ತಾರಕ್ ಪೊನ್ನಪ್ಪ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಿಂದ ಹೊರಬಂದಿದ್ದೇಕೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಬಹಳಷ್ಟು ಜನಪ್ರಿಯತೆ ಪಡೆದಿದೆ. ಪ್ರಸ್ತುತ ಧಾರಾವಾಹಿಯಲ್ಲಿ ರೇಣುಕೆಯ ತಂದೆ ರೇಣು ಮಹಾರಾಜನ ಪಾತ್ರದಲ್ಲಿ ತಾರಕ್ ಹೊನ್ನಪ್ಪ ಇದುವರೆಗೂ ಪಾತ್ರ ನಿರ್ವಹಿಸಿದ್ದರು. ಆದರೆ ಈಗ ತಾರಕ್ ಹೊನ್ನಪ್ಪ ಅವರು ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ.
ಹೌದು, 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಆರಂಭವಾದಾಗಿನಿಂದಲೂ ತಾರಕ್ ಪೊನ್ನಪ್ಪ ಅವರು ರೇಣು ಮಹಾರಾಜನ ಪಾತ್ರವನ್ನು ನಿರ್ವಹಿಸಿದ್ದರು. ಅವರ ಘನತೆ ಗಾಂಭೀರ್ಯ ಅದ್ಭುತ ನಟನೆಗೆ ಜನರು ಖುಷಿಪಟ್ಟಿದ್ದರು.ಆದರೆ ಈಗ ಬೇರೆ ಕೆಲಸಗಳ, ಕಮಿಟ್ಮೆಂಟ್ ಗಳಿರುವುದರಿಂದ ತಾರಕ್ ಪೊನ್ನಪ್ಪ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ಇನ್ನು ಮುಂದೆ ರೇಣು ಮಹಾರಾಜನ ಪಾತ್ರವನ್ನು ನಟ ಹರೀಶ್ ಪ್ರಭಾತ್ ನಿಭಾಯಿಸಲಿದ್ದಾರೆ. ನಟ ಹರೀಶ್ ಪ್ರಭಾತ್ ಕೂಡ ತಮ್ಮ ನಟನೆ ಹಾಗೂ ಪಾತ್ರಕ್ಕೆ ಬೇಕಾದ ಗಾಂಭೀರ್ಯದಿಂದ ಪಾತ್ರವನ್ನು ಚೆನ್ನಾಗಿ ಪೋಷಿಸುವ ಪಣತೊಟ್ಟಿದ್ದಾರೆ.ಇನ್ನು ತಾರಕ್ ಪೊನ್ನಪ್ಪ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ತಾರಕ್ ಪೊನ್ನಪ್ಪ ಎಂ.ಟೆಕ್ ಪದವೀಧರ ಹೌದು.
ಪದವಿ ಮುಗಿದದ್ದೇ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ತಾರಕ್ ಪೊನ್ನಪ್ಪ ಒಂದಷ್ಟು ಫ್ಯಾಷನ್ ಇವೆಂಟ್ಗಳಲ್ಲಿ ಕಾಣಿಸಿಕೊಂಡರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ತಾರಕ್ ಪೊನ್ನಪ್ಪ ಬಣ್ಣದ ಲೋಕದ ಪಯಣಕ್ಕೆ ಮುನ್ನುಡಿಯಾಗಿದ್ದು ಹಿರಿತೆರೆ. 'ಅಜರಾಮರ' ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಇವರು ಮುಂದೆ 'ಬೃಹಸ್ಪತಿ' ಸಿನಿಮಾದಲ್ಲಿ ನಟಿಸಿದ್ದಾರೆ.

ಮುಂದೆ 'ಕೆಜಿಎಫ್' ಸಿನಿಮಾದಲ್ಲಿ ಗ್ಯಾಂಗ್ಸ್ಟರ್ ಆಗಿ ಅಭಿನಯಿಸಿದ ತಾರಕ್ 'ಮೋಕ್ಷ', 'ಯುವರಾಜ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಮೋಡಿ ಮಾಡಿದ ತಾರಕ್ ಪೊನ್ನಪ್ಪ ಮತ್ತೆ ಕಿರುತೆರೆಗೂ ಕಾಲಿಟ್ಟರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ನಟಿಸಿದ್ದ ತಾರಕ್ ತೆಲುಗು ಕಿರುತೆರೆಯಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ತೆಲುಗಿನ 'ರಾವೋಯಿ ಚಂದಮಾಮ' ಧಾರಾವಾಹಿಯಲ್ಲಿ ಖಳನಾಯಕನಾಗಿ ಅಬ್ಬರಿಸಿದ ಇವರು ರೇಣು ಮಹಾರಾಜನಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.


Click it and Unblock the Notifications











