ಬಿಬಿಕೆ2: ಲಯ ಔಟ್, ಮಠ ಗುರುಪ್ರಸಾದ್ ಇನ್
ನಟ, ಸಂಗೀತಗಾರ ಲಯೇಂದ್ರ ಅವರು ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಕಿಚ್ಚಿನ ಕಥೆ ಕಿಚ್ಚನ ಜತೆ ಎಪಿಸೋಡು ಮುಗಿಯುವ ಹೊತ್ತಿಗೆ ಲಯ ಕೋಕಿಲಾ ಅವರ ನಿರ್ಗಮನ ಸುದ್ದಿ ಹೊರ ಬಿದ್ದಿದೆ. ಸ್ಪರ್ಧಿಗಳು ಹೆಚ್ಚು ಎಮೋಷನಲ್ ಆಗದೆ ಲಯ ಅವರನ್ನು ಮನೆಯಿಂದ ಹೊರ ಕಳಿಸಿಕೊಂಡಿದ್ದಾರೆ.
ಲಯ ಅವರು ಬಿಗ್ ಬಾಸ್ ಮನೆಯಲ್ಲಿ ಯಾವುದೆ ಹೊಸ ಟ್ಯೂನ್ ಹಾಕದೆ, ತಮ್ಮ ಮನೆ, ಮೀನು, ಕಷ್ಟಪಟ್ಟ ಆ ದಿನಗಳ ಬಗ್ಗೆ ಮಾತಾಡಿದ್ದು, ಇತರೆ ಸ್ಪರ್ಧಿಗಳ ಮುಂದೆ ಜೋಕರ್ ಆಗಿದ್ದು ಬಿಟ್ಟರೆ ಮತ್ತೇನು ಸ್ವಾರಸ್ಯಕರ ಮಸಾಲೆ ಬೆರೆಸಲು ಆಗದಿದ್ದದ್ದು ಅವರ ನಿರ್ಗಮನಕ್ಕೆ ನಾಂದಿ ಹಾಡಿತು ಎನ್ನಬಹುದು.
ಸಾಧು ಕೋಕಿಲಾ ಅವರ ಬಿಗ್ ಬ್ರದರ್ ಅವರು ನಾಲ್ಕು ವಾರ ಮನೆಯಲ್ಲಿ ಇದ್ದದ್ದೇ ದೊಡ್ಡ ಸಾಧನೆ ಎನ್ನಬಹುದು. ಮನೆಯಲ್ಲಿ ಇದ್ದಷ್ಟು ಕಾಲ 'ಸಾಧು' ವಾಗಿದ್ದ ಲಯ ಅವರು ಈಗ ಅನಿತಾ ಭಟ್, ಹರ್ಷಿಕಾ, ಶಕೀಲಾ ಅವರ ಸಾಲಿಗೆ ಸೇರಿಕೊಂಡಿದ್ದಾರೆ.[ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸ ಮಾಡಿದ್ದೇನೆ]
11 ಸ್ಪರ್ಧಿಗಳ ಪೈಕಿ ಲಯ ಅವರಲ್ಲದೆ ನೀತೂ, ಆದಿ ಲೋಕೇಶ್, ರೋಹಿತ್, ಸಂತೋಷ್ ಕೂಡಾ ನಾಮಿನೇಟ್ ಆಗಿದ್ದರು. ಲಯ ಅವರ ನಿರ್ಗಮನದಿಂದ ತೆರವಾಗಿರುವ ಸ್ಥಾನಕ್ಕೆ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.. ಇನ್ನಷ್ಟು ವಿವರ ಮುಂದೆ ಓದಿ...

ಸಾಧು ಪ್ರಾಣಿಯಾಗಿದ್ದ ಲಯಣ್ಣ
ಮನೆಗೆ ಅಡಿಯಿಟ್ಟ ಆರಂಭದಲ್ಲಿ ಸ್ವಲ್ಪ ಡಲ್ ಆಗಿದ್ದ ಲಯ ಅವರು ತಮ್ಮ ಲಯ ಕಳೆದುಕೊಳ್ಳದೆ ಎಲ್ಲರಿಗೂ ಬೇಕಾದವರಾಗಿದ್ದರು. ಅದರೆ, ಆಗಾಗ ಆ ಗುಂಪು ಈ ಗುಂಪು ಎಂದು ಸೇರಿ ಪಂಚಾಯಿತಿ ಮಾಡುತ್ತಿದ್ದರೂ ಬೇರೆ ಸ್ಪರ್ಧಿಗಳಿಗೆ ಎಂದಿಗೂ ಡೇಂಜರ್ ಎನಿಸಿರಲಿಲ್ಲ. ಪ್ರೇಕ್ಷಕರಿಗೆ ಇವರ ಆಟೋಟ, ಸಾಧುತನವೇ ಬೋರ್ ಎನಿಸಿ ಅವರನ್ನು ಉಳಿಸದೆ ಮನೆಯಿಂದ ಹೊರಕ್ಕೆ ಕರೆಸಿಕೊಂಡಿದ್ದಾರೆ. ಒಟ್ಟಾರೆ ಗಲಾಟೆ, ಗದ್ದಲ ಮಾಡಿದವರಿಗೆ ಮಾತ್ರ ನೆಲೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಕಷ್ಟದ ದಿನಗಳು, ಶಂಕರ್ ನೆನಪಿಸಿಕೊಂಡಿದ್ದ ಲಯ
ಆಗ ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸಗಳನ್ನು ಮಾಡಿದ್ದೇನೆ. ಆಗ ಒಂದು ಆರ್ಕೆಸ್ಟ್ರಾದಲ್ಲಿ ಚಾನ್ಸ್ ಸಿಕ್ತು. ಸಿ ಅಶ್ವತ್ಥ್ ಹಾಗೂ ಮೈಸೂರು ಅನಂತಸ್ವಾಮಿ ಅವರ ಜೊತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಶಂಕರ್ ನಾಗ್ ಸಾರ್ ಅವರು ನಮ್ಮಂತಹವರಿಗೆಂದೇ ಸಂಕೇತ್ ಸ್ಟುಡಿಯೋ ಕಟ್ಟಿದರು.
ಆಗ 'ಮಾಲ್ಗುಡಿ ಡೇಸ್'ನಲ್ಲಿ ಕೆಲಸ ಮಾಡಿದೆ. ಮೊದಲು ನಾನು ರೀರೆಕಾರ್ಡಿಂಗ್ ಮಾಡಿದ್ದು ಶಂಕರ್ ನಾಗ್ ಅವರ 'ಒಂದು ಮುತ್ತಿನ ಕಥೆ' ಚಿತ್ರಕ್ಕೆ. ಆಗ ನಮಗೆಲ್ಲಾ ತುಂಬಾ ಬೆಂಬಲ ನೀಡಿದ್ದು ಹಂಸಲೇಖ ಅವರು. ನೂರ ಎಂಬತ್ತೈದು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನನ್ನ ಇಡೀ ಕಥೆ ಹೇಳಲು ಮೂರು ದಿನ ಬೇಕು. ಮುಂದೆ ಹೇಳುತ್ತೇನೆ ಎಂದಿದ್ದರು.

ಮಠ ಗುರುಪ್ರಸಾದ್ ವೈಲ್ಡ್ ಕಾರ್ಡ್ ಎಂಟ್ರಿ
ಬಿಗ್ ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆಯಲಿದ್ದಾರೆ ಎಂಬ ಗುಟ್ಟನ್ನು ನಿರೂಪಕ ಸುದೀಪ್ ಅವರೇ ಹೇಳಿದ್ದರು. ಅದರಂತೆ ಮೊದಲ ಪ್ರವೇಶ ಮಠ ಖ್ಯಾತಿ ನಿರ್ದೇಶಕ ಗುರುಪ್ರಸಾದ್ ಅವರ ಮೂಲಕ ಆಗುತ್ತಿದೆ ಎನ್ನುತ್ತಿದೆ ಮೂಲಗಳು.
ಭಾನುವಾರ ರಾತ್ರಿ ಮನೆಯಲ್ಲಿ ಉಳಿದಿರುವ 10 ಜನ ಸ್ಪರ್ಧಿಗಳನ್ನು ಗುರು ಸೇರಲಿದ್ದಾರೆ. ನಾಲ್ಕು ವಾರದ ನಂತರ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗುರು ಮನೆಯಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಎಷ್ಟು ದಿನ ಇರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮಯೂರ್ ಪಟೇಲ್ ಜಸ್ಟ್ ಮಿಸ್
ಮನೆಯಿಂದ ಹೊರ ಬೀಳುವ ಎಲ್ಲಾ ಸಾಧ್ಯತೆಯಿಂದ ನಟ ಮಯೂರ್ ಪಟೇಲ್ ಅವರು ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ ಎಂಬ ಸುದ್ದಿ ಬಂದಿದೆ. ಆದಿ ಜತೆ ಹುಸಿ ಮುನಿಸು ಕಿತ್ತಾಟ ಅವರನ್ನು ಉಳಿಸಿದೆ. ಆದಿ ಸುತ್ತಾ ಮುತ್ತಾ ಸುತ್ತುವ ನೀತೂ ಹಾಗೂ ಮಯೂರ್ ಗೆ ಆದಿ ಜತೆ ಇನ್ನಷ್ಟು ಕಾಲ ಸರಸ ವಿರಸ ನಡೆಸುವ ಸಮಯ ಸಿಕ್ಕಿದೆ. ಆದರೆ, ಹೆಚ್ಚಿನ ಕಾಲ ಉಳಿಯುವ ಲಕ್ಷಣಗಳಿಲ್ಲ.

ದಾಖಲೆ ಬರೆದ ಆರ್ ಜೆ ರೋಹಿತ್
ವೀ ಚಾಟ್ ಅರ್ಪಿಸುವ ಸಾರ್ವಜನಿಕರೊಡನೆ ಮಾತುಕತೆ ಸೌಲಭ್ಯ ಮೂಲಕ ಅಭಿಮಾನಿ ಜತೆ ಮಾತನಾಡಿದ ರೋಹಿತ್ ಅವರು ತಮ್ಮ ನೈಜ, ನೇರ ಮಾತುಕತೆಯಿಂದ ನಿಧಾನವಾಗಿ ಎಲ್ಲಾ ವರ್ಗದ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಪ್ರತಿ ಬಾರಿ ಮನೆಯವರಿಂದ ನಾಮಿನೇಟ್ ಆಗಿ(ನಾಲ್ಕು ಬಾರಿ) ಗೆದ್ದಿರುವ ರೋಹಿತ್ ಗೆ ಈಗ ಇನ್ನೂ ಹಲವು ವಾರಗಳ ಕಾಲ ಉಳಿಯುವ ಛಾತಿಯಿದೆ ಎಂಬುದು ಎಲ್ಲರ ಅನಿಸಿಕೆ.


Click it and Unblock the Notifications











