ಕೈ ಮುಗಿದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೇಕೆ ಧಾರಾವಾಹಿ ನಟ ಸುಬ್ಬು ಸಿರಿಮನೆ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಅನೇಕ ಪಾತ್ರಗಳು ಕಿರುತೆರೆ ಪ್ರೇಕ್ಷಕರ ಮನೆಗೆದ್ದಿವೆ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟ ಸುಬ್ಬು ಸಿರಿಮನೆ ಅವರು ಇತ್ತೀಚಿಗೆ ಪೊಲೀಸರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಅವರು ಮನವಿ ಮಾಡಿಕೊಳ್ಳಲು ಕಾರಣ, ಕಳೆದು ಹೋಗಿರುವ ಮೊಬೈಲ್ ಗಾಗಿ. ಹೌದು, ಇತ್ತೀಚಿಗೆ ಸುಬ್ರಹ್ಮಣ್ಯ ಸಿರಿಮನೆ ತನ್ನ ಮೊಬೈಲ್ ಕಳೆದಕೊಂಡಿದ್ದಾರೆ. ಇತ್ತೀಚಿಗೆ ಮೊಬೈಲ್ ಕಳ್ಳತನ ಜಾಸ್ತಿ ಆಗುತ್ತಿದೆ, ಅವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. 'ಇದು ನನ್ನದೊಬ್ಬನ ಸಮಸ್ಯೆ ಅಲ್ಲ. ಅನೇಕರ ಮೊಬೈಲ್ ಕಳ್ಳತನವಾಗಿದೆ ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು' ಎಂದು ವಿಡಿಯೋ ಮೂಲಕ ಸುಬ್ರಹ್ಮಣ್ಯ ಅವರು ಪೊಲಿಸರಲ್ಲಿ ಮನವಿ ಮಾಡಿದ್ದಾರೆ.

ಗಾಂಧಿಬಜಾರ್-ಬಸವನಗುಡಿ ವ್ಯಾಪ್ತಿಯ ಪೊಲೀಸರಲ್ಲಿ ಮನವಿ
'ಬೆಂಗಳೂರು, ಗಾಂಧಿಬಜಾರ್ ಬಸವನಗುಡಿ ವ್ಯಾಪ್ತಿಯಲ್ಲಿ ಬರುವ ಪೊಲೀಸರಲ್ಲಿ ನನ್ನೊಂದು ಮನವಿ. ಇದು ನನ್ನದೊಬ್ಬನ ಮನವಿ ಅಲ್ಲ. ದಿನಕ್ಕೆ ಹತ್ತಾರು ಜನ ಮೊಬೈಲ್ ಗಳನ್ನು ಕಳ್ಳರು ಕದಿಯುತ್ತಿದ್ದಾರೆ. ಅವರನ್ನು ಹಿಡಿಯ ಬೇಕು, ಸರಿಯಾದ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.

ಶೂಟಿಂಗ್ ಮುಗಿಸಿ ಮನೆಗೆ ಹೋಗುವಾಗ ನಡೆದ ಘಟನೆ
'ನಿನ್ನೆ ಶೂಟಿಂಗ್ ಮುಗಿತು, ಮನೆ ದೂರ ಇರುವುದರಿಂದ ಓಲಾ ಬುಕ್ ಮಾಡುತ್ತ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದೆ. 1 ನಿಮಿಷ ಇತ್ತು ಅಷ್ಟೆ, ಅಷ್ಟೊತ್ತಿಗೆ ವಯಸ್ಸಾದ ಹೆಂಗಸು ನನ್ನ ಬಳಿ ಬಂದು ತುಂಬಾ ಚೆನ್ನಾಗಿ ಅಭಿನಯ ಮಾಡುತ್ತೀರಿ ಎಂದು ಮಾತನಾಡುತ್ತಿದ್ದರು. ಒಬ್ಬ ನಿಧಾನವಾಗಿ ಬಂದು ನನ್ನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಹೋದ. ಕಾಸು ಇದೆ, ಆದರೆ ಮನೆಗೆ ಹೋಗಲು ಗಾಡಿ ಇಲ್ಲ.

ನನ್ನ ಜೀವನವೇ ಮೊಬೈಲ್ ನಲ್ಲಿದೆ
'ನಾನು ಪ್ರತಿಯೊಂದನ್ನು ಫೋನ್ ಅನ್ನೇ ನಂಬಿಕೊಂಡಿದ್ದೇನೆ. ನನ್ನ ಜೀವನವೇ ಆ ಮೊಬೈಲ್ ನಲ್ಲಿದೆ. ಭಿಕ್ಷೆ ಬೇಡಿ ಯಾರಾದರು ಹಣ ಕೊಡುತ್ತಾರೆ. ಆದರೆ ಕಲಾವಿದರ ಮೊಬೈಲ್ ಕದಿಯಬೇಡಿ. ಇವತ್ತು ಮೊಬೈಲ್ ದೇಹದ ಒಂದು ಅಂಗವಾಗಿದೆ. ಪತ್ನಿ ನಂಬರ್ ಕೂಡ ಯಾರಿಗೂ ಗೊತ್ತಿರಲ್ಲ. ಅರದಲ್ಲೇ ಇರುತ್ತೆ' ಬೇಸರದಿಂದ ಹೇಳಿದ್ದಾರೆ.

ಅನೇಕರ ಮೊಬೈಲ್ ಕಳ್ಳತನವಾಗಿದೆ
'ನಮ್ಮ ಶೂಟಿಂಗ್ ನಲ್ಲಿ ಕೆಲಸ ಮಾಡುವ ಅನೇಕರ ಮೊಬೈಲ್ ಕದ್ದಿದ್ದಾರೆ. ಅಕ್ಕಪಕ್ಕದ ಮನೆಯವರೂ ಇದೇ ಹೇಳುತ್ತಾರೆ. ಸಾರ್ವಜನಿಕರು ಸಹ ಎಚ್ಚರಿಕೆ ಇಂದ ಇರಿ. ದಯಮಾಡಿ ಪೊಲೀಸರು ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಅಂತ ಕೇಳಿಕೊಳ್ಳುತ್ತೇನೆ' ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.


Click it and Unblock the Notifications