ಹೊಸ ಪಾತ್ರದೊಂದಿಗೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿ ಸಾಲಿಯಾನ್: ಈ ನಟನ ಹಿನ್ನೆಲೆಯೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿನಿವಾಸ'ವೂ ಒಂದು. ಕೌಟುಂಬಿಕ ಕಥಾಹಂದರವನ್ನೊಳಗೊಂಡ 'ಲಕ್ಷ್ಮಿ ನಿವಾಸ' ಧಾರಾವಾಹಿಯು ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಿಪ್ಪ ಧಾರಾವಾಹಿಯಲ್ಲಿ ಇದೀಗ ಹೊಸ ಪಾತ್ರದ ಆಗಮನವಾಗಿದೆ.
ಹೌದು, ಜಯಂತ್ನ ಸ್ನೇಹಿತ ಸಚಿನ್ ಎನ್ನುವ ಹೊಸ ಪಾತ್ರದ ಆಗಮನವಾಗಿದ್ದು, ಸಚಿನ್ ಆಗಿ ರವಿ ಸಾಲಿಯಾನ್ ಬಣ್ಣ ಹಚ್ಚುತ್ತಿದ್ದಾರೆ. ಜಯಂತ್, ವೆಂಕಿ ಮತ್ತು ಸಚಿನ್ ಬಾಲ್ಯದ ಸ್ನೇಹಿತರಾಗಿದ್ದು ಅವರು ಮೂವರು ಒಂದೇ ಆಶ್ರಮದಲ್ಲಿ ಬೆಳೆದವರು. ದೂರ ದೇಶದಲ್ಲಿರುವ ಸಚಿನ್ ತನ್ನ ಗೆಳೆಯ ಜಯಂತ್ನ ಜೊತೆಗೆ ಸಮಯ ಕಳೆಯುವುದಕ್ಕಾಗಿ ಬಂದಿರುತ್ತಾನೆ. ಸಚಿನ್ ಅನ್ನು ಕಂಡ ಜಯಂತ್ಗೆ ಆತಂಕವಾಗುತ್ತದೆ. ಎಲ್ಲಿ ಸಚಿನ್ ತನ್ನ ಹಳೆಯ ವಿಚಾರಗಳನ್ನು ಮಡದಿ ಜಾಹ್ನವಿಗೆ ಹೇಳುತ್ತಾನೋ ಎನ್ನುವ ಭಯದಿಂದ ಸಚಿನ್ ಅನ್ನು ಮತ್ತೆ ಹೊರದೇಶಕ್ಕೆ ಕಳುಹಿಸುವ ಆಲೋಚನೆ ಮಾಡುತ್ತಾನೆ ಜಯಂತ್.

"ತುಂಬಾ ಸಮಯದ ನಂತರ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಒಂದು ವರ್ಷದ ಹಿಂದೆ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಾಹ್ಮಿನ್ಸ್ ಕೆಫೆ' ಧಾರಾವಾಹಿಯಲ್ಲಿ ನಾನು ಅಭಿನಯಿಸಿದ್ದೆ. ಆದಾದ ಬಳಿಕ ನಾನು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದೀಗ ಸಚಿನ್ ಆಗಿ ಮತ್ತೆ ಕಿರುತೆರೆಗೆ ಮರಳಿದ್ದು, ಒಂದು ಒಳ್ಳೆಯ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ಖುಷಿಯಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ನಟ ರವಿ ಸಾಲಿಯಾನ್ ಹಂಚಿಕೊಂಡಿದ್ದಾರೆ.
"ಜಯಂತ್ನ ಫ್ರೆಂಡ್ ಪಾತ್ರವೆಂದಾಗ ಹೆಚ್ಚಿನವರು ಅತಿಥಿ ಪಾತ್ರ ಎಂದೇ ಅಂದುಕೊಳ್ಳುತ್ತಾರೆ. ಆದರೆ, ಸಚಿನ್ ಪಾತ್ರ ಹಾಗಲ್ಲ. ಇದು ಕಂಟಿನ್ಯೂ ಆಗುವಂತಹ ಪಾತ್ರ. ಜಯಂತ್ ಸದ್ಯಕ್ಕೆ ಸಚಿನ್ ಅನ್ನು ದೂರದೇಶಕ್ಕೆ ಕಳುಹಿಸುವ ಪ್ಲಾನ್ ಮಾಡುತ್ತಿರುತ್ತಾನೆ. ಜೊತೆಗೆ ಮಡದಿಯ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಕೂಡಾ ಸಚಿನ್ ತಲೆಗೆ ತುಂಬಿಸುತ್ತಾನೆ ಜಯಂತ್. ಒಟ್ಟಿನಲ್ಲಿ ಸಚಿನ್ನ ಆಗಮನದಿಂದ ಧಾರಾವಾಹಿಯ ಕಥೆಗೆ ಹೇಗೆ ಟ್ವಿಸ್ಟ್ ಕೊಡುತ್ತಾನೆ ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ತಿಳಿಯಲಿದೆ" ಎಂದು ಹೇಳಿಕೊಂಡಿದ್ದಾರೆ ರವಿ ಸಾಲಿಯಾನ್.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾಂಜಲಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡಿರುವ ರವಿ ಸಾಲಿಯಾನ್ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ಮುಂದೆ 'ಶಾಂತಂ ಪಾಪಂ'ನ ನಾಲ್ಕು ಎಪಿಸೋಡ್ಗಳಲ್ಲಿ ಅಭಿನಯಿಸಿರುವ ರವಿ ಸಾಲಿಯಾನ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು.
ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿದ ರವಿ ಸಾಲಿಯಾನ್ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿಯೂ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಿದರು. 'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿರುವ ರವಿ ಸಾಲಿಯಾನ್ ಕೊನೆಯದಾಗಿ ಅಭಿನಯಿಸಿದ್ದು 'ಬ್ರಾಹ್ಮಿನ್ಸ್ ಕೆಫೆ' ಯಲ್ಲಿ. ಇದೀಗ 'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ಸಚಿನ್ ಆಗಿ ನಟಿಸುತ್ತಿರುವ ರವಿ ಸಾಲಿಯಾನ್ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ.


Click it and Unblock the Notifications











