿದ್ದಾರೆ.
'ಸರಯೂ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ದಾಸ್ ಮುಂದೆ 'ಗಟ್ಟಿಮೇಳ'ದ ವಿಕ್ರಾಂತ್ ಆಗಿ ಮೋಡಿ ಮಾಡಿದರು. 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಗೆ ಕಾಲಿಟ್ಟ ಇವರು ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. '14 Feb', 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ಅಭಿಷೇಕ್ ದಾಸ್ 'ಬೆಂಗಳೂರು ಬಾಯ್ಸ್'ನಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದೀಗ 'ನಗುವ ಹೂಗಳ ಮೇಲೆ' ಸಿನಿಮಾದಲ್ಲಿ ನಟಿಸಲಿರುವ ಅಭಿಷೇಕ್ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











