'ಕಥೆಯೊಂದು ಶುರುವಾಗಿದೆ' ಎಂದಿದ್ದ ಅಕ್ಷತಾ ದೇಶಪಾಂಡೆ ಈಗ 'ಚಿಕ್ಕೆಜಮಾನಿ'; ಈ ಹೊಸ ಧಾರಾವಾಹಿ ಎಲ್ಲಿ ನೋಡಬಹುದು?
'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಕೃತಿ ಪಂಡಿತ್ ಪಾತ್ರದಲ್ಲಿ ನಟಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿರುವ ನಟಿ ಅಕ್ಷತಾ ದೇಶಪಾಂಡೆ. ಇದೀಗ ಈ ನಟಿ 'ಚಿಕ್ಕೆಜಮಾನಿ'. ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಚಿಕ್ಕೆಜಮಾನಿ' ಧಾರಾವಾಹಿಯಲ್ಲಿ ಕಾವೇರಿ ಪಾತ್ರದಲ್ಲಿ ನಟಿಸುವ ಮೂಲಕ ಅಕ್ಷತಾ ದೇಶಪಾಂಡೆ ಕಿರುತೆರೆಗೆ ಮರಳುತ್ತಿದ್ದಾರೆ. 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಅಕ್ಷತಾ ಇದೀಗ ಕಾವೇರಿಯಾಗಿ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ.
ಈಗಾಗಲೇ ಧಾರಾವಾಹಿಯ ಪ್ರೋಮೋವೊಂದನ್ನು ಉದಯ ಟಿವಿ ರಿಲೀಸ್ ಮಾಡಿದ್ದು, ಅದನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ ಈ ಧಾರಾವಾಹಿ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಮೂಡಿದೆ. ಒಟ್ಟಿನಲ್ಲಿ ಮತ್ತೊಮ್ಮೆ ತಮ್ಮ ನೆಚ್ಚಿನ ನಟಿಯನ್ನು ತೆರೆ ಮೇಲೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

"ನಿಮ್ಮ ಪ್ರೀತಿಯ ಅಕ್ಷತಾ ಇನ್ನು ಮುಂದೆ ಕಾವೇರಿಯಾಗಿ ನಿಮ್ಮ ಮುಂದೆ ಬರ್ತಿದ್ದೇನೆ. ಹೆಣ್ಣು ಮಕ್ಕಳು ಎಂದರೆ ಜವಾಬ್ದಾರಿ, ಕೇರ್ ಇರುವವರು, ಕನ್ಸರ್ನ್ ಇರುವವರು ಅಂಥ ಹೇಳ್ತಾರೆ. ಸೋ, ನಾನು ಈ ಪಾತ್ರದಲ್ಲಿ ಅದೇ ಒಂದು ಕೇರ್ನ, ಎಮೋಶನ್ನ ನನ್ನ ಫ್ಯಾಮಿಲಿ ಜೊತೆಗೆ ಶೇರ್ ಮಾಡ್ತಾ ಇದ್ದೀನಿ. ಈ ಚಿಕ್ಕೆಜಮಾನಿ ಎನ್ನುವುದು ಏನು ಎಂಬ ಪ್ರಶ್ನೆ ಎಲ್ಲರಿಗೂ ಬಂದೇ ಬಂದಿರುತ್ತೆ. ನಾನು ನನ್ನ ಮನೆ ಯಜಮಾನಿ ಅಂತೂ ಅಲ್ಲ. ನಮ್ಮ ಮನೆಗೆ ಅಪ್ಪ ಅಮ್ಮನೇ ಯಜಮಾನ ಯಜಮಾನಿ ಆಗಿರ್ತಾರೆ. ನಾನು ಯಾರ ಮನೆಗೆ ಯಜಮಾನಿಯಾಗಿ ಹೋಗ್ತೀನಿ, ಹೇಗೆ ಹೋಗ್ತೀನಿ ಎನ್ನುವುದೇ ನಮ್ಮ ಸೀರಿಯಲ್ನ ಕಾನ್ಸಪ್ಟ್. ತುಂಬಾ ಇಷ್ಟಪಟ್ಟು ಕಾವೇರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ" ಎಂದು ಅಕ್ಷತಾ ದೇಶಪಾಂಡೆ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ "ಇಷ್ಟು ದಿನಗಳ ಕಾಲ ನನ್ನನ್ನು ಬೇರೆ ಬೇರೆ ಪಾತ್ರದ ಮೂಲಕ ನೀವು ತೆರೆಯ ಮೇಲೆ ನೋಡಿದ್ದೀರ. ಇದು ಕೂಡಾ ಅಷ್ಟೇ, ತುಂಬಾ ಡಿಫರೆಂಟ್ ಆಗಿರುವಂತಹ ಪಾತ್ರ. ನನಗಂತೂ ತುಂಬಾ ಖುಷಿಯಿದೆ. ನೀವು ಕೂಡಾ ಅಷ್ಟೇ, ಧಾರಾವಾಹಿ ನೋಡಿ, ಪ್ರೀತಿ ಬೆಂಬಲ ನೀಡಿ" ಎಂದು ಹೇಳಿಕೊಂಡಿದ್ದಾರೆ.

'ಕಥೆಯೊಂದು ಶುರುವಾಗಿದೆ' ಧಾರಾವಾಹಿಯ ನಾಯಕಿ ಕೃತಿ ಆಗಿ ಮೋಡಿ ಮಾಡಿರುವ ಅಕ್ಷತಾ ದೇಶಪಾಂಡೆ ನಂತರ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಕಾಣಿಸಿಕೊಂಡಿಲ್ಲ ಎಂದರೆ ತಪ್ಪಾಗಲಾರದು. 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಮುಕ್ತಾಯಗೊಂಡಿದ್ದೇ, ಅಕ್ಷತಾ ಹಾರಿದ್ದು ತೆಲುಗು ಕಿರುತೆರೆಗೆ.
ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿನ್ನು ಕೋರಿ' ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕಿ ಚಂದ್ರಕಲಾ ಆಗಿ ಅಭಿನಯಿಸಿದ್ದರು ಅಕ್ಷತಾ ದೇಶಪಾಂಡೆ. ಅಂದ ಹಾಗೇ ಅಕ್ಷತಾ ಅವರು ತೆಲುಗು ಕಿರುತೆರೆಯಲ್ಲಿ ನಟಿಸುವ ಮೊದಲು ತಮಿಳು ಧಾರಾವಾಹಿಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಹೌದು, ತಮಿಳಿನ 'ಅನಾಮಿಕ' ಎನ್ನುವ ಧಾರಾವಾಹಿಯಲ್ಲಿ ಆಕೆ ಬಣ್ಣ ಹಚ್ಚಿದ್ದರು.
ಇನ್ನು ಅಕ್ಷತಾ ದೇಶಪಾಂಡೆ ಅವರ ನಟನಾ ಪಯಣ ಶುರುವಾಗಿದ್ದು 'ಅಮೃತವರ್ಷಿಣಿ' ಧಾರಾವಾಹಿಯ ಮೂಲಕ. 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಅಮೃತಾ ಮತ್ತು ವರ್ಷ ಎನ್ನುವ ದ್ವಿಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ ಈಕೆ ನಂತರ ನಟಿಸಿದ್ದು ಅಪರ್ಣಾಳಾಗಿ. 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕಿ ಅಪರ್ಣಾಳಾಗಿ ಅಭಿನಯಿಸಿದ ಈಕೆ ಮುಂದೆ ಕಾಣಿಸಿಕೊಂಡಿದ್ದು ಅಂಜಲಿಯಾಗಿ.
'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಅಂಜಲಿಯಾಗಿ ಅಭಿನಯಿಸಿದ್ದ ಸುಶ್ಮಿತಾ ಭಟ್ ಅವರು ಮುಂದೆ ಕಾರಣಾಂತರಗಳಿಂದ ಆ ಪಾತ್ರಕ್ಕೆ ವಿದಾಯ ಹೇಳಿದ್ದರು. ಆಗ ಅಕ್ಷತಾ ಅವರು ಆ ಪಾತ್ರಕ್ಕೆ ಆಯ್ಕೆಯಾಗಿದ್ದು ಅಂಜಲಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದರು. ಇದೀಗ 'ಚಿಕ್ಕೆಜಮಾನಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಲಿರುವ ಅಕ್ಷತಾ ಕಾವೇರಿ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುತ್ತಾರಾ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











