ಪಾರ್ವತಿಯ ಲವ್ವರ್ ಸಿದ್ಧಾರ್ಥ್ ಯಾರಂತ ರಿವೀಲ್ ಆಯ್ತು; 'ಅಣ್ಣಯ್ಯ' ಸೀರಿಯಲ್ಗೆ ಎಂಟ್ರಿ ಕೊಟ್ಟ ಹೊಸ ನಟನ ಹಿನ್ನೆಲೆಯೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಣ್ಣಯ್ಯ' ಧಾರಾವಾಹಿಯೂ ಒಂದು. 'ಅಣ್ಣಯ್ಯ' ಧಾರಾವಾಹಿಯಲ್ಲಿ ವಿಕಾಸ್ ಉತ್ತಯ್ಯ ನಾಯಕ ಶಿವನಾಗಿ ನಟಿಸಿದ್ದರೆ, ನಾಯಕಿ ಪಾರ್ವತಿಯಾಗಿ ನಿಶಾ ರವಿಕೃಷ್ಣನ್ ಬಣ್ಣ ಹಚ್ಚುತ್ತಿದ್ದಾರೆ.
ಇದೀಗ ಈ ಧಾರಾವಾಹಿಯಲ್ಲಿ ಹೊಸ ಪಾತ್ರದ ಆಗಮನವಾಗಿದೆ. ಹೌದು, ಡಾಕ್ಟರ್ ಆಗಿರುವ ನಾಯಕಿ ಪಾರ್ವತಿ ಸಿದ್ದಾರ್ಥ್ ಎನ್ನುವ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಇಷ್ಟರವರೆಗೆ ನಾಯಕಿ ಒಬ್ಬನನ್ನು ಪ್ರೀತಿಸುತ್ತಿರುತ್ತಾಳೆ ಎನ್ನುವ ವಿಚಾರವಷ್ಟೇ ಹೊರಬಿದ್ದಿದೆ. ಆದರೆ, ಇದೀಗ ನಾಯಕಿಯ ಪ್ರಿಯಕರ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ನಾಯಕಿ ಪಾರ್ವತಿ ಮನಸಾರೆ ಪ್ರೀತಿಸುವ ಹುಡುಗನ ಹೆಸರು ಸಿದ್ಧಾರ್ಥ್. ಅಂದ ಹಾಗೇ ಸಿದ್ಧಾರ್ಥ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ಬಂದಿರುವ ಹುಡುಗನ ಹೆಸರು ವಿವೇಕ್ ಸಿಂಹ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜನುಮದ ಜೋಡಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ವಿವೇಕ್ ಸಿಂಹ ಅವರು ರಂಗಭೂಮಿ ಕಲಾವಿದ ಹೌದು.
ಬಾಲ್ಯದಲ್ಲಿ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ವಿವೇಕ್ ಸಿಂಹ ಕಲೆಯ ವಿವಿಧ ಪ್ರಕಾರಗಳಾದ ಡೊಳ್ಳು ಕುಣಿತ, ವೀರಾಗಾಸೆ, ಕಂಸಾಳೆಯನ್ನು ಕಲಿತಿದ್ದಾರೆ.
ನಂತರ ಒಂದು ವರ್ಷಗಳ ಕಾಲ ರಂಗಾಯಣದಲ್ಲಿ ನಾಟಕದ ಕುರಿತ ಕೋರ್ಸ್ ಅನ್ನು ಕಲಿತಿದ್ದರು. ರಂಗಾಯಣದ ಕೋರ್ಸ್ ಮುಗಿದದ್ದ ತಡ, ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಮೂಡಿ ಬಂದ 'ಜನುಮದ ಜೋಡಿ' ಧಾರಾವಾಹಿಯಲ್ಲಿ ನಾಯಕನಾಗಿ ಕಿರುತೆರೆಗೆ ಕಾಲಿಟ್ಟ ವಿವೇಕ್ ಸಿಂಹ ಆ ಪಾತ್ರದ ಮೂಲಕ ಮಿಂಚಿದರು.
ರಾಘು ಶಿವಮೊಗ್ಗ ಅವರ ನಿರ್ದೇಶನದ 'ಚೂರಿಕಟ್ಟೆ' ಸಿನಿಮಾದಲ್ಲಿ ನಾಯಕನ ಗೆಳೆಯನಾಗಿ ನಟಿಸಿರುವ ಇವರು ಮತ್ತೆ ಕಿರುತೆರೆಗೆ ಮರಳಿದ್ದು ಖಳನಾಯಕನಾಗಿ. 'ಮಹಾದೇವಿ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಇವರು ನಂತರ ಹಾರಿದ್ದು ಸಿನಿಮಾಗೆ. ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಜಗ್ಗೇಶ್ ಮಗನಾಗಿ ಮೋಡಿ ಮಾಡಿದರು.

ಮುಂದೆ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತನಾಗಿ ನಟಿಸುವ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು ವಿವೇಕ್ ಸಿಂಹ. ತದ ನಂತರ ಕಾರಣಾಂತರಗಳಿಂದ ಆ ಪಾತ್ರಕ್ಕೆ ವಿದಾಯ ಹೇಳಿದ ವಿವೇಕ್ ಸಿಂಹ ಹಾರರ್ ಸಿನಿಮಾ 'ಸ್ಫೂಕಿ ಕಾಲೇಜ್' ನಲ್ಲೂ ಅಭಿನಯಿಸಿದ್ದಾರೆ.


Click it and Unblock the Notifications











