ಕನ್ನಡ ಚಿತ್ರರಂಗದಲ್ಲಿ ಈ ವಿಲನ್ ಅಬ್ಬರ ಬಲು ಜೋರು; ನಟ ರಾಜ್ ದೀಪಕ್ ಶೆಟ್ಟಿ ಫುಲ್ ಬ್ಯುಸಿ
ನಟನಾ ಕ್ಷೇತ್ರಕ್ಕೆ ಕಾಲಿಟ್ಟಾಗ ಪ್ರತಿಯೊಬ್ಬರಿಗೂ ತಾವು ನಾಯಕ ನಾಯಕಿಯಾಗಿ ಪರದೆಯ ಮೇಲೆ ಮಿಂಚಬೇಕೆಂಬ ಆಸೆ ಇರುವುದು ಸರ್ವೇ ಸಾಮಾನ್ಯ. ಆದರೆ ಎಷ್ಟೋ ಜನರು ವಿಲನ್ ಆಗಿ ಬಹಳಷ್ಟು ಪಾಪ್ಯುಲಾರಿಟಿ ಪಡೆದಿರುವ ಉದಾಹರಣೆಗಳು ನಮ್ಮ ಮುಂದಿವೆ. ಅಂತೆಯೇ ನಟ ರಾಜ್ ದೀಪಕ್ ಶೆಟ್ಟಿ ಅವರು ಕೂಡ ಒಳ್ಳೆಯ ನಾಯಕ ನಟನಾಗಿ ಮಿಂಚಬೇಕೆಂಬ ಆಸೆ ಹೊತ್ತು ಬಣ್ಣದ ಲೋಕಕ್ಕೆ ಬಂದವರು. ಆದರೆ ಇದೀಗ ಖಳನಾಯಕನಾಗಿ ಬಹಳಷ್ಟು ಫೇಮ್ ಪಡೆದಿದ್ದಾರೆ.
ಅವರ ಲುಕ್ , ಫಿಸಿಕಲ್ ಪರ್ಸನಾಲಿಟಿ ಅವರನ್ನು ಈ ರೀತಿ ಖಳನಾಯಕನ ಪಾತ್ರಗಳಿಗೆ ಸರಿಯಾಗುವಂತೆ ಮಾಡಿದೆ. ಈ ಬಗ್ಗೆ ಸಂತೃಪ್ತಿಯನ್ನೇ ವ್ಯಕ್ತಪಡಿಸಿರುವ ನಟ ರಾಜ್ ದೀಪಕ್ ಶೆಟ್ಟಿ ಅವರು ನನಗೆ ಆ ಹಿರಿಯ ನಟರಾದ ಇರ್ಫಾನ್ ಖಾನ್, ನವಾಜ್ ಉದ್ದಿನ್ ಸಿದ್ದಿಕಿ ಅವರಂತೆ ಅದ್ಭುತ ಖಳನಾಯಕನಾಗಿ ಕಾಣಿಸಿಕೊಳ್ಳುವ ಗುರಿಯಿದೆ. ಹೀರೋ ಆಗಬೇಕೆಂಬ ಆಸೆ ಆರಂಭದಲ್ಲಿ ಇತ್ತು. ಆದರೆ ಈಗ ಖಳನಾಯಕನಾಗಿಯೇ ಮಿಂಚಲು ಸಾಧ್ಯ ಎಂಬ ಅರಿವಾಗಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಟಾಲಿವುಡ್ ಸಿನಿಮಾಗಳಿಗೂ ಸೈ ಎಂದಿರುವ ನಟ ರಾಜ ದೀಪಕ್ ಶೆಟ್ಟಿ ಅವರು ಇತ್ತೀಚೆಗಷ್ಟೇ ತೆರೆ ಕಂಡಿರುವ 'ಹನುಮಾನ್' ಸಿನಿಮಾದಲ್ಲಿ 'ಪೈಲ್ವಾನ್' ಪಾತ್ರದ ಮೂಲಕ ಮೋಡಿ ಮಾಡಿದ್ದರು. ಇದರ ಜೊತೆಗೆ ಕನ್ನಡ ಹಾಗೂ ತೆಲುಗು ನಡುವಿನ ವ್ಯತ್ಯಾಸದ ಬಗ್ಗೆಯೂ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಾಂತ್ರಿಕವಾಗಿ ಬಹಳಷ್ಟು ವ್ಯತ್ಯಾಸವಿಲ್ಲದಿದ್ದರೂ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಮನಸ್ಥಿತಿಯಲ್ಲಿ ವ್ಯತ್ಯಾಸವಿರಬಹುದು. ಆದರೂ, ಕನ್ನಡ ನಟನಾಗಿ ಹೊರಹೊಮ್ಮಿದ ನನಗೆ ಕನ್ನಡದ ಮೇಲೆ ಒಲವು ಸದಾ ಹೆಚ್ಚು ಎಂಬುದು ರಾಜ್ ದೀಪಕ್ ಶೆಟ್ಟಿ ಅವರ ಅಭಿಪ್ರಾಯ.
ಟಾಲಿವುಡ್ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಬರ್ಮಾ' ಚಿತ್ರದಲ್ಲಿ ರಕ್ಷ ಎಂಬ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ನಟ ರಾಜ್ ದೀಪಕ್ ಶೆಟ್ಟಿ. ಸದ್ಯ ಆ ಪಾತ್ರಕ್ಕೆ ಸಜ್ಜಾಗುತ್ತಿರುವ ನಟ ರಾಜ್ ದೀಪಕ್ ಶೆಟ್ಟಿಯವರಿಗೆ ಹೆಚ್ಚಿನ ಫೈಟಿಂಗ್ ಸೀನ್ಗಳು ಅಷ್ಟು ಇಷ್ಟವಿಲ್ಲವಂತೆ.

ಈ ಬಗ್ಗೆ ಮಾತನಾಡಿದ ರಾಜ್ ದೀಪಕ್ ಶೆಟ್ಟಿ "ನನಗೆ ಫೈಟಿಂಗ್ ಮಾಡಿ ವಿಲನ್ ಆಗಿ ಕಾಣಿಸಿಕೊಳ್ಳುವ ಬದಲು ನನ್ನ ಹಾವ ಭಾವ ಮಾತಿನ ಮೂಲಕ ನನ್ನ ರೋಲ್ ಅನ್ನು ಜನರಿಗೆ ತಲುಪಿಸುವ ಆಸೆ ಇದೆ. ನಿರ್ದೇಶಕ ಚೇತನ್ ಕುಮಾರ್ ಅವರಂತೂ ಖಳನಾಯಕ ಪಾತ್ರಗಳನ್ನು ಹೆಣೆಯುವಲ್ಲಿ ಬಹಳ ಖ್ಯಾತಿ ಪಡೆದಿದ್ದಾರೆ. ಹಾಗಾಗಿ ಅವರ ಕೈಯಲ್ಲಿ ನನ್ನ ಪಾತ್ರವೂ ಅಚ್ಚುಕಟ್ಟಾಗಿ ಜನರನ್ನು ತಲುಪುತ್ತದೆ ಎಂಬ ಹಂಬಲದಲ್ಲಿದ್ದೇನೆ" ಎಂದು ರಾಜ್ ದೀಪಕ್ ಶೆಟ್ಟಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ.


Click it and Unblock the Notifications











