"ನನ್ನ ಯಶಸ್ಸಿಗೆ ನಾನು ಮಾಡಿದ ಆಯ್ಕೆಗಳೇ ಕಾರಣ" ಎಂದ ರಾಮಾಚಾರಿ ನಟಿ: ಇವರ ಹಿನ್ನೆಲೆಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ರಾಮಾಚಾರಿ' ಯೂ ಒಂದು. ಕೆಎಸ್ರಾಮ್ ಜೀ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯು ಕಥಾಹಂದರದ ಹೊರತಾಗಿ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ.
ಇನ್ನು 'ರಾಮಾಚಾರಿ' ಧಾರಾವಾಹಿಯಲ್ಲಿ ಐಶ್ವರ್ಯ ವಿನಯ್ ಅವರು ಖಳನಾಯಕಿ ವೈಶಾಖಾಳಾಗಿ ನಟಿಸುತ್ತಿದ್ದಾರೆ. ಕುತಂತ್ರಿಯಾಗಿರುವ ವೈಶಾಖಾ ಮನೆಯನ್ನು ಒಡೆಯುವುದು ಹೇಗೆ ಎಂದು ಸಂಚು ಮಾಡುತ್ತಿರುತ್ತಾಳೆ. ಇದರ ನಡುವೆ ವೈಶಾಖಾ ಬಾವಿಗೆ ಬೀಳುವ ಸೀನ್ ಇತ್ತೀಚೆಗಷ್ಟೇ ಪ್ರಸಾರವಾಗಿತ್ತು.

ಕಿರುತೆರೆ ವೀಕ್ಷಕರಿಗೆ ಬಾವಿಗೆ ಬೀಳುವ ದೃಶ್ಯವಷ್ಟೇ ಕಣ್ಣಿಗೆ ಕಾಣಿಸುತ್ತದೆ. "ಬಿದ್ದವಳು ಒಳ್ಳೆಯವಳಾಗಿದ್ದಾಳೆ", "ಅಯ್ಯೋ ಎಂದು ಮನಸ್ಸು ಮರುಗುತ್ತಿದೆ", "ಅದೇ ಕೆಟ್ಟವರು, ಅನ್ಯಾಯ ಮಾಡಿದವರಂತೂ ಬಿದ್ದರೆ ಕೇಳುವುದೇ ಬೇಡ", "ಅವರಿಗೆ ಹಾಗೇ ಆಗಬೇಕಿತ್ತು", "ಮಾಡಿದ ಕರ್ಮವನ್ನು ಅನುಭವಿಸುತ್ತಾರೆ, ಬೇಕಿತ್ತಾ ಇದೆಲ್ಲ" ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತದೆ.
ಆದರೆ, ಆ ಬಾವಿಗೆ ಬೀಳುವ ದೃಶ್ಯಕ್ಕಾಗಿ ಧಾರಾವಾಹಿ ತಂಡದವರು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಅದಕ್ಕಾಗಿ ಅವರು ಸಾಕಷ್ಟು ತಯಾರಿಗಳನ್ನು ಕೂಡಾ ಮಾಡುತ್ತಾರೆ. ಅದನ್ನು ರಾಮ್ ಜೀ ಟಾಕೀಸ್ ಆಫೀಶಿಯಲ್ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ ಲೋಡ್ ಕೂಡಾ ಮಾಡಿದ್ದಾರೆ. ವೈಶಾಖಾ ಬಾವಿಗೆ ಬೀಳುವ ದೃಶ್ಯದ ಚಿತ್ರೀಕರಣಕ್ಕಾಗಿ ಕ್ರೇನ್ ಅನ್ನು ಬಳಸಿದ್ದಾರೆ. ಕ್ರೇನ್ನಲ್ಲಿ ವೈಶಾಖಾರನ್ನು ಹ್ಯಾಂಗ್ ಮಾಡುತ್ತಾರೆ. ಅದರಿಂದ ನೀರಿಗೆ ಬೀಳುವಂತೆ ಕಾಣುತ್ತದೆ. ಆದರೆ ಆಕೆ ನೀರಿನ ಕೆಳಗೆ ಹೋಗುವುದಿಲ್ಲ.
ಇದರ ಜೊತೆಗೆ ಮತ್ತೊಂದು ಮುಖ್ಯವಾದ ವಿಚಾರವೆಂದರೆ ವೈಶಾಖಾ ತಾನು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವ ಸಲುವಾಗಿ ಗುಂಡಿ ತೆಗೆದು, ದೇಹವನ್ನು ಮಣ್ಣಿನಲ್ಲಿ ಹೂತುಹಾಕಿ, ಕುತ್ತಿಗೆ ಮಾತ್ರ ಹೊರಗೆ ಕಾಣುವಂತೆ ಇಡೀ ದಿನ ಇರುತ್ತಾಳೆ. ಅದು ಕೂಡಾ ಅಷ್ಟೇ. ಗುಂಡಿಯಲ್ಲಿ ಒಂದು ಸ್ಟೂಲ್ ಇಡುತ್ತಾರೆ. ಅದರ ಮೇಲೆ ವೈಶಾಖಳನ್ನು ಕೂರಿಸುತ್ತಾರೆ. ಅವಳ ಸುತ್ತ ದಪ್ಪನೆಯ ಹಲಗೆಗಳನ್ನು ಇಡುತ್ತಾರೆ.
ಆಕೆಯ ದೇಹಕ್ಕೆ ತಕ್ಕಂತೆ ಹಲಗೆಗಳನ್ನು ಕತ್ತರಿಸಿ ಮುಚ್ಚಲಾಗುತ್ತದೆ. ನಂತರ ಹಾಕಿರುವ ಆ ಹಲಗೆಗಳ ಮೇಲೆ ಮಣ್ಣು ಹಾಕುತ್ತಾರೆ. ಆವ ವೈಶಾಖ ಮೇಲೆ ಮಣ್ಣು ಬೀಳುವುದಿಲ್ಲ. ಜೊತೆಗೆ ಈ ಮಣ್ಣನ್ನು ತುಂಬಾ ತೆಳುವಾಗಿ ಹಾಕಲಾಗುತ್ತದೆ. ಧಾರಾವಾಹಿ ವೀಕ್ಷಕರಿಗೆ ಮಾತ್ರ ವೈಶಾಖಳನ್ನು ಹೂತು ಹಾಕುವಂತೆ ತೋರಿಸುತ್ತಾರೆ. ಇದರ ಜೊತೆಗೆ ವೈಶಾಖಾ ಮುಖಕ್ಕೆ ಸಗಣಿ ಬಳಿದು ಭಿಕ್ಷೆ ಬೇಡುವ ಸಂಚಿಕೆಯೂ ಕೂಡಾ ಪ್ರಸಾರವಾಗಿತ್ತು.
ಇನ್ನು ವೈಶಾಖಾ ಪಾತ್ರಧಾರಿ ಐಶ್ಚರ್ಯಾ ವಿನಯ್ ಅವರೇ ವಾರಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಕೂಡಾ ಮನ ಸೆಳೆಯುತ್ತಿದೆ. "ಕೃತಜ್ಞತೆಯ ಪೋಸ್ಟ್, ನಾನು ಪದಗಳಿಗೆ ಮೀರಿ ಕೃತಜ್ಞಳಾಗಿದ್ದೇನೆ. ನಾನು ಈ ವೃತ್ತಿಯನ್ನು ಆರಿಸಿಕೊಂಡಿದ್ದಕ್ಕೆ ಹೆಮ್ಮೆಯಿದೆ. ನನ್ನ ನಟನೆಯ ಪ್ರಯಾಣ ಯಾವತ್ತೂ ಸುಗಮವಾಗಿರಲಿಲ್ಲ. ಅನೇಕ ಏರಿಳಿತಗಳು ಕಂಡಿದ್ದೇನೆ. ನನ್ನ ವೃತ್ತಿ ಬದುಕಿನ ಪ್ರತಿಯೊಂದು ಸಮಯದಲ್ಲೂ ನಾನು ಮಾಡಿದ ಆಯ್ಕೆಗಳೇ ನನಗೆ ಇಲ್ಲಿಯವರೆಗೂ ಬರುವುದಕ್ಕೆ ಸಹಾಯ ಮಾಡಿದೆ. ಇಂದು ಇಲ್ಲಿ ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ವೀಕ್ಷಕರಿಂದ ಮೆಚ್ಚುಗೆಯನ್ನು ಪಡೆಯುತ್ತಿದ್ದೇನೆ. ನನಗೆ ಯಾವುದೇ ರೀತಿಯ ವಿಷಾದವಿಲ್ಲ. ಎಲ್ಲದಕ್ಕೂ ಕೃತಜ್ಞರಾಗಿರುತ್ತೇನೆ" ಎಂದು ಆಕೆ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಖಳನಾಯಕಿ ವೈಶಾಖಾ ಆಗಿ ಐಶ್ವರ್ಯಾ ವಿನಯ್ ನಟಿಸುತ್ತಿದ್ದರೂ, ತಮ್ಮ ಸಹಜ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. 'ರಾಮಾಚಾರಿ' ಧಾರಾವಾಹಿಯ ಹೊರತಾಗಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿಯೂ ಈಕೆ ಪ್ರಿಯಾ ಆಗಿ ನಟಿಸುತ್ತಿದ್ದು, ಅಲ್ಲೂ ಖಳನಾಯಕಿಯಾಗಿ ಕಮಾಲ್ ಮಾಡುತ್ತಿದ್ದಾರೆ. 'ಮಹಾಸತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು ಐಶ್ವರ್ಯಾ ವಿನಯ್. ಮುಂದೆ 'ಸರಯೂ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಈಕೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ತನು ಪಾತ್ರದಲ್ಲಿ ಅಭಿನಯಿಸಿದ್ದರು.


Click it and Unblock the Notifications











