ರಾಮಾಚಾರಿಯ ದೀಪಾ ಪಾತ್ರಕ್ಕೆ ವಿದಾಯ ಹೇಳಿದ ನಟಿ ಅಭಿಜ್ಞಾ; ಕಾರಣ ಏನು ಗೊತ್ತೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲೊಂದು. ನಟಿ ಅಭಿಜ್ಞಾ ಅವರು 'ರಾಮಾಚಾರಿ' ಧಾರಾವಾಹಿಯಲ್ಲಿ ದೀಪ ಪಾತ್ರ ಮಾಡುತ್ತಿದ್ದರು. ರಾಮಾಚಾರಿ ಹಾಗೂ ಚಾರು ನಡುವಿನ ಪ್ರೀತಿಯನ್ನು ಸಹಿಸಲಾಗದ, ರಾಮಾಚಾರಿಯನ್ನು ತಾನೇ ಹುಚ್ಚಿಯಂತೆ ಪ್ರೀತಿಸುವ ಅವನ ಅತ್ತೆಯ ಮಗಳು ದೀಪ ಎಂಬ ಪಾತ್ರಕ್ಕೆ ಅಭಿಜ್ಞಾ ಬಣ್ಣ ಹಚ್ಚಿದ್ದರು. ಆದರೆ, ರಾಮಾಚಾರಿ ಹಾಗೂ ಚಾರು ಅವರ ಮದುವೆಯ ನಂತರ ಇದ್ದಕ್ಕಿದ್ದಂತೆ ದೀಪಾ ಪಾತ್ರ ತೆರೆಮರೆಗೆ ಸರಿಯಿತು.
ಹೀಗಿರುವಾಗಲೇ 'ರಾಮಾಚಾರಿ' ಧಾರಾವಾಹಿಯಿಂದ ಹೊರಬಂದಿರುವ ನಟಿ ಅಭಿಜ್ಞಾ ಈ ವಿಚಾರವಾಗಿ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದಾರೆ ನಟಿ ಅಭಿಜ್ಞಾ. "ರಾಮಾಚಾರಿಯಲ್ಲಿ ನನಗೆ ಸಿಕ್ಕ ಪಾತ್ರ ಚೆನ್ನಾಗಿ ಇತ್ತು. ಆದರೆ, ಅಷ್ಟೇನು ಪ್ರಮುಖವಾದ ಪಾತ್ರ ಅದಾಗಿರಲಿಲ್ಲ. ಹೀಗಿರುವಾಗಲೇ ಸ್ಟಾರ್ ಸುವರ್ಣ ವಾಹಿನಿಯಿಂದ ನನಗೊಂದು ಕರೆ ಬಂತು. ಒಂದು ದಿನ 'ಗೌರಿ ಶಂಕರ' ಧಾರಾವಾಹಿಯ ಮ್ಯಾನೇಜರ್ ಕರೆ ಮಾಡಿ ಧಾರಾವಾಹಿಯಲ್ಲಿ ಹೀರೋ ತಂಗಿಯ ಪಾತ್ರಕ್ಕೆ ಆಫರ್ ಕೊಟ್ಟರು. ನಾನು ಎಂಬಿಎ ಮಾಡುತ್ತಿರುವುದರಿಂದ ಎರೆಡೆರಡು ಧಾರಾವಾಹಿಗಳಿಗೆ ಸಮಯ ಸಾಕಾಗುವುದಿಲ್ಲ ಎಂದು ನಿರಾಕರಿಸಿದೆ" ಎಂದು ಆಕೆ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ನಾನು ನಟಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದರೂ ವಾಹಿನಿಯವರು ಯೋಚಿಸಿ ನಿರ್ಧರಿಸಲು ಸಮಯ ಕೊಟ್ಟರು. ಹೀರೋ ತಂಗಿ ಪಾತ್ರವಾದರೂ ಎರಡನೇ ಹೀರೋಯಿನ್ ಅಷ್ಟು ಪ್ರಾಮುಖ್ಯತೆ ಇದೆ ಎಂದರು. ಅದರ ಜೊತೆಗೆ ನಾನು ಸಂಬಳ ಡಿಮ್ಯಾಂಡ್ ಮಾಡಿದೆ. ಅದಕ್ಕೂ ಒಪ್ಪಿದರು. ಹಾಗಾಗಿ ನಾನು ರಾಮಾಚಾರಿ ಧಾರಾವಾಹಿಯಿಂದ ಹೊರಬಂದೆ" ಎಂದು ಅಭಿಜ್ಞಾ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ.
"ಪ್ರತಿಯೊಬ್ಬ ಕಲಾವಿದರಂತೆ ನನಗೂ ಜನರಿಂದ ಗುರುತಿಸಿಕೊಳ್ಳಬೇಕು ಎಂಬ ಆಸೆ ಇದೆ. ರಾಮಾಚಾರಿ ಧಾರಾವಾಹಿಯಲ್ಲಿ ಒಂದಷ್ಟು ಗುರುತಿಸುವಿಕೆ ಸಿಕ್ಕರು ಅದು ಪ್ರಮುಖ ಪಾತ್ರವಾಗದ ಕಾರಣ ಕಥೆ ಹೀರೋ ಹಾಗೂ ಹೀರೋಯಿನ್ ಸುತ್ತಲೇ ಸುತ್ತುತ್ತದೆ. ಹೀಗಿರುವಾಗ ನನ್ನ ಹೊಸ ಧಾರಾವಾಹಿಯಲ್ಲಿ ನನ್ನ ಪಾತ್ರವನ್ನು ಜನರು ಚೆನ್ನಾಗಿ ನೆಚ್ಚಿಕೊಂಡಿದ್ದಾರೆ. ಬೆಳ್ಳುಳ್ಳಿ ಹಾಗೂ ನನ್ನ ಪಾತ್ರವನ್ನು ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಐಶು ಪಾತ್ರ ಇಲ್ಲವಾದರೆ ನಮಗೆ ಬಹಳ ಬೇಸರವಾಗುತ್ತೆ ಎಂದು ಆಗಾಗ ಕಮೆಂಟಿಸುತ್ತಾರೆ. ನನ್ನ ಐಶು ಪಾತ್ರಕ್ಕೆ ಸಿಕ್ಕ ಪಾಪ್ಯುಲಾರಿಟಿ ನನಗೆ ಖುಷಿ ಕೊಟ್ಟಿದೆ" ಎಂದು ತಮ್ಮ ಹೊಸ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ ನಟಿ ಅಭಿಜ್ಞಾ.

ಇದರ ಜೊತೆಗೆ ನಟಿ ಅಭಿಜ್ಞಾಗೆ ತಮಿಳು ಹಾಗೂ ತೆಲುಗು ಧಾರಾವಾಹಿಗಳಂದಲೂ ಆಫರ್ ಬರುತ್ತಿದೆಯಂತೆ. "ನಿಜ ಹೇಳಬೇಕೆಂದರೆ ತಮಿಳು ಹಾಗೂ ತೆಲುಗು ಸೀರಿಯಲ್ಗಳಿಂದಲೂ ಆಫರ್ ಬರುತ್ತಿದೆ. ಸಿನಿಮಾದಿಂದಲೂ ಆಫರ್ಗಳು ಬಂದಿವೆ. ಈ ಹೊಸ ಐಡೆಂಟಿಟಿ ಹಾಗೂ ಪಾಪುಲ್ಯಾರಿಟಿ ನನಗೆ ಬಹಳಷ್ಟು ಸಂತಸ ಕೊಟ್ಟಿದೆ. ರಂಗಭೂಮಿಯಿಂದ ಬಂದವಳು ನಾನು, ಎಷ್ಟೋ ಬಾರಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದಾಗ ಒಬ್ಬಳೇ ಕಣ್ಣೀರು ಹಾಕಿದ್ದುಂಟು. ಇದೀಗ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡು ಜನರು ನನ್ನನ್ನು ಒಪ್ಪಿಕೊಳ್ಳುತ್ತಿರುವುದು ನನಗೆ ಬಹಳ ಸಮಾಧಾನ ತಂದಿದೆ" ಎಂದು ತಮ್ಮ ಕೆರಿಯರ್ನ ಬಗ್ಗೆಯೂ ಆಕೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅಭಿಜ್ಞಾ ಮಾತನಾಡಿಕೊಂಡಿದ್ದಾರೆ.


Click it and Unblock the Notifications











