ವೋಟಿಂಗ್ ಎಲ್ಲಾ ಬೋಗಸ್: ಬಿಗ್ ಬಾಸ್ ವಿರುದ್ಧ 'ಕರಿಯ' ಚಿತ್ರದ ನಾಯಕಿ ಗಂಭೀರ ಆರೋಪ!
ಬಿಗ್ ಬಾಸ್ ಭಾರತೀಯ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ. ಎಲ್ಲಾ ವರ್ಗದ ಪ್ರೇಕ್ಷಕರ ಗಮನ ಸೆಳೆದಿರುವ ಬಿಗ್ ಬಾಸ್ ರಿಯಾಟಿಲಿ ಶೋ ಆಯೋಜಕರ ಆಲೋಚನೆಯಂತೆ ನಡೆಯುತ್ತದೆ, ವೋಟಿಂಗ್, ಆಟ ಇವೆಲ್ಲವೂ ಹೆಸರಿಗಷ್ಟೇ ಎನ್ನುವ ಬಗ್ಗೆ ಮೊದಲಿನಿಂದಲೂ ಕೆಲವರಿಗೆ ಅನುಮಾನವಿದೆ. ಈ ಬಗ್ಗೆ ಹಲವು ಬಾರಿ ಬಿಗ್ ಬಾಸ್ನಿಂದ ಹೊರ ಬಂದ ಸ್ಫರ್ಧಿಗಳನ್ನು ಕೇಳಲಾಗಿತ್ತು. ಆದರೆ ಯಾವುದೇ ಸ್ಫರ್ಧಿ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಮೊದಲು ಹಿಂದಿಯಲ್ಲಿ ಆರಂಭವಾದ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ ಕನ್ನಡ, ತಮಿಳು, ತೆಲುಗಿನಲ್ಲೂ ಪ್ರಸಾರವಾಗುತ್ತಿದೆ. ಕನ್ನಡ ಬಿಗ್ ಬಾಸ್ ಸೀಸನ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, 18 ಸ್ಫರ್ಧಿಗಳು ಹೊಸದಾಗಿ ಆಟ ಆರಂಭಿಸಿದ್ದಾರೆ. ಸದ್ಯ ಎಲ್ಲಾ ಭಾಷೆಯಲ್ಲೂ ಸೂಪರ್ ಹಿಟ್ ಆಗಿ ಪ್ರಸಾರಗೊಳ್ಳುತ್ತಿರುವ ಬಿಗ್ ಬಾಸ್ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಫರ್ಧಿಯೊಬ್ಬರು ಆರೋಪಿಸಿದ್ದಾರೆ.
ಕನ್ನಡ, ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಅಭಿನಯಶ್ರೀ ತೆಲುಗು ಬಿಗ್ ಬಾಸ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತೆಲುಗು ಬಿಗ್ ಬಾಸ್ ಸೀಸನ್ 6 ಸದ್ಯ ಪ್ರಸಾರಗೊಳ್ಳುತ್ತಿದ್ದು, ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರವನ್ನು ಬಹಳ ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ. ಈ ಬಾರಿ ವಿವಿಧ ರೀತಿಯ ಸ್ಫರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ಬಿಡಲಾಗಿತ್ತು. ಅದರಲ್ಲಿ ಅಭಿನಯಶ್ರೀ ಕೂಡ ಒಬ್ಬರು.

ತೆಲುಗು ಬಿಗ್ ಬಾಸ್ ಸೀಸನ್ 6ರ ಆರಂಭದಿಂದಲೂ ಉತ್ತಮ ಆಟ ಆಡಿದ್ದ ಅಭಿನಯಶ್ರೀ 14 ದಿನಗಳಿಗೆ ಬಹುಬೇಗ ಎಲಿಮಿನೇಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಡೆದ ಸಂದರ್ಶವೊಂದರಲ್ಲಿ ನಟಿ ಬಿಗ್ ಬಾಸ್ ಬಗ್ಗೆ ಆರೋಪ ಮಾಡಿದ್ದಾರೆ. ತೆಲುಗು ಬಿಗ್ ಬಾಸ್ ಸೀಸನ್ 6ರಲ್ಲಿ ನಾನು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನಾನಿದ್ದ ಸನ್ನಿವೇಶಗಳನ್ನು ಕಟ್ ಮಾಡಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ನನ್ನ ತಾಯಿ ಮನವಿ ಮಾಡಿದರೂ ಸಹ ಅವರು ಕೇಳಲಿಲ್ಲ. ಬಿಗ್ ಬಾಸ್ ಆಯೋಜಕರ ನಿರ್ಮಾಪಕರ ಮೆಚ್ಚಿನ ಸ್ಫರ್ಧಿಗಳನ್ನು ಉಳಿಸಿಕೊಂಡಿದ್ದಾರೆ. ಮತ್ತು ಇತರ ಸ್ಫರ್ಧಿಗಳನ್ನು ಅನ್ಯಾಯವಾಗಿ ಹೊರಹಾಕಲಾಗುತ್ತಿದೆ. ಬಿಗ್ ಬಾಸ್ ಆಯೋಜಕರು ತಮಗೆ ಬೇಕಾದವರನ್ನು ಉಳಿಸಿಕೊಂಡಾಗ,ಸ್ಫರ್ಧಿಗಳ ಆಟ ಮೆಚ್ಚಿ ಅಭಿಮಾನಿಗಳು ಮಾಡಿದ ವೋಟಿಂಗ್ ಬೋಗಸ್ ಆಗುತ್ತದೆ ಎಂದು ತೆಲುಗು ಬಿಗ್ ಬಾಸ್ ಸೀಸನ್ 6ರ ವಿರುದ್ಧ ಕಿಡಿಕಾರಿದ್ದಾರೆ.
ಸದ್ಯ ತೆಲುಗು ಬಿಗ್ ಬಾಸ್ ಸೀಸನ್ 6 ಬಗ್ಗೆ ಅಭಿನಯಶ್ರೀ ಆರೋಪ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿಯ ಅಭಿಮಾನಿಗಳು ಕೂಡ ಬಿಗ್ ಬಾಸ್ ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ. ಬಿಗ್ ಬಾಸ್ ರಿಯಾಲಿಶೋ ಆಯೋಜಕರ ಆಲೋಚನೆಯಂತೆ ನಡೆಯುತ್ತದೆ. ಹಾಗೂ ಅವರ ಟಿಆರ್ಪಿಗಾಗಿ ಅವರಿಗೆ ಬೇಕಾದ ಸ್ಫರ್ಧಿಗಳನ್ನು ಬಳಸಿಕೊಂಡು ಶೋ ಮಾಡುತ್ತಾರೆ ಎನ್ನುವ ಹಲವರ ಆರೋಪಕ್ಕೆ ಬಿಗ್ ಬಾಸ್ ಮಾಜಿ ಸ್ಫರ್ಧಿ ನಟಿ ಅಭಿನಯಶ್ರೀ ಪುಷ್ಟಿಕೊಟ್ಟಿದೆ.
ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿರುವ ಅಭಿನಯಶ್ರೀ ಹಿರಿಯ ನಟಿ ಅನುರಾಧ ಅವರ ಹಿರಿಯ ಪುತ್ರಿ. ನೃತ್ಯ ಸಂಯೋಜಕಿಯಾಗಿರುವ ಅಭಿನಯಶ್ರೀ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು. ತಮಿಳಿನ ದಳಪತಿ ವಿಜಯ್ ಹಾಗೂ ಸೂರ್ಯ ಅಭಿನಯದ ಫ್ರೆಂಡ್ಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅಭಿನಯಶ್ರೀ ಮೊದಲ ಸಿನಿಮಾದಲ್ಲೇ ಹೆಚ್ಚಿನ ಜನಪ್ರಿಯತೆ ಪಡೆದರು. ತಮಿಳು, ತೆಲುಗಿನ ಅನೇಕ ಚಿತ್ರದಲ್ಲಿ ನಟಿಸಿದ್ದ ಅವರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ಮಿಂಚಿದ್ದರು. ಸದ್ಯ ನಟನೆಯಿಂದ ಅಭಿನಯಶ್ರೀ ಅಂತರ ಕಾದುಕೊಂಡಿದ್ದಾರೆ.


Click it and Unblock the Notifications











