ಗಾಯಕನಾಗುವ ಆಸೆಯಿಂದ ಬಂದು ನಟನಾದ ಯಶವಂತ್ ಕಿರುತೆರೆ ಪಯಣ
ನಟನೆಗೆ ಭಾಷೆ ಇಲ್ಲ ಎಂಬ ಮಾತನ್ನು ಹಲವರು ಹೇಳುತ್ತಾರೆ. ಅದು ಸತ್ಯವೂ ಹೌದು. ಕೆಲವು ಚಲನಚಿತ್ರಗಳು ಕೂಡ ಭಾಷೆ ಬಾರದಿದ್ದರೂ, ಉತ್ತಮ ಕಥೆ ಹಾಗೂ ನಟನೆಯ ಮೂಲಕವೇ ಫೇಮಸ್ ಆಗಿ ಹಿಟ್ ಆಗಿ ಬಿಡುತ್ತವೆ.
ಕೆಲ ಧಾರಾವಾಹಿಗಳು ಕೂಡ ಅಷ್ಟೇ ವರ್ಷಾನುಗಟ್ಟಲೇ ಎಲ್ಲರ ಬಾಯಲ್ಲಿ ಉಳಿಯುವಂತಿರುತ್ತವೆ. ಇನ್ನು ಕಿರುತೆರೆ ನಟ-ನಟಿಯರು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಹೋಗುವುದು ಸಾಮಾನ್ಯ.
ಅದರಲ್ಲೂ ಹೆಚ್ಚಾಗಿ ಕನ್ನಡ ಕಿರುತೆರೆಯಲ್ಲಿ ಒಂದು ಧಾರಾವಾಹಿಗಳಲ್ಲಿ ನಟಿಸಿ, ಒಳ್ಳೆಯ ಪಾತ್ರ ಸಿಕ್ಕಿತೆಂದು ತೆಲುಗು, ತಮಿಳು ಭಾಷೆಗೆ ಹಾರಿ ಬಿಡುತ್ತಾರೆ. ಇದು ಕಾಲದಿಂದಲೂ ನಡೆದುಕೊಂಡು ಬಂದಿದೆ.

'ಅಮ್ಮಾಯಿಗಾರು' ಧಾರಾವಾಹಿ ನಾಯಕ
ಕನ್ನಡದ ನಟ-ನಟಿಯರು ತೆಲುಗು ಕಿರುತೆರೆಗೆ ಹೋಗುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಕನ್ನಡದಲ್ಲಿ 'ಗಟ್ಟಿಮೇಳ' ಧಾರಾವಾಹಿಯ ನಿಶಾ ರವಿಕೃಷ್ಣನ್ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಅದಾಗಲೇ ತೆಲುಗಿನ ಎರಡು ಧಾರಾವಾಹಿಯಲ್ಲಿ ಮಿಂಚಿದ್ದಾರೆ. ಇವರಷ್ಟೇ ಅಲ್ಲದೇ, ಇನ್ನು ಸಾಕಷ್ಟು ಮಂದಿ ಇಂಡಸ್ಟ್ರಿಯಲ್ಲಿದ್ದಾರೆ. ಇನ್ನು 'ಕನ್ಯಾಕುಮಾರಿ' ಧಾರಾವಾಹಿಯ ನಾಯಕ ನಟ ಯಶವಂತ್ ಕೂಡ ತೆಲುಗಿನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಅದೂ ಕೂಡ ನಿಶಾ ರವಿಕೃಷ್ಣನ್ ಅವರ ಜೋಡಿಯಾಗಿ 'ಅಮ್ಮಾಯಿಗಾರು' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಅರ್ಧಕ್ಕೆ ನಿಂತ ಧಾರಾವಾಹಿ
'ಕನ್ಯಾಕುಮಾರಿ' ಧಾರಾವಾಹಿಯಲ್ಲೂ ಯಶವಂತ್ ಅವರು ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಧಾರಾವಾಹಿ ಕಾರಣಾಂತರಗಳಿಂದ ಕನ್ನಡದಲ್ಲಿ ಅರ್ಧಕ್ಕೆ ನಿಲ್ಲಬೇಕಾಯ್ತು. ಆದರೆ, ಇದೇ ವೇಳೆಗೆ ತೆಲುಗಿನಿಂದ ಯಶವಂತ್ ಅವರಿಗೆ ಆಫರ್ ಬಂದಿತು. ಹಾಗಾಗಿ 'ಅಮ್ಮಾಯಿಗಾರು' ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದರು. ಇನ್ನು ಯಶವಂತ್ ಅವರು ಈ ಧಾರಾವಾಹಿಗೂ ಮುನ್ನ ತೆಲುಗಿನ ಬರೋಬ್ಬರಿ 23 ಧಾರಾವಾಹಿಗಳನ್ನು ರಿಜೆಕ್ಟ್ ಮಾಡಿದ್ದರಂತೆ. ಕನ್ನಡದಲ್ಲೇ ಬ್ಯುಸಿ ಇದ್ದ ಕಾರಣ ತೆಲುಗಿಗೆ ಎಂಟ್ರಿ ಕೊಡಲಿಲ್ಲ. ಕನ್ಯಾಕುಮಾರಿ ಮಗಿದ ಬಳಿಕ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ಗಾಯಕನಾಗುವ ಆಸೆ
ಇನ್ನು ಯಶವಂತ್ ಅವರು ಡಾ. ರಾಜ್ ಕುಮಾರ್ ಅವ ಕಟ್ಟಾ ಅಭಿಮಾನಿಯಂತೆ. ರಾಜ್ ಕುಮಾರ್ ಅವರ ಎಲ್ಲಾ ಹಾಡುಗಳು ಯಶವಂತ್ ಅವರಿಗೆ ಕಂಠ ಪಾಠವಾಗಿದೆಯಂತೆ. ಇವರ ಮನೆಯ ದೇವರ ಫೋಟೋಗಳ ನಡುವೆ ಅಣ್ಣಾವ್ರ ಫೋಟೋ ಕೂಡ ಇದೆಯಂತೆ. ಗಾಯಕನಾಗುವ ಆಸೆ ಹೊಂದಿದ್ದ ಯಶವಂತ್ ಅವರು ಆರ್ಥಿಕ ಪರಿಸ್ಥಿತಿಯಿಂದಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರಂತೆ. ಎಲ್ಲಾದರೂ ಶೂಟಿಂಗ್ ನಡೆಯುತ್ತಿದ್ದರೆ, ಅಲ್ಲಿಗೆ ಹೋಗಿ ಗಂಟೆಗಟ್ಟಲೆ ನಿಂತು ಶೂಟಿಂಗ್ ಅನ್ನು ನೋಡುತ್ತಿದ್ದರಂತೆ. ನಟ ನಟಿಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರಂತೆ.

ರೀಲ್ಸ್ ಮೂಲಕ ಯಶವಂತ್ ಫೇಮಸ್
ಇನ್ನು ಯಶವಂತ್ ಅವರಿಗೆ ಸಿನಿಮಾ ಎಂದರೆ ಹುಟ್ಟು ಪ್ರೀತಿ. ಎಲ್ಲಾ ಚಿತ್ರಗಳನ್ನು ಥಿಯೇಟರ್ ಗೆ ಹೋಗಿ ನೋಡುತ್ತಾರಂತೆ. ಮೊಬೈಲ್ ಯುಗದಲ್ಲಿ ರೀಲ್ಸ್ ಮಾಡುತ್ತಿದ್ದ ಯಶವಂತ್ ಅವರು ಅದ್ಯಾರ ಕಣ್ಣಿಗೆ ಬಿದ್ದರೋ, ಸೀದಾ ಬಂದದ್ದು ಕನ್ಯಾಕುಮಾರಿ ಧಾರಾವಾಹಿ ಸೆಟ್ಗೆ. ಇಲ್ಲಿಂದ ಯಶವಂತ್ ಅವರ ಆಕ್ಟಿಂಗ್ ಕೆರಿಯರ್ ಶುರುವಾಗಿದ್ದು, ಈಗ ತೆಲುಗಿನಲ್ಲಿ ಮುಂದುವರೆದಿದೆ. ಕನ್ನಡದಲ್ಲೂ ಉತ್ತಮ ಪಾತ್ರ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದು ಹೇಳುತ್ತಾರೆ ಯಶವಂತ್. ಅದೇನೇ ಇರಲಿ, ಯಶವಂತ್ ಅವರ ಕನಸುಗಳೆಲ್ಲವೂ ಆದಷ್ಟು ಬೇಗ ನನಸಾಗಲಿ ಎಂದು ಆಶಿಸೋಣ.


Click it and Unblock the Notifications











