ಒಂದೇ ತರಹದ ಆಫರ್ಗಳಿಂದ ಬೇಸತ್ತು ಹೊಸ ಹೆಜ್ಜೆ ಇಡಲು ಹೊರಟ ಐಶಾನಿ ಶೆಟ್ಟಿ!
ನಟಿ ಐಶಾನಿ ಶೆಟ್ಟಿ ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಹೊಂದಿಸಿ ಬರೆಯಿರಿ', 'ನಡುವೆ ಅಂತರವಿರಲಿ', 'ವಾಸ್ತು ಪ್ರಕಾರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಗಳಲ್ಲಿಯೂ ಈಕೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದುವರೆಗೂ ನಟಿಯಾಗಿ ಮಿಂಚಿರುವ ನಟಿ ಐಶಾನಿ ಶೆಟ್ಟಿ ಅವರು ಇದೀಗ ನಿರ್ದೇಶನಕ್ಕೆ ಕಾಲಿಡಲಿದ್ದಾರೆ. ಹೌದು, ನಟಿ ಐಷಾನಿ ಶೆಟ್ಟಿಯವರು ನಿರ್ದೇಶನದ ಮೂಲಕ ತಮ್ಮೂರಿನ ಕಥೆಯನ್ನು ಹೇಳ ಹೊರಟಿದ್ದಾರಂತೆ.

ತಮ್ಮ ಈ ಹೊಸ ನಿರ್ಧಾರದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು "ಪ್ರತಿಯೊಬ್ಬ ಕಲಾವಿದನಿಗೂ ತಾನು ಬೇರೆ ಬೇರೆ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಇರುತ್ತದೆ. ಅಂತೆಯೇ ನನಗೂ ಕೂಡ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇದೆ. ಆದರೆ, ಕ್ರಮೇಣ ನಮಗೆ ಒಂದೇ ರೀತಿಯ ಪಾತ್ರಗಳನ್ನು ಆಫರ್ ಮಾಡಲು ಆರಂಭಿಸಿದಾಗ ಆಯ್ಕೆ ಕಷ್ಟವಾಗುತ್ತದೆ. ಹಾಗಾಗಿ ನಿರ್ದೇಶನದತ್ತ ಮುಖ ಮಾಡಿದೆ" ಎಂದು ಹೇಳಿಕೊಂಡಿದ್ದಾರೆ.
"ನಮ್ಮೂರಿನ ಕಥೆಯನ್ನು ಹೇಳಿ ವಿಭಿನ್ನ ಪಾತ್ರಗಳ ಸೃಷ್ಟಿಯ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿರ್ದೇಶನದ ಪ್ಲಾನ್ ಬಹಳ ಮೊದಲಿನಿಂದಲೇ ಇತ್ತು. ಇತ್ತೀಚೆಗೆ ಒಂದಷ್ಟು ಹಿತೈಷಿಗಳು ಈ ವಿಚಾರವಾಗಿ ತುಂಬಾ ಉತ್ತೇಜನ ನೀಡಿದ್ದಾರೆ.ಹಾಗಾಗಿ ಈ ಹೊಸ ಕೆಲಸಕ್ಕೆ ಕೈ ಹಾಕಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹಂಚಿಕೊಂಡಿದ್ದಾರೆ.
"ನನಗೆ ನಮ್ಮೂರಿನ ಕತೆ, ಜನರನ್ನು ಪಾತ್ರಗಳ ಮೂಲಕ ತೆರೆ ಮೇಲೆ ತರುವ ಆಸೆ ಇದೆ. ಈ ನನ್ನ ಹೊಸ ಸಿನಿಮಾ ಕಥೆ ಫೈನಲ್ ಡ್ರಾಫ್ಟ್ ರೆಡಿ ಆಗಿದೆ. ನಾನೇ ಇದರಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಕಥೆಗೆ ನಾಯಕ ಅಥವಾ ನಾಯಕಿ ಇಲ್ಲ. ಕಥೆಯೇ ಮುಖ್ಯ ವಸ್ತು." ಎಂದು ತಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ ನಟಿ ಐಶಾನಿ ಶೆಟ್ಟಿ.

ನಟ ನಟಿಯರು ನಿರ್ದೇಶನಕ್ಕೆ ಕೈ ಹಾಕುತ್ತಿರುವುದು ಇದೀಗ ಹೊಸ ಟ್ರೆಂಡ್ ಆಗಿದೆ. ಈ ಸಾಲಿಗೆ ನಟಿ ಐಶಾನಿ ಶೆಟ್ಟಿ ಅವರು ಕೂಡ ಸೇರಲಿದ್ದಾರೆ. ಇವರ ಕಥೆ ಹಾಗೂ ನಿರ್ದೇಶನವನ್ನು ಜನ ಹೇಗೆ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











