ಸಿನಿಮಾದಿಂದ ದೂರ ಉಳಿದಿದ್ದಾಗ ಕ್ಲಾಸ್ ಹೀರೊ, ಮಾಸ್ ಹೀರೋ ಬಗ್ಗೆ ಗೊತ್ತಾಗಿದ್ದೇನು? ಏನಂತಾರೆ ಸುನೀಲ್ ರಾವ್
ನಟ ಸುನೀಲ್ ರಾವ್ ಯಾರಿಗೆ ತಾನೇ ನೆನಪಿಲ್ಲ ಹೇಳಿ! 'ಎಕ್ಸ್ ಕ್ಯೂಸ್ ಮಿ' ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದ ನಟ ಸುನೀಲ್ ರಾವ್ ಇದೀಗ ಮತ್ತೆ ಸಿನಿಮಾ ಇಂಡಸ್ಟ್ರಿ ಕಡೆಗೆ ಕಾಲಿಟ್ಟಿರುವುದು ವಿಶೇಷ. ಹೌದು, ನಟಿ ರಮ್ಯಾ ಸೇರಿದಂತೆ ಹಲವು ಖ್ಯಾತ ನಟಿಯರೊಂದಿಗೆ ನಟಿಸಿ ಜೈ ಎನಿಸಿಕೊಂಡ ನಟ ಸುನೀಲ್ ರಾವ್ ಮಧ್ಯದಲ್ಲಿ ಸಿನಿ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ಮತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆಗೆ ಬಂದಿರುವವರು ಇದೀಗ ಒಳ್ಳೆಯ ಕಥಾವಸ್ತುವಿನ ಬೆನ್ನು ಹತ್ತಿದ್ದಾರೆ ಎಂದರೆ ತಪ್ಪಾಗಲ್ಲ.
ಈ ಬಗ್ಗೆ ಸ್ವತಃ ಸುನೀಲ್ ರಾವ್ ಅವರೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಳ್ಳೊಳ್ಳೆಯ ಕಥಾವಸ್ತು ಇರುವ ಸಿನಿಮಾಗಳು ಇದೀಗ ಹೆಚ್ಚು ಹೆಚ್ಚು ಬರುತ್ತಿವೆ. ಹಾಗಾಗಿ ನಾನು ಸಿನಿಮಾ ಇಂಡಸ್ಟ್ರಿ ಕಡೆಗೆ ವಾಪಸ್ ಬಂದಿದ್ದೇನೆ. ಖ್ಯಾತ ನಟರಾದ ನಟಿ ರಮ್ಯಾ, ನಟ ಅಜಯ್ ರಾವ್ ಅವರೊಂದಿಗೆ ನಟಿಸಿದ್ದ 'ಎಕ್ಸ್ ಕ್ಯೂಸ್ ಮಿ' ಸಿನಿಮಾ ನನಗೆ ಬಹಳಷ್ಟು ಖ್ಯಾತಿಯನ್ನು ಕೊಟ್ಟಿತು. ಅದಾದ ಮೇಲೆ ನಾನು ಮಾಸ್ ಹೀರೋ ಆಗಿ ಜನರ ಮುಂದೆ ಕಾಣಿಸಿಕೊಳ್ಳಬೇಕೆಂಬ ನಿರೀಕ್ಷೆಯಲ್ಲಿದ್ದೆ" ಎಂದು ಸುನೀಲ್ ರಾವ್ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ಒಂದಷ್ಟು ಸಿನಿಮಾಗಳಲ್ಲಿ ಸಿಕ್ಕ ಕಮರ್ಷಿಯಲ್ ಯಶಸ್ಸಿನ ನಂತರ ನಾನೇ ಸಿನಿಮಾದಿಂದ ಒಂದು ದೊಡ್ಡ ಬ್ರೇಕ್ ಪಡೆದು ದೂರ ನಡೆದೆ. ಆಗ ನನಗೆ ಒಂದಷ್ಟು ವಿಚಾರಗಳು ಸ್ಪಷ್ಟವಾದವು. ಕ್ಲಾಸ್ ಅಥವಾ ಮಾಸ್ ಹೀರೋ ಆಗುವ ಬದಲು ಕಥಾವಸ್ತು ಚೆನ್ನಾಗಿರುವ ಸಿನಿಮಾಗಳಲ್ಲಿ ನಟಿಸಿದರೇನೇ ನನ್ನ ನಟನೆಯ ನಟನಾ ತಾಕತ್ತು ಪ್ರೇಕ್ಷಕರಿಗೆ ತಿಳಿಯೋದು ಎಂಬ ಅರಿವು ಮೂಡಿದೆ. ಇದೀಗ 2022ರ ನಂತರ ಮತ್ತೆ ನಾನು ಸಿನಿಮಾ ಇಂಡಸ್ಟ್ರಿ ಕಡೆಗೆ ಕಾಲಿಟ್ಟಿದ್ದೇನೆ. " ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ನಟ ಸುನೀಲ್ ರಾವ್.
ತಮ್ಮ ಕಂಬ್ಯಾಕ್ ಬಗ್ಗೆಯೂ ಮುಕ್ತವಾಗಿ ಮಾತನಾಡಿರುವ ನಟ ಸುನೀಲ್ ರಾವ್ "ತುರ್ತು ನಿರ್ಗಮನ ಸಿನಿಮಾ ಕಥೆ ಕೇಳಿದಾಗ ನನಗೆ ಕಥೆ ತುಂಬಾ ಹಿಡಿಸಿತು. ಅದಕ್ಕೂ ಮೊದಲು ನಾನು ಲೂಸ್ ಕನೆಕ್ಷನ್ ಎಂಬ ವೆಬ್ ಸೀರೀಸ್ ಅನ್ನು ಮಾಡಿದಾಗ ಹೊಸ ಹೊಸ ಕ್ರಿಯಾಶೀಲ ಅವಕಾಶಗಳ ಅನಾವರಣವಾಗಿತ್ತು. ಈಗಂತೂ ನಾನು ಒಳ್ಳೆಯ ಕಥಾವಸ್ತುವಿಗೆ ಹೆಚ್ಚಿನ ಫೋಕಸ್ ನೀಡಲಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.
ಸದ್ಯಕ್ಕೆ 'ಮರ್ಯಾದೆ ಪ್ರಶ್ನೆ' ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದನ್ನು ಮಾಡುತ್ತಿರುವ ನಟ ಸುನಿಲ್ ರಾವ್ ಈ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. "ನಾಗರಾಜ್ ಸೋಮಯಾಜಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾ ನನಗೆ ಬಹಳ ಇಷ್ಟವಾಗಿರುವಂತಹ ಕಥೆಯನ್ನು ಹೊಂದಿದೆ. ಇದರ ನಿರ್ದೇಶಕರು ಕೂಡ ತುಂಬಾ ಒಳ್ಳೆಯ ತಾರಾಗಣವನ್ನು ಆರಿಸಿಕೊಂಡಿದ್ದಾರೆ. ನಟರಾದ ಶೈನ್ ಶೆಟ್ಟಿ, ತೇಜು ಬೆಳವಾಡಿ, ಪ್ರಭು ಮುಂದ್ಕರ್, ರಾಜೇಶ್ ಅಡಿಗ, ಹಾಗೂ ಹಿರಿಯ ಕಲಾವಿದರಾದ ನಾಗೇಂದ್ರ ಷಾ, ರೇಖಾ ಕೂಡ್ಲಿಗಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ" ಎಂದಿದ್ದಾರೆ.
"ದೊಡ್ಡ ಬಜೆಟ್ ಸಿನಿಮಾಗಳು ಸಿನಿ ಇಂಡಸ್ಟ್ರಿಗೆ ಅವಶ್ಯಕ. ಅಂತೆಯೇ ಚಿಕ್ಕ ಚಿಕ್ಕ ಬಜೆಟ್ನ ಸ್ವಾವಲಂಬಿ ಸಿನಿಮಾಗಳು ಕೂಡ ಸಿನಿ ಇಂಡಸ್ಟ್ರಿಗೆ ಬಹು ಮುಖ್ಯ. ಈ ಸ್ವಾವಲಂಬಿ ಸಿನಿಮಾಗಳು ಒಳ್ಳೊಳ್ಳೆಯ ಕಥಾವಸ್ತುಗಳನ್ನು ಇಟ್ಟುಕೊಂಡು ಮುಂಬರುವ ಪ್ರೇಕ್ಷಕರು ಇದನ್ನು ವೀಕ್ಷಿಸಿ ಇಂತಹ ಕಥೆಗಳಿಗೆ ಕಂಟೆಂಟ್ಗೆ ಸಹಕಾರ ನೀಡಬೇಕಾಗಿರುವುದು ಅತ್ಯವಶ್ಯಕ. ಸದ್ಯಕ್ಕಂತೂ ನಾನು ಈ ರೀತಿಯ ಹೊಸ ಹೊಸ ಕಾಂಟೆಂಟ್ನ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಿದ್ದೇನೆ" ಎಂದು ಹಂಚಿಕೊಂಡಿದ್ದಾರೆ ನಟ ಸುನೀಲ್ ರಾವ್.


Click it and Unblock the Notifications











